ಯುಪಿ ಚುನಾವಣೆ: ಹಸ್ತಿನಾಪುರ ಕ್ಷೇತ್ರದಿಂದ ನಟಿ ಅರ್ಚನಾ ಗೌತಮ್ರನ್ನು ಕಣಕ್ಕಿಳಿಸಿದ ಕಾಂಗ್ರೆಸ್
ಮೀರತ್, ಜನವರಿ 15: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮೀರತ್ ಜಿಲ್ಲೆಯ ಹಸ್ತಿನಾಪುರ ಕ್ಷೇತ್ರದಿಂದ ನಟಿ ಮತ್ತು ಬಿಕಿನಿ ಮಾಡೆಲ್ ಸ್ಪರ್ಧೆಯ ವಿಜೇತೆ ಅರ್ಚನಾ ಗೌತಮ್ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. 2021ರ ನವೆಂಬರ್ಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ ಅರ್ಚನಾ ಗೌತಮ್ಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.
ಫೆಬ್ರವರಿ 10ರಿಂದ ಉತ್ತರಪ್ರದೇಶದಲ್ಲಿ ಏಳು ಹಂತಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಗುರುವಾರ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಪಟ್ಟಿಯಲ್ಲಿ 50 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.
ಈ ಕುರಿತು ಶುಕ್ರವಾರ ಎಎನ್ಐ ಜೊತೆ ಮಾತನಾಡಿದ ನಟಿ-ಮಾಡೆಲ್ ಅರ್ಚನಾ ಗೌತಮ್, ಹಸ್ತಿನಾಪುರ ಕ್ಷೇತ್ರದಲ್ಲಿ ಗೆದ್ದರೆ, ಅಭಿವೃದ್ಧಿ ಕಾರ್ಯಗಳು ಮತ್ತು ಪ್ರವಾಸೋದ್ಯಮದ ಪ್ರಚಾರದ ಮೇಲೆ ಮುಖ್ಯ ಗಮನ ಹರಿಸಲಾಗುವುದು ಎಂದು ಹೇಳಿದರು.
"ಹಸ್ತಿನಾಪುರ ಪ್ರವಾಸಿ ಸ್ಥಳವಾಗಿದ್ದು, ಸಾಕಷ್ಟು ಪುರಾತನ ದೇವಾಲಯಗಳಿವೆ. ಆದರೆ ಸರಿಯಾದ ಸಾರಿಗೆ ಸಂಪರ್ಕವಿಲ್ಲದ ಕಾರಣ, ಜನರು ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ನಾನು ಶಾಸಕಿಯಾಗಿ ಮೊದಲು ಸಾರಿಗೆ ಸಂಪರ್ಕಕ್ಕಾಗಿ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನು ನಿರ್ಮಿಸುತ್ತೇನೆ. ಏಕೆಂದರೆ ಯಾವಾಗ ಇಲ್ಲಿ ಪ್ರವಾಸೋದ್ಯಮ ಹೆಚ್ಚುತ್ತದೆಯೋ, ಆಗ ಜನರಿಗೆ ಉದ್ಯೋಗ ಸಿಗುತ್ತದೆ ಎಂದ ಅವರು, ಮುಂದೆ ರೈತರ ಪರವೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.
"ಪ್ರತಿ ವರ್ಷವೂ ಅತಿವೃಷ್ಟಿಯಿಂದ ಬೆಳೆಗಳು ಹಾನಿಯಾಗುತ್ತಿದ್ದು, ನಾನು ಈ ವಿಷಯವನ್ನು ರಾಜ್ಯ ವಿಧಾನಸಭೆಗೆ ಕೊಂಡೊಯ್ಯುವ ಕೆಲಸ ಮಾಡುತ್ತೇನೆ. ಇಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇದೆ ಮತ್ತು ಇದರಿಂದ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರ ಸಮಯವನ್ನು ಉಳಿಸಲು ನಾನು ಇನ್ನಷ್ಟು ಸಕ್ಕರೆ ಕಾರ್ಖಾನೆಗಳನ್ನು ತೆರೆಯಲಾಗುವುದು,'' ಎಂದು ತಿಳಿಸಿದರು.
ತನ್ನ ಬಿಕಿನಿ ಚಿತ್ರಗಳ ವೈರಲ್ ಕುರಿತು ಮಾತನಾಡಿದ ಅರ್ಚನಾ ಗೌತಮ್, ಉದ್ಯಮದಲ್ಲಿನ ವೃತ್ತಿಯನ್ನು ತನ್ನ ರಾಜಕೀಯ ವೃತ್ತಿಜೀವನದೊಂದಿಗೆ ವಿಲೀನಗೊಳಿಸದಂತೆ ಜನರನ್ನು ಒತ್ತಾಯಿಸಿದರು. "ನಾನು ಮಿಸ್ ಬಿಕಿನಿ 2018ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ನಾನು ಮಿಸ್ ಉತ್ತರ ಪ್ರದೇಶ 2014 ಮತ್ತು ಮಿಸ್ ಕಾಸ್ಮೊ ವರ್ಲ್ಡ್ 2018 ಸ್ಪರ್ಧಿಸಿದ್ದೇನೆ. ನಾನು ಮಾಧ್ಯಮ ಉದ್ಯಮದಲ್ಲಿನ ನನ್ನ ವೃತ್ತಿಯನ್ನು ರಾಜಕೀಯ ವೃತ್ತಿಯೊಂದಿಗೆ ವಿಲೀನಗೊಳಿಸದಂತೆ ಜನರನ್ನು ವಿನಂತಿಸುತ್ತೇನೆ," ಎಂದು ಹೇಳಿದ್ದಾರೆ.
ಹಸ್ತಿನಾಪುರವು ಮಹಾಭಾರತದ ಕಾಲದ ಐತಿಹಾಸಿಕ ಭೂಮಿಯಾಗಿದೆ. ಮಹಾಭಾರತದ ಕಾಲದಲ್ಲಿ ಹಸ್ತಿನಾಪುರ ಪಾಂಡವರ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ರಾಜಕೀಯವಾಗಿ ಹೇಳುವುದಾದರೆ, ಹಸ್ತಿನಾಪುರ ಕ್ಷೇತ್ರದಲ್ಲಿ ಯಾರ ಅಭ್ಯರ್ಥಿ ಗೆಲ್ಲುತ್ತಾರೋ ಅವರು ರಾಜ್ಯದಲ್ಲಿ ಸರ್ಕಾರ ರಚಿಸುತ್ತಾರೆ ಎಂದೂ ಹೇಳಲಾಗುತ್ತದೆ.
ಉತ್ತರಪ್ರದೇಶ ಚುನಾವಣೆಗೆ 125 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಸೇರಿದಂತೆ 50 ಅಭ್ಯರ್ಥಿಗಳು ಮಹಿಳೆಯರಿದ್ದಾರೆ. ಶಹಜಹಾನ್ಪುರದಿಂದ ಕಾಂಗ್ರೆಸ್ ಆಶಾ ಕಾರ್ಯಕರ್ತೆ ಪೂನಂ ಪಾಂಡೆಯನ್ನು ಕಣಕ್ಕಿಳಿಸಿದೆ, ಅವರು ಗೌರವಧನ ಹೆಚ್ಚಳಕ್ಕಾಗಿ ಆಂದೋಲನದ ನೇತೃತ್ವ ವಹಿಸಿದ್ದರು. ಇನ್ನು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಪತ್ನಿ ಲೂಯಿಸ್ ಖುರ್ಷಿದ್ ಅವರಿಗೂ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.
ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಚುನಾವಣೆ
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಉತ್ತರಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ 30 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಿಂದ ಹೊರಗುಳಿದಿದ್ದು, 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. 403 ಸದಸ್ಯ ಬಲದ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 39.67ರಷ್ಟು ಮತಗಳನ್ನು ಗಳಿಸಿತ್ತು. ಸಮಾಜವಾದಿ ಪಕ್ಷ (ಎಸ್ಪಿ) 47 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಎಸ್ಪಿ 19 ಸ್ಥಾನಗಳನ್ನು ಗೆದ್ದಿತ್ತು ಮತ್ತು ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.