ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಗೆಲುವಿಗೆ ದಲಿತ, ಬ್ರಾಹ್ಮಣರ ಮೇಲಿನ ದಬ್ಬಾಳಿಕೆ ಅಸ್ತ್ರ ಪ್ರಯೋಗ
ಲಕ್ನೋ, ಆಗಸ್ಟ್ 31: ಉತ್ತರ ಪ್ರದೇಶದಲ್ಲಿ 2022ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ರಣತಂತ್ರ ಹಣೆಯುವುದಕ್ಕೆ ಶುರು ಮಾಡಿವೆ. ರಾಜ್ಯದಲ್ಲಿ ಬ್ರಾಹ್ಮಣರು ಮತ್ತು ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನೇ ತನ್ನ ರಾಜಕೀಯ ಅಸ್ತ್ರವಾಗಿ ಪ್ರಯೋಗಿಸುವುದಕ್ಕೆ ಬಹುಜನ ಸಮಾಜ ಪಕ್ಷ ಮುಂದಾಗಿದೆ.
ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವು ತನ್ನದೇ ಆಗಿರುವ ಸೋಷಿಯಲ್ ಇಂಜಿನಿಯರಿಂಗ್ ಸೂತ್ರದ ಮೇಲೆ ಕಾರ್ಯ ನಿರ್ವಹಿಸಲಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲುವುದಕ್ಕೆ ಈ ತಂತ್ರ ಹೆಚ್ಚು ಸಹಾಯಕವಾಗಲಿದೆ ಎಂದು ಬಿಎಸ್ ಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಬೃಹತ್ ಒಬಿಸಿ ಅಭಿಯಾನಕ್ಕೆ ಬಿಜೆಪಿ ಸಜ್ಜು
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಬುದ್ಧ ಸಮ್ಮೇಳನಗಳ ನಂತರ ಈ ಕಾರ್ಯಸೂಚಿಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಲಕ್ನೋದಲ್ಲಿ ಇದ್ದುಕೊಂಡೇ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ ಸಲಹೆ ಸೂಚನೆಯಂತೆ ಬ್ರಾಹ್ಮಣರನ್ನು ಪಕ್ಷದೊಂದಿಗೆ ಸಂಯೋಜಿಸಿಕೊಂಡು ಸತೀಶ್ ಚಂದ್ರ ಮಿಶ್ರಾ ಅವರು ಪ್ರಬುದ್ಧ ಸಮ್ಮೇಳನಗಳನ್ನು ನಡೆಸುತ್ತಾರೆ ಎನ್ನಲಾಗುತ್ತದೆ.
ಏನಿದು ಸೋಷಿಯಲ್ ಇಂಜಿನಿಯರಿಂಗ್ ಸೂತ್ರ:
ಉತ್ತರ ಪ್ರದೇಶದಲ್ಲಿ "ದಲಿತರು ಮತ್ತು ಬ್ರಾಹ್ಮಣರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗಿರುವ" ಸ್ಥಳಗಳಿಗೆ ಬಿಎಸ್ ಪಿ ನಾಯಕರು ಭೇಟಿ ನೀಡುತ್ತಾರೆ. ಸೋಷಿಯಲ್ ಇಂಜಿನಿಯರಿಂಗ್ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರತಿಭಟಿಸುವುದು ಹಾಗೂ ಒಗ್ಗಟ್ಟು ಪ್ರದರ್ಶಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
ಬಹುಜನ ಸಮಾಜ ಪಕ್ಷದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಬ್ರಾಹ್ಮಣರು, ದಲಿತರು ಹಾಗೂ ಮುಸ್ಲೀಮರು ಸಾಕಷ್ಟು ತುಳಿತಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತದ ಬಗ್ಗೆ ಟೀಕಿಸಿರುವ ಬಹುಜನ ಸಮಾಜ ಪಕ್ಷವು ರಾಜ್ಯದಲ್ಲಿ ತುಳಿತಕ್ಕೊಳಗಾದ ಬ್ರಾಹ್ಮಣರು, ದಲಿತರು ಮತ್ತು ಮುಸ್ಲಿಮರ ಬಗ್ಗೆ ಪ್ರಸ್ತಾಪಿಸಿತು. ಇದರ ಜೊತೆಗೆ ಚುನಾವಣಾ ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು.
ಸಪ್ಟೆಂಬರ್ 7ರಂದು ರಾಜಕೀಯ ಅಖಾಡಕ್ಕೆ ಮಾಯಾವತಿ:
ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಲು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಈಗಾಗಲೇ ದಿನಾಂಕ ನಿಗದಿಗೊಳಿಸಿದ್ದಾರೆ. ಸಪ್ಟೆಂಬರ್ 7ರಂದು ಲಕ್ನೋದಲ್ಲಿ ನಡೆಯಲಿರುವ ಬ್ರಾಹ್ಮಣ ಸಮ್ಮೇಳನದ ಮುಖೇನ ತಮ್ಮ ರಾಜಕೀಯ ಪ್ರಚಾರವನ್ನು ಅಧಿಕೃತವಾಗಿ ಶುರು ಮಾಡಲಿದ್ದಾರೆ.