ಹೃದಯ ವಿದ್ರಾವಕ: ಸೈಕಲ್ನಲ್ಲಿ ಪತ್ನಿ ಮೃತದೇಹ ಹೊತ್ತು ಸಾಗಿದ ಅಸಹಾಯಕ!
ಲಕ್ನೋ, ಏಪ್ರಿಲ್ 28: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅನೇಕ ಮನ ಮಿಡಿಯುವಂತಾ ಹೃದಯ ವಿದ್ರಾವಕ ಘಟನೆಗಳಿಗೆ ಸಾಕ್ಷಿ ಆಗಿದೆ. ಕೊವಿಡ್-19 ಸೋಂಕು ಮತ್ತು ಸಾವಿನ ನಡುವೆ ಅಂತ್ಯಸಂಸ್ಕಾರಕ್ಕೂ ಜಾಗ ಸಿಗದಂತಾ ದುಸ್ಥಿತಿ ದೇಶದ ಹಲವು ರಾಜ್ಯಗಳಲ್ಲಿ ಸೃಷ್ಟಿಯಾಗಿದೆ.
ಉತ್ತರ ಪ್ರದೇಶದ ಜೋನ್ಪುರ್ ಜಿಲ್ಲೆಯ ಮದಿಯಾಹು ಕೊಟ್ವಾಲಿ ಪ್ರದೇಶದ ಅಂಬರ್ಪುರ್ ಗ್ರಾಮದಲ್ಲಿ ಅಂಥದ್ದೇ ಒಂದು ಘಟನೆ ವರದಿಯಾಗಿದೆ. ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ಮಡದಿಯ ಮೃತದೇಹದ ಅಂತ್ಯಸಂಸ್ಕಾರಕ್ಕಾಗಿ ಸೈಕಲ್ನಲ್ಲಿ ಇಟ್ಟುಕೊಂಡು ಸುತ್ತಿರುವುದು ಬೆಳಕಿಗೆ ಬಂದಿದೆ.
ದೆಹಲಿ: ಶ್ವಾನಗಳ ಸ್ಮಶಾನದಲ್ಲಿ ಕೊವಿಡ್-19 ಶವಗಳ ಅಂತ್ಯಸಂಸ್ಕಾರ!
ರಸ್ತೆ ಬದಿಯಲ್ಲಿ ಒಂದು ಕಡೆ ಸೈಕಲ್ಗೆ ಕಟ್ಟಿದ ಮಹಿಳೆಯ ಮೃತದೇಹ. ಇನ್ನೊಂದು ಕಡೆ ಸುಸ್ತಾಗಿ ಕುಳಿತುಕೊಂಡಿರುವ ಪತಿಯ ಫೋಟೋ ಸಾಮಾಜಿಕ ಜಾಲತಾಮದಲ್ಲಿ ವೈರಲ್ ಆಗುತ್ತಿದ್ದು, ಪ್ರಸ್ತುತ ಪರಿಸ್ಥಿತಿ ಹಾಗೂ ಅಮಾನವೀಯತೆಗೆ ಹಿಡಿದ ಕೈಗನ್ನಡಿ ಎನ್ನುವಂತಿದೆ.
ಅನಾರೋಗ್ಯದಿಂದ ಪ್ರಾಣ ಬಿಟ್ಟ 50 ವರ್ಷದ ಮಹಿಳೆ
ಉತ್ತರ ಪ್ರದೇಶ ಜೋನ್ಪುರ್ ಜಿಲ್ಲೆ ಮದಿಯಾಹು ಕೊಟ್ವಾಲಿ ಪ್ರದೇಶದ ಅಂಬರ್ಪುರ್ ಗ್ರಾಮದ ನಿವಾಸಿ ತಿಲಕಧಾರಿ ಸಿಂಗ್ ಅವರ ಪತ್ನಿ 50 ವರ್ಷದ ರಾಜಕುಮಾರಿ ಅವರು ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಸೋಮವಾರ ಮಹಿಳೆಯನ್ನು ಉಮಾನಾಥ್ ಸಿಂಗ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದರು.
ಕೊರೊನಾ ಭೀತಿಯಲ್ಲಿ ಮಹಿಳೆ ಅಂತ್ಯಕ್ರಿಯೆಗಿಲ್ಲ ಅವಕಾಶ
ಉತ್ತರ ಪ್ರದೇಶದ ಜೋನ್ಪುರ್ ಗ್ರಾಮಸ್ಥರು ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿರಲಿಲ್ಲ. ವಿಪರ್ಯಾಸ ಎಂದರೆ ಯಾವುದೇ ಅಧಿಕಾರಿಗಳು ಮಹಿಳೆಗೆ ಕೊವಿಡ್-19 ಸೋಂಕು ತಗುಲಿರುವ ಬಗ್ಗೆ ಖಾತ್ರಿಪಡಿಸಿರಲಿಲ್ಲ. ಅಷ್ಟಾಗಿ ಗ್ರಾಮಸ್ಥರು ತನ್ನ ಪತ್ನಿಯ ಅಂತ್ಯಕ್ರಿಯೆ ಮಾಡಲು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸೈಕಲ್ನಲ್ಲಿ ಒಂದು ಗಂಟೆಗಳ ಕಾಲ ಮೃತದೇಹವನ್ನು ಇಟ್ಟುಕೊಂಡು ಸುತ್ತಿರುವ ಘಟನೆ ನಡೆದಿದೆ.
ಗ್ರಾಮದಲ್ಲಿ ಒಬ್ಬರೂ ವ್ಯಕ್ತಿಯ ನೆರವಿಗೆ ನಿಲ್ಲಲಿಲ್ಲ
ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ಜೋನ್ಪುರ್ ಜಿಲ್ಲೆಯ ಮದಿಯಾಹು ಕೊಟ್ವಾಲಿ ಪ್ರದೇಶದ ಅಂಬರ್ಪುರ್ ಗ್ರಾಮದ ಜನರು ಅಸಹಾಯಕ ಸ್ಥಿತಿಯಲ್ಲಿದ್ದ ತಿಲಕಧಾರಿ ಸಿಂಗ್ ಅವರ ಸಹಾಯಕ್ಕೆ ಬರಲಿಲ್ಲ. ತನ್ನ ಪತ್ನಿಯ ಅಂತ್ಯಕ್ರಿಯೆಗೆ ಪರದಾಡುತ್ತಿದ್ದ ಸಿಂಗ್ ನೆರವಿಗೆ ನಿಲ್ಲಲಿಲ್ಲ. ಅಲ್ಲದೇ, ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲು ಅವಕಾಶವನ್ನೂ ನೀಡಲಿಲ್ಲ. ಈ ವಿಷಯ ತಿಳಿದ ಪೊಲೀಸರು ವ್ಯಕ್ತಿಯ ನೆರವಿಗೆ ಧಾವಿಸಿದ್ದು, ರಾಮಘಾಟ್ ನಲ್ಲಿ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದರು.
ರಾಜ್ಯದಲ್ಲಿ ಕೊವಿಡ್-19 ಅಂಕಿ-ಸಂಖ್ಯೆಗಳ ವಿವರ
ಉತ್ತರ ಪ್ರದೇಶದಲ್ಲಿ ಒಂದೇ ದಿನ 33,551 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 11,20,176ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 249 ಮಂದಿ ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 11,414ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 26,719 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 8,04,563 ಜನರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 3,04,199 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.