Breaking: ಸಿಎಂ ಯೋಗಿ ಇದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ವಾರಣಾಸಿ, ಜೂನ್ 26: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ. ಭಾನುವಾರದಂದು ವಾರಣಾಸಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ಭಾನುವಾರ ಮಧ್ಯಾಹ್ನ ತುರ್ತು ಭೂಸ್ಪರ್ಶವಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮ ಅಧಿಕೃತ ಹೇಳಿಕೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ರನ್ ವೇಯಲ್ಲಿ ಟೇಕಾಫ್ ಆದ ಕೂಡಲೇ ಹಕ್ಕಿಯೊಂದು ಬಡಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಲಿಕಾಪ್ಟರ್ ಕೆಳಗಿಳಿಸಲಾಗಿದೆ. ವಾರಣಾಸಿಯಿಂದ ಲಕ್ನೋಗೆ ಹೆಲಿಕಾಪ್ಟರ್ ತೆರಳಬೇಕಾಗಿತ್ತು.
ವಾರಣಾಸಿಗೆ ಎರಡು ದಿನಗಳ ಪ್ರವಾಸಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಿದ್ದರು. ಭಾನುವಾರದಂದು ನಿಗದಿಯಂತೆ ವಾರಣಾಸಿಯಿಂದ ಲಕ್ನೋಕ್ಕೆ ತೆರಳಬೇಕಾಗಿತ್ತು. ವಿಮಾನ ನಿಲ್ದಾಣದ ಸಂಚಾರ ನಿಯಂತ್ರಣ ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವೇ ಹೆಲಿಕಾಪ್ಟರ್ ಟೇಕಾಫ್ ಮಾಡಲಾಗಿತ್ತು.
ಶನಿವಾರದಂದು ವಾರಣಾಸಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ದ ಸಿಎಂ ಯೋಗಿ ಆದಿತ್ಯನಾಥ್, ಕಾಶಿ ವಿಶ್ವನಾಥ ಸ್ವಾಮಿಯ ದರ್ಶನ ಪಡೆದುಕೊಂಡಿದ್ದರು ಎಂದು ವಾರಣಾಸಿ ಜಿಲ್ಲಾಧಿಕಾರಿ ಹೇಳಿದರು.