ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ: ಕಾರ್ಯಕ್ರಮಕ್ಕೆ ಸಿಎಂ ಯೋಗಿಗೆ ಆಹ್ವಾನ!
ಲಕ್ನೌ, ಆಗಸ್ಟ್ 8: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ ಬೆನ್ನಲ್ಲೆ, ಮಸೀದಿ ನಿರ್ಮಾಣ ಕಾರ್ಯಕ್ಕೆ ಟ್ರಸ್ಟ್ ಮುಂದಾಗಿದೆ. ಮಸೀದಿ ನಿರ್ಮಾಣ ಕಾರ್ಯಕ್ರಮಕ್ಕೆ ಸಿಎಂ ಯೋಗಿ ಆಧಿತ್ಯನಾಥ್ ಅವರನ್ನು ಆಹ್ವಾನಿಸಲಾಗುವುದು ಎಂದು ಟ್ರಸ್ಟ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ನಿಗದಿಪಡಿಸಲಾಗಿದ್ದು, ಈ ಸ್ಥಳದಲ್ಲಿ ಮಸೀದಿ, ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡಿಗೆ ಭವನ ಮತ್ತು ಸಂಶೋಧನಾ ಕೇಂದ್ರವನ್ನು ಸಹ ನಿರ್ಮಿಸಲಾಗುವುದು ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಕಾರ್ಯದರ್ಶಿ ಮತ್ತು ಟ್ರಸ್ಟ್ ವಕ್ತಾರ ಅಥರ್ ಹುಸೇನ್ ಪಿಟಿಐಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡಿಗೆ ಭವನ ನಿರ್ಮಾಣಕ್ಕೆ ಸಹಕಾರ ನೀಡಲಿದ್ದಾರೆ ಎಂದು ಟ್ರಸ್ಟ್ ವಕ್ತಾರ ಅಥರ್ ಹುಸೇನ್ ಮಾಹಿತಿ ನೀಡಿದ್ದಾರೆ.
ಅಯೋಧ್ಯೆ ರಾಮ ಮಂದಿರ: ಸಂತಸ ಎನ್ನುವುದು ಮಂದಿರ, ಮಸೀದಿಯಲ್ಲಿಲ್ಲ, ನಟಿ ರಮ್ಯಾ
ಮಸೀದಿ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ್ ಅಡಿಪಾಯ ಹಾಕುತ್ತಾರೆಯೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಹುಸೇನ್, ಇಸ್ಲಾಂ ಧರ್ಮದ ಹನಾಫಿ, ಹನ್ಬಾಲಿ, ಶಫಿ ಮತ್ತು ಮಾಲಿಕಿಯ ಪ್ರಕಾರ ಮಸೀದಿಗೆ ಅಡಿಪಾಯ ಹಾಕಲು ಯಾವುದೇ ಅವಕಾಶವಿಲ್ಲ' ಎಂದಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಿಲಿಸಲಿರುವ ಮಸೀದಿಗೆ ಬಾಬ್ರಿ ಮಸೀದಿ ಎಂದು ಹೆಸರಿಡಲಾಗುತ್ತದೆಯೇ ಎಂದು ಕೇಳಿದ್ದಕ್ಕೆ, 'ಅಂತಹ ಆಲೋಚನೆ ಇಲ್ಲ, ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.' ಎಂದು ಹೇಳಿದ್ದಾರೆ.
ಇನ್ನು ಬಾಬ್ರಿ ಮಸೀದಿ ನಿರ್ಮಾಣ ಅಥವಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೆ, ನಾನು ಹಿಂದೂ ಧರ್ಮದ ಯೋಗಿಯಾಗಿ ಭಾಗವಹಿಸಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಬಹಿರಂಗವಾಗಿ ಹೇಳಿದ್ದಾರೆ.