ಉತ್ತರಪ್ರದೇಶದ ಹಳ್ಳಿಯೊಂದರಲ್ಲೇ 34 ಮಂದಿ ಸಾವನ್ನಪ್ಪಿದ ಪಟ್ಟಿ ವೈರಲ್ - ತನಿಖೆ ಆರಂಭ
ಬಾಗ್ಪತ್, ಮೇ 19: ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯ ಲುಂಬ್ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಸುಮಾರು 34 ಮಂದಿ ಸಾವನ್ನಪ್ಪಿದ್ದಾರೆ, ಅದರಲ್ಲಿ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇದ್ದವು ಎಂಬ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಬಾಗ್ಪತ್ ಜಿಲ್ಲಾಡಳಿತವು ಈ ವಿಚಾರದಲ್ಲಿ ತನಿಖೆಯನ್ನು ಪ್ರಾರಂಭಿಸಿದೆ.
ಗ್ರಾಮಕ್ಕೆ ಪ್ರತಿದಿನ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡವು ಭೇಟಿ ನೀಡುತ್ತಿದ್ದು, ಮನೆ ಮನೆಗೆ ತೆರಳಿ ಕೊರೊನಾ ಸೋಂಕು ಪರೀಕ್ಷೆ ನಡೆಸಿ ಜನರಿಗೆ ಔಷಧಿ ನೀಡುತ್ತಿದೆ.
ಉತ್ತರ ಪ್ರದೇಶದ ಗಂಗಾ ನದಿ ಬಳಿ ಮತ್ತೆ ಮೃತದೇಹಗಳು ಪತ್ತೆ
ಲುಂಬ್ ಗ್ರಾಮದಲ್ಲಿ ಸುಮಾರು 1,200 ಜನಸಂಖ್ಯೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪಟ್ಟಿಯಲ್ಲಿ ಮೃತರ ಹೆಸರನ್ನೂ ಕೂಡಾ ನಮೂದಿಸಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಗ್ರಾಮದ ಮುಖ್ಯಸ್ಥರಾದ ಬಹದ್ದೂರ್ ಸಿಂಗ್, ಈ ಪಟ್ಟಿಯನ್ನು ಗ್ರಾಮಸ್ಥರು ಸಿದ್ದಪಡಿಸಿದ್ದು ಈ ಸಂದರ್ಭ ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ ಸುಮಾರು 34 ಜನರು ಸಾವನ್ನಪ್ಪಿದ್ದಾರೆ ಎಂದು ಗಮನಕ್ಕೆ ಬಂದಿದೆ. ಆದರೆ ನಾನು ಈ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಮೃತರಲ್ಲಿ ಅಧಿಕ ಮಂದಿ ವಯಸ್ಸಾದವರಾಗಿದ್ದು ಕೆಲವರು ಜ್ವರದಿಂದ ಬಳಲುತ್ತಿದ್ದರು ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಅಧಿಕ ಮಂದಿ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಅವರಲ್ಲಿ ಕೋವಿಡ್ ಲಕ್ಷಣಗಳೂ ಕಂಡು ಬಂದಿದ್ದವು. ಈ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ ಕಳೆದ ಮೂರು ದಿನಗಳಿಂದ, ವೈದ್ಯರು ಗ್ರಾಮಕ್ಕೆ ಭೇಟಿ ನೀಡಿ ಪರೀಕ್ಷೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಮೃತಪಟ್ಟ ಜನರ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಗ್ರಾಮದಲ್ಲಿ ಒಂದು ತಿಂಗಳ ಅವಧಿಯಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ ಎಂಬ ಆರೋಪವನ್ನು ಜಿಲ್ಲಾಡಳಿತ ನಿರಾಕರಿಸಿದೆ. ಪ್ರಸ್ತುತ ಹಿರಿಯ ಆರೋಗ್ಯ ಅಧಿಕಾರಿಗಳ ತಂಡವು ಮೃತರ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದೆ.
ಬಾಗಪತ್ನ ಮುಖ್ಯ ವೈದ್ಯಾಧಿಕಾರಿ ಡಾ. ಆರ್ ಕೆ ಟಂಡನ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ನಮ್ಮ ತಂಡವು ಈ ಹಳ್ಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ಪ್ರತಿಯೊಬ್ಬರ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಮೃತರ ಕುಟುಂಬಸ್ಥರಿಂದ ಹಾಗೂ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈವರೆಗೆ ನಡೆಸಿದ ಪರಿಶೀಲನೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ 34 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರ ಪೈಕಿ ಹಲವು ಮಂದಿ ಹೃದ್ರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಾವುಗಳು ಕೊರೊನಾದಿಂದ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಇನ್ನು ವಿಚಾರಣೆ ಸಂದರ್ಭ ಸ್ಥಳೀಯ ಗ್ರಾಮಸ್ಥರೊಬ್ಬರು ಸತ್ತವರ ನಕಲಿ ಪಟ್ಟಿಯನ್ನು ತಯಾರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ತನಿಖಾವರದಿ ಸಲ್ಲಿಸುತ್ತೇವೆ ಎಂದು ಕೂಡಾ ತಿಳಿಸಿದ್ದಾರೆ.