ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಬೃಹತ್ ಒಬಿಸಿ ಅಭಿಯಾನಕ್ಕೆ ಬಿಜೆಪಿ ಸಜ್ಜು
ಲಕ್ನೋ, ಆಗಸ್ಟ್ 31: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಬೃಹತ್ ಹಿಂದುಳಿದ ವರ್ಗಗಳ(ಒಬಿಸಿ) ಮನವೊಲಿಕೆಗೆ ಭಾರತೀಯ ಜನತಾ ಪಕ್ಷವು ಬೃಹತ್ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದೆ. ಸಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ 75 ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಯಾದವ್ ಹೊರತಾದ ಓಬಿಸಿ ವರ್ಗದ ಜನರನ್ನು ಸೆಳೆಯಲು ಬಿಜೆಪಿ ರಣತಂತ್ರ ಹೆಣೆದಿದೆ.
ರಾಜ್ಯ ಮಟ್ಟದಲ್ಲಿ 32 ತಂಡಗಳನ್ನು ರಚಿಸಿದ್ದು, ಇದು ರಾಜ್ಯದ 75 ಜಿಲ್ಲೆಗಳಾದ್ಯಂತ ಆರು ಪ್ರದೇಶಗಳಲ್ಲಿ ಪ್ರಚಾರವನ್ನು ಆಯೋಜಿಸಲಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನರೇಂದ್ರ ಕಶ್ಯಪ್ ತಿಳಿಸಿದ್ದಾರೆ. "ಈ ಕಾರ್ಯಕ್ರಮದ ಮೂಲಕ ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ನೀಡುಲಾಗುತ್ತದೆ," ಎಂದು ನರೇಂದ್ರ ಕಶ್ಯಪ್ ಹೇಳಿದ್ದಾರೆ.
ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಿದ ಯೋಗಿ ಸರ್ಕಾರ
"ಉತ್ತರ ಪ್ರದೇಶದಲ್ಲಿ ಬೇರೆ ರಾಜಕೀಯ ಪಕ್ಷಗಳು ಯಾವ ರೀತಿ ಜನರನ್ನು ವಂಚಿಸಿವೆ. ವೋಟ್ ಬ್ಯಾಂಕ್ ರಾಜಕಾರಣದ ಮೂಲಕ ಸಮುದಾಯಕ್ಕೆ ಹೇಗೆ ದ್ರೋಹ ಬಗೆದಿವೆ ಎಂಬುದನ್ನು ಜನರಿಗೆ ತಿಳಿಸುವುದೇ ಬಿಜೆಪಿಯ ಮುಖ್ಯ ಗುರಿಯಾಗಿದೆ," ಎಂದು ನರೇಂದ್ರ ಕಶ್ಯಪ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಬಿಸಿ ಕಾರ್ಯಕ್ರಮ:
2022ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ 75 ಜಿಲ್ಲೆಗಳಲ್ಲಿ ಒಬಿಸಿ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸುತ್ತಿದೆ. ಆಗಸ್ಟ್ 31 ರಂದು ಮೀರತ್ ನಲ್ಲಿ ಮೊದಲ ಸಭೆ ನಡೆಯಲಿದೆ. ಸೆಪ್ಟೆಂಬರ್ 2ರಂದು ಅಯೋಧ್ಯೆ, ಸೆಪ್ಟೆಂಬರ್ 3 ರಂದು ಕಾನ್ಪುರ, ಸೆಪ್ಟೆಂಬರ್ 4ರಂದು ಮಥುರಾ ಮತ್ತು ಸೆಪ್ಟೆಂಬರ್ 8ರಂದು ವಾರಣಾಸಿ ಒಬಿಸಿ ಕಾರ್ಯಕ್ರಮವನ್ನು ಬಿಜೆಪಿ ನಡೆಸಲಿದೆ ಎಂದು ನರೇಂದ್ರ ಕಶ್ಯಪ್ ಮಾಹಿತಿ ನೀಡಿದ್ದಾರೆ.
ಒಬಿಸಿ ಮಸೂದೆ ಬಗ್ಗೆ ಜನಜಾಗೃತಿ:
2021ರಲ್ಲಿ ನಡೆದ ಸಂಸತ್ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ಮಂಡಿಸಿದ ಒಬಿಸಿ ಮಸೂದೆಯ ಅಂಗೀಕರಿಸಿದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ಮಸೂದೆ ಅಂಗೀಕಾರದಿಂದ ಶಿಕ್ಷಣ, ಉದ್ಯೋಗಗಳಲ್ಲಿ ಒಬಿಸಿ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಕ್ಕಿದೆ. ಇದರಿಂದ ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿ ವರ್ಗಗಳಿಗೆ ಮೀಸಲಾತಿ ಸಿಗಲಿದೆ. ಇದರ ಜೊತೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಒಬಿಸಿ ಸಮುದಾಯದ 27 ಮಂತ್ರಿಗಳಿಗೆ ಅವಕಾಶ ನೀಡಿರುವುದನ್ನೇ ಬಿಜೆಪಿ ಉಲ್ಲೇಖಿಸುವ ಸಾಧ್ಯತೆಯಿದೆ. ಇತ್ತೀಚಿಗಷ್ಟೇ ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ 7 ಸಚಿವರನ್ನು ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳಿಸಲಾಯಿತು.
ಜಾತಿ ಮತಗಳ ಲೆಕ್ಕಾಚಾರ:
ಉತ್ತರ ಪ್ರದೇಶದ ಒಟ್ಟು ಮತದಾರರಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ ಶೇ.35ರಷ್ಟು ಮಂದಿ ಯಾದವರು ಅಲ್ಲದ ಹಿಂದುಳಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಬಗ್ಗೆ ಮೇಲ್ವಿಚಾರಣೆಗಾಗಿ ಬಿಜೆಪಿ ಉತ್ತರ ಪ್ರದೇಶ ಒಬಿಸಿ ಮೋರ್ಚಾ ರಾಜ್ಯಾದ್ಯಂತ ಮೂರು ತಂಡಗಳನ್ನು ರಚಿಸಿದೆ.
ಬಿಜೆಪಿಯ ಬೃಹತ್ ಒಬಿಸಿ ಕಾರ್ಯಕ್ರಮಗಳ ಬಗ್ಗೆ ಸಮಾಜವಾದಿ ಪಕ್ಷವು ತೀವ್ರವಾಗಿ ಟೀಕಿಸಿದೆ. ರಾಜ್ಯದಲ್ಲಿ ತಮ್ಮ ಹಕ್ಕುಗಳಿಗಾಗಿ ಯಾವ ಪಕ್ಷವು ಹೋರಾಡಿದೆ ಎಂಬುದು ಹಿಂದುಳಿದ ವರ್ಗಗಳ ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅನುರಾಗ್ ಭದ್ರೌರಿಯಾ ಹೇಳಿದ್ದಾರೆ. "ಭಾರತೀಯ ಜನತಾ ಪಕ್ಷವು ಕೇವಲ ಜಾತಿ ರಾಜಕಾರಣ ಮಾಡುತ್ತಿದೆ, ಆದರೆ ಮುಂಬರುವ ಚುನಾವಣೆಯಲ್ಲಿ ಅವರಿಗೆ ಯಾವುದೇ ಬೆಂಬಲ ಸಿಗುವುದಿಲ್ಲ ಏಕೆಂದರೆ ಅವರ ಚುನಾವಣಾ ನಡೆಯನ್ನು ಒಬಿಸಿ ಗುರುತಿಸಿದೆ" ಎಂದು ಟೀಕಿಸಿದ್ದಾರೆ.
Recommended Video