ಬಿಜೆಪಿ 6ನೇ ಪಟ್ಟಿ: ಉತ್ತರ ಪ್ರದೇಶದ 5 ಹಾಲಿ ಶಾಸಕರಲ್ಲಿ ಇಬ್ಬರಿಗೆ ಕೈತಪ್ಪಿದ ಟಿಕೆಟ್!
ಲಕ್ನೋ, ಜನವರಿ 26: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಆರನೇ ಆಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ ನಾಲ್ಕು ಹಂತಗಳ ಚುನಾವಣೆಗಾಗಿ ಪಕ್ಷದಿಂದ ಈವರೆಗೂ 204 ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಮಂಗಳವಾರ ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಈ ಎಂಟು ಮಂದಿ ಅಭ್ಯರ್ಥಿಗಳಲ್ಲಿ ಐವರು ದಲಿತರಾಗಿದ್ದು, ಈ ಐದು ಮೀಸಲು ಕ್ಷೇತ್ರಗಳ ಪೈಕಿ ಅಮನಪುರ್ ಮತ್ತು ಔರೈಯಾದಲ್ಲಿ ಹಾಲಿ ಶಾಸಕರ ನಿಧನದಿಂದ ಕ್ಷೇತ್ರಗಳು ತೆರವುಗೊಂಡಿದ್ದವು. ಉಳಿದಂತೆ ಆರು ಕ್ಷೇತ್ರಗಳ ಪೈಕಿ ಐದು ವಿಧಾನಸಭೆಯಲ್ಲಿನ ಹಾಲಿ ಶಾಸಕರಲ್ಲಿ ಇಬ್ಬರಿಗೆ ಟಿಕೆಟ್ ಕೈ ತಪ್ಪಿದೆ.
ಎಸ್ಪಿ-ಆರ್ಎಲ್ಡಿ ಕಾದಾಟ: ಯುಪಿಯ ಜಾಟ್ ಭದ್ರಕೋಟೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್!
ಬರ್ಥಾನಾ ಮೀಸಲು ಕ್ಷೇತ್ರದ ಹಾಲಿ ಶಾಸಕಿ ಸಾವಿತ್ರಿ ಕಥೇರಿಯಾ ಬದಲಿಗೆ ಡಾ. ಪ್ರಿಯರಂಜನ್ ಅಶು ದಿವಾಕರ್ ಎಂಬುವವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಅದೇ ರೀತಿ ರಸುಲಬಾದ್ ಕ್ಷೇತ್ರದ ನಿರ್ಮಲಾ ಸಂಖಾವರ್ ಎರಡನೇ ಅವಧಿಗೆ ಬಿಜೆಪಿ ಟಿಕೆಟ್ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇವರ ಬದಲಿಗೆ ಪೂನಂ ಸಂಖಾವರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.
ಮೂವರು ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್:
ಉತ್ತರ ಪ್ರದೇಶದ ಪಟಿಯಾಲಿ ವಿಧಾನಸಭೆ ಕ್ಷೇತ್ರದ ಮಮತೇಶ್ ಶಂಕ್ಯಾ ಎರಡನೇ ಬಾರಿ ಬಿಜೆಪಿ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಮರ್ಹರ್ ಶಾಸಕ ವೀರೇಂದ್ರ ವರ್ಮಾರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು, ಮತ್ತೊಬ್ಬ ಹಾಲಿ ಶಾಸಕ ಸಂಜೀವ್ ಕುಮಾರ್ ದಿವಾಕರ್ ಜಾಲ್ಸರ್ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಎರಡನೇ ಬಾರಿ ಕಣಕ್ಕೆ ಇಳಿಯಿವುದು ಖಾತ್ರಿ ಆಗಿದೆ.
ತೆರವುಗೊಂಡ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಯಾರು:
ಉತ್ತರ ಪ್ರದೇಶದ ಅಮನ್ಪುರ್ ಹಾಲಿ ಶಾಸಕ ದೇವೇಂದ್ರ ಪ್ರತಾಪ್ ಸಿಂಗ್ ಕಳೆದ 2021ರ ಮೇ ತಿಂಗಳಿನಲ್ಲಿ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದರು. ಅವರ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಹರಿ ಓಂ ವರ್ಮಾರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಔರಾಯ ಕ್ಷೇತ್ರದ ರಮೇಶ್ ದಿವಾಕರ್ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದರು. ಈಗ ಅವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ದಿವಾಕರ್ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ.
ಉತ್ತರ ಪ್ರದೇಶದಲ್ಲಿ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.