ಉತ್ತರ ಪ್ರದೇಶದಲ್ಲಿ ಬಿಜೆಪಿ ತೊರೆದ 9ರಲ್ಲಿ 8 ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
ಲಕ್ನೋ, ಜನವರಿ 14: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಭಾರತೀಯ ಜನತಾ ಪಕ್ಷದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಮೂವರ ಸಚಿವರು ಹೊರ ಹೋಗಿದ್ದು, ಇದುವರೆಗೂ 9 ಬಿಜೆಪಿ ಶಾಸಕರು ಪಕ್ಷ ತೊರೆದಿದ್ದಾರೆ.
ಗುರುವಾರವೊಂದೇ ದಿನ ಇಬ್ಬರು ಶಾಸಕರು ಹಾಗೂ ಒಬ್ಬ ಸಚಿವರು ಬಿಜೆಪಿಗೆ ಬಾಯ್ ಬಾಯ್ ಎಂದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಹಿಂದುಳಿದ ವರ್ಗಗಳ ಪರವಾಗಿ ಯಾವುದೇ ಕೆಲಸವನ್ನು ಮಾಡಿಲ್ಲ ಎಂಬುದು ಪಕ್ಷ ತೊರೆದ ಅಸಮಾಧಾನಿತರ ಆರೋಪವಾಗಿದೆ.
ಯುಪಿ ಚುನಾವಣೆ: ಕಮಲದ ಕೈಬಿಟ್ಟ 3ನೇ ಸಚಿವ ಧರಂ ಸಿಂಗ್ ಸೈನಿ
ಆಯುಷ್ ಸಚಿವ ಮತ್ತು ಸಹರಾನ್ಪುರದ ನಕೂರ್ ಕ್ಷೇತ್ರದ ಶಾಸಕ ಧರಂ ಸಿಂಗ್ ಸೈನಿ, ಫಿರೋಜಾಬಾದ್ನ ಶಿಕೋಹಾಬಾದ್ನ ಶಾಸಕ ಮುಕೇಶ್ ವರ್ಮಾ ಮತ್ತು ಲಖಿಂಪುರದ ಧೌರಾಹ್ರಾ ಶಾಸಕ ಅವಸ್ತಿ ಬಾಲ ಪ್ರಸಾದ್ ಗುರುವಾರ ರಾಜೀನಾಮೆ ನೀಡಿದ ಮೂವರು ಬಿಜೆಪಿ ಶಾಸಕರಾಗಿದ್ದಾರೆ. ಇದರ ಜೊತೆ ಬಿಜೆಪಿ ಮಿತ್ರ ಪಕ್ಷವಾದ ಅಪ್ನಾ ದಳದ ಶೋಹರತ್ಗಢದ ಶಾಸಕ ಅಮರ್ ಸಿಂಗ್ ಚೌಧರಿ ಕೂಡ ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷದ ಕಡೆಗೆ ಮುಖ ಮಾಡಿದ್ದಾರೆ. ಹಿಂದುಳಿದ ಜಾತಿಯ ನಾಯಕರಾದ ಚೌಧರಿ, ಗುರುವಾರ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಭೇಟಿಯಾಗಿದ್ದಾರೆ. ಬಿಜೆಪಿ ವಿರುದ್ಧ ಬಂಡಾಯ ಬಾವುಟ ಹಾರಿಸಿರುವ 9 ಶಾಸಕರ ಪೈಕಿ 8 ಶಾಸಕರು ಶುಕ್ರವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಯೋಗಿ ಸರ್ಕಾರದಿಂದ ಹೊರ ನಡೆದ ಮೂವರ ಸಚಿವರು
ಉತ್ತರ ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಬಿಜೆಪಿಯ ಮೂವರು ಸಚಿವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಹೊರ ನಡೆದಿದ್ದಾರೆ. ಧರಂ ಸಿಂಗ್ ಸೈನಿ ಗುರುವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ಮಂತ್ರಿಗಿರಿಯನ್ನು ತ್ಯಜಿಸಿದ್ದು, ಮರುದಿನ ಧರಂ ಸಿಂಗ್ ಚೌಹಾಣ್ ಕೂಡ ಅವರ ಹಾದಿಯನ್ನೇ ಅನುಸರಿಸಿದ್ದರು. ಎಲ್ಲಾ ಸಚಿವರು ಮತ್ತು ಶಾಸಕರು ಒಂದೇ ರೀತಿಯ ರಾಜೀನಾಮೆ ಪತ್ರದಲ್ಲಿ ದಲಿತರು ಮತ್ತು ಹಿಂದುಳಿದವರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದರು.
ಸಮಾಜವಾದಿ ಪಕ್ಷದ ಕಡೆಗೆ ಮುಖ ಮಾಡಿದ ಶಾಸಕರು
ಅವಸ್ತಿ ಬಾಳಾ ಪ್ರಸಾದ್, ಬಿಜೆಪಿಯನ್ನು ತೊರೆದ 9ನೇ ಬಂಡಾಯ ಶಾಸಕರಾಗಿದ್ದು, ಅವರು ಗುರುವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಎಸ್ಪಿ ವಿಧಾನ ಪರಿಷತ್ ಸದಸ್ಯ ಉದಯವೀರ್ ಸಿಂಗ್ ಹೇಳಿದ್ದಾರೆ. ಮೂಲಗಳ ಪ್ರಕಾರ, ಬಿಜೆಪಿಯನ್ನು ತೊರೆದ 9 ಶಾಸಕರ ಪೈಕಿ 8 ಶಾಸಕರು ಶುಕ್ರವಾರ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಿರುವ ಧರಂ ಸಿಂಗ್ ಸೈನಿ ಕೂಡ ಎಸ್ಪಿ ಮುಖ್ಯಸ್ಥರನ್ನು ಭೇಟಿ ಆಗಿದ್ದಾರೆ ಎಂದು ಗೊತ್ತಾಗಿದೆ.
ಪಕ್ಷ ತೊರೆದವರೆಲ್ಲ ಅವಕಾಶವಾದಿಗಳು ಎಂದ ಬಿಜೆಪಿ
ಭಾರತೀಯ ಜನತಾ ಪಕ್ಷವನ್ನು ತೊರೆದು ಹೋಗಿರುವ ಸಚಿವರು ಮತ್ತು ಶಾಸಕರನ್ನು ಉಲ್ಲೇಖಿಸಿ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಮಾತನಾಡಿದ್ದಾರೆ. "ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಿಜೆಪಿಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸ್ಪರ್ಧಿಸಲಿದೆ. ಡಬಲ್ ಇಂಜಿನ್ ಸರ್ಕಾರವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಬಿಜೆಪಿ ಜನರ ಮುಂದೆ ಹೋಗುತ್ತದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ನಂತರದಲ್ಲಿ ಪಕ್ಷವನ್ನು ತೊರೆದವರು ಅವಕಾಶವಾದಿಗಳು, ಸ್ವಾರ್ಥ ಸಾಧನೆ ಕಾರಣಕ್ಕಾಗಿ ಪಕ್ಷದಿಂದ ಹೊರ ಹೋಗಿರುವ ನಾಯಕರನ್ನು ಜನರೇ ತಿರಸ್ಕರಿಸಲಿದ್ದಾರೆ. 2017ರ ರೀತಿಯಲ್ಲೇ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿಯು ರಾಜ್ಯದಲ್ಲಿ ಮತ್ತೊಂದು ಬಾರಿ ಅಧಿಕಾರಕ್ಕೆ ಬರಲಿದೆ," ಎಂದು ಹೇಳಿದ್ದಾರೆ.
ದಲಿತರ ಬಗ್ಗೆ ನಿರ್ಲಕ್ಷ್ಯ ಧೋರಣೆಯ ಆರೋಪ
ಬಿಜೆಪಿ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರು ಮತ್ತು ಜನಪ್ರತಿನಿಧಿಗಳ ಬಗ್ಗೆ ಗಮನ ಹರಿಸಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಉತ್ತರ ಪ್ರದೇಶದಲ್ಲಿ ದಲಿತರು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯ, ರೈತರು ಮತ್ತು ನಿರುದ್ಯೋಗಿಗಳನ್ನು ನಿರ್ಲಕ್ಷಿಸುತ್ತಿದೆ. ಹೀಗಾಗಿ ನಾನು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ," ಎಂದು ಮುಕೇಶ್ ವರ್ಮಾ ದೂಷಿಸಿದ್ದಾರೆ.
2017ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮುಕೇಶ್ ವರ್ಮಾ, ಬಿಎಸ್ಪಿಯಿಂದ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಬಿಜೆಪಿ ಸೇರಿದರು. ಅವರು 2012ರ ಚುನಾವಣೆಯಲ್ಲಿ ಬಿಎಸ್ಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಎಸ್ಪಿಯ ಓಂ ಪ್ರಕಾಶ್ ವರ್ಮಾ ವಿರುದ್ಧ ಸೋತಿದ್ದರು. ಆದರೆ 2017 ರಲ್ಲಿ ವರ್ಮಾ ಅವರು ಎಸ್ಪಿಯ ಸಂಜಯ್ ಕುಮಾರ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು.
ಉತ್ತರ ಪ್ರದೇಶದಲ್ಲಿ ಚುನಾವಣೆ ಪೈಪೋಟಿ ಹೇಗಿದೆ?
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ದಿನಾಂಕ ಪ್ರಕಟಿಸಿ ಆಗಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಉತ್ತರ ಪ್ರದೇಶದಲ್ಲಿ ಈ ಹಿಂದಿನ ಫಲಿತಾಂಶ?
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
Recommended Video