ನನ್ನ ಮಗ ಸಾವನ್ನಪ್ಪಿ 30 ದಿನ ಆಯ್ತು, ಆದರೆ ಪೊಲೀಸರು ದೂರು ದಾಖಲಿಸುತ್ತಿಲ್ಲ- ಯುಪಿ ಬಿಜೆಪಿ ಶಾಸಕ
ಲಕ್ನೋ, ಮೇ, 29: ನನ್ನ ಮಗನ ಸಾವಿಗೆ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ನಾನು ಪೊಲೀಸರಿಗೆ ದೂರು ನೀಡಲು ಒಂದು ತಿಂಗಳಿನಿಂದಲೂ ಪ್ರಯತ್ನಿಸುತ್ತಿದ್ದೇನೆ, ಆದರೆ ಪೊಲೀಸರು ದೂರು ದಾಖಲು ಮಾಡುತ್ತಿಲ್ಲ ಎಂದು ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರೊಬ್ಬರು ಆರೋಪಿಸಿದ್ದಾರೆ.
ಹಾರ್ದೋಯ್ ಜಿಲ್ಲೆಯ ಸಂದಿಲಾ ಮೂಲದ ಬಿಜೆಪಿ ಶಾಸಕ ರಾಜ್ಕುಮಾರ್ ಅಗರ್ವಾಲ್ ಈ ಬಗ್ಗೆ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದು, ''ನನ್ನ ಮಗ ಆಶಿಶ್ (35) ಏಪ್ರಿಲ್ 26 ರಂದು ಕಾಕೋರಿಯ ಆಸ್ಪತ್ರೆಯಲ್ಲಿ ನಿಧನನಾಗಿದ್ದಾನೆ. ಕೋವಿಡ್ ದೃಢಪಟ್ಟ ಹಿನ್ನೆಲೆ ಅವನನ್ನು ಅಲ್ಲಿ ದಾಖಲಿಸಲಾಗಿತ್ತು. ಏಪ್ರಿಲ್ 26 ಬೆಳಿಗ್ಗೆ, ಮಗನ ಆಮ್ಲಜನಕದ ಮಟ್ಟ 94 ಆಗಿತ್ತು. ಅವನು ಊಟ ಮಾಡುತ್ತಿದ್ದ, ನಮ್ಮೊಂದಿಗೆ ಮಾತನಾಡುತ್ತಿದ್ದ. ಇದ್ದಕ್ಕಿದ್ದಂತೆ ಸಂಜೆ, ಅವನ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತಿರುವುದಾಗಿ ವೈದ್ಯರು ಅವನಿಗೆ ತಿಳಿಸಿದ್ದಾರೆ'' ಎಂದಿದ್ದಾರೆ.
2022 ರ ಯುಪಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಬಿಜೆಪಿ, ಆರ್ಎಸ್ಎಸ್ ಸಭೆ - ಪಿಎಂ ಮೋದಿ ಭಾಗಿ
''ನಾವು ಹೊರಗಿನಿಂದ ಆಮ್ಲಜನಕ ಸಿಲಿಂಡರ್ ಅನ್ನು ವ್ಯವಸ್ಥೆಗೊಳಿಸಿದೆವು. ಆದರೆ ಈ ಆಮ್ಲಜನಕವನ್ನು ನನ್ನ ಮಗನಿಗೆ ನೀಡಲು ವೈದ್ಯರು ಅನುಮತಿ ನೀಡಿಲ್ಲ. ಇದರಿಂದಾಗಿ ನನ್ನ ಮಗ ಸಾವನ್ನಪ್ಪಿದ್ದಾನೆ'' ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ.
ಆಸ್ಪತ್ರೆ ಆಡಳಿತ ಮತ್ತು ವೈದ್ಯರ ನಿರ್ಲಕ್ಷ್ಯದಿಂದಾಗಿ ನನ್ನ ಮಗ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಆಸ್ಪತ್ರೆ ಆಡಳಿತ ಮತ್ತು ವೈದ್ಯರ ವಿರುದ್ದ ದೂರು ಎಫ್ಐಆರ್ ದಾಖಲಿಸಲು ನಾನು ಪ್ರಯತ್ನ ಮಾಡುತ್ತಿದ್ದೇನೆ. ಕಳೆದ 30 ದಿನದಿಂದ ಅಲೆಯುತ್ತಿದ್ದೇನೆ. ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ'' ಎಂದು ಶಾಸಕರೇ ಹೇಳಿದ್ದಾರೆ. ಈ ನಡುವೆ ''ಶಾಸಕರ ಸ್ಥಿತಿಯೇ ಹೀಗಾದರೆ ಇನ್ನು ಸ್ಥಳೀಯ ಜನರ ಪಾಡು ಏನು ಎಂಬುವುದನ್ನು ನೀವೇ ಆಲೋಚಿಸಿ'' ಎಂದು ಹೇಳಿದ್ದಾರೆ ಸ್ಥಳೀಯರು.
ಉತ್ತರಪ್ರದೇಶದ ಹಳ್ಳಿಯೊಂದರಲ್ಲೇ 34 ಮಂದಿ ಸಾವನ್ನಪ್ಪಿದ ಪಟ್ಟಿ ವೈರಲ್ - ತನಿಖೆ ಆರಂಭ
''ಆ ದಿನ ಆಸ್ಪತ್ರೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ನಾನು ಈ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದೆ. ಆದರೆ ಇನ್ನೂ ನನ್ನ ದೂರನ್ನು ದಾಖಲಿಸಿಲ್ಲ. ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು ಮತ್ತು ನನ್ನ ಮಗನ ಸಾವಿಗೆ ಯಾರು ಕಾರಣ ಎಂದು ಕಂಡುಹಿಡಿಯಬೇಕು. ಜವಾಬ್ದಾರಿ ಇಲ್ಲದೆ ವರ್ತಿಸಿದ ವೈದ್ಯರಿಗೆ ಶಿಕ್ಷೆಯಾಗಬೇಕು'' ಎಂದು ಆಗ್ರಹಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)