ಯುಪಿ ಚುನಾವಣೆ: ನಿಷಾದ್, ಅಪ್ನಾದಳ ಪಕ್ಷದೊಂದಿಗೆ ಬಿಜೆಪಿ ಮೈತ್ರಿ, ಯೋಗಿ-ಮೋದಿ ನೇತೃತ್ವದಲ್ಲಿ ಸ್ಪರ್ಧೆ
ಲಕ್ನೋ, ಸೆಪ್ಟೆಂಬರ್ 24: "ಉತ್ತರ ಪ್ರದೇಶದಲ್ಲಿ ಮುಂದಿನ 2022 ರ ವಿಧಾನಸಭೆ ಚುನಾವಣೆಯಲ್ಲಿ ನಿಷಾದ್ ಪಕ್ಷದೊಂದಿಗೆ ಮೈತ್ರಿಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಲಿದೆ," ಎಂದು ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಲಕ್ನೋದಲ್ಲಿ ಮುಂಬರುವ 2022 ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್, "ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ನಿಷಾದ್ ಪಕ್ಷದ ಮೈತ್ರಿಯೊಂದಿಗೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಪರ್ಧಿಸಲಿದೆ," ಎಂದು ಹೇಳಿದ್ದಾರೆ.
ಯುಪಿ ಚುನಾವಣೆ: ಭೀಮ್ ಆರ್ಮಿ ಜೊತೆ ಬಿಜೆಪಿಯ ಮಾಜಿ ಮಿತ್ರಪಕ್ಷ ಮೈತ್ರಿ
2016 ರಲ್ಲಿ ಸ್ಥಾಪನೆಯಾದ ನಿಷಾದ್ ಪಕ್ಷವು ಈ ಹಿಂದೆಯೇ ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ. ಈ ಬಗ್ಗೆ ಸೆಪ್ಟೆಂಬರ್ 7 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್, "ನಮ್ಮ ಪಕ್ಷವು ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿಯಲಿದೆ," ಎಂದು ಹೇಳಿದ್ದರು.
ಹಾಗೆಯೇ, "ನಾವು ಖಂಡಿತವಾಗಿಯೂ ಗೆಲುವು ಸಾಧಿಸುತ್ತೇವೆ. ಬಿಜೆಪಿಯೊಂದಿಗೆ ಸೇರಿ ಸರ್ಕಾರವನ್ನು ರಚನೆ ಮಾಡುತ್ತೇವೆ," ಎಂದು ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್ ವಿಶ್ವಾಸ ವ್ಯಕ್ತ ಪಡಿಸಿದ್ದರು. ಆದರೆ ಈ ಮೈತ್ರಿಯು ಅಂತಿಮವಾಗಿರಲಿಲ್ಲ. ಬಿಜೆಪಿ ಹಾಗೂ ನಿಷಾದ್ ಪಕ್ಷದ ನಡುವೆ ಈ ಬಗ್ಗೆ ಮಾತುಕತೆ ನಡೆಯುತ್ತಿತ್ತು.
ಶುಕ್ರವಾರ ನಿಷಾದ್ ಪಕ್ಷ ಹಾಗೂ ಬಿಜೆಪಿಯ ನಡುವೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಮಾತುಕತೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಷಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಷಾದ್, "ಇಂದಿನ ಸಭೆಯಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಬಿಜೆಪಿಯ ಜೊತೆಗೆ ಮಾತುಕತೆ ನಡೆಸಲಾಗುವುದು. ನಿಷಾದ್ ಪಕ್ಷವು ತಮ್ಮದೇ ಆದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ನಾವು ವಿಲೀನ ಮಾಡಿಕೊಳ್ಳುವುದಿಲ್ಲ," ಎಂದು ಹೇಳಿದ್ದರು.
'ಮಾಫಿಯಾ ವ್ಯಕ್ತಿಗೆ ಟಿಕೆಟ್ ಇಲ್ಲ': ಮುಖ್ತಾರ್ ಅನ್ಸಾರಿಗೆ ಟಿಕೆಟ್ ನಿರಾಕರಿಸಿದ ಬಿಎಸ್ಪಿ
ಈ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್, "ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ನಿಷಾದ್ ಪಕ್ಷದ ಮೈತ್ರಿಯೊಂದಿಗೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಪರ್ಧಿಸಲಿದೆ," ಎಂದು ತಿಳಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ಧರ್ಮೆಂದ್ರ ಪ್ರಧಾನ್ ಕೂಡಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. "ಅಪ್ನಾ ದಳ ಕೂಡಾ ಬಿಜೆಪಿ ಮೈತ್ರಿ ಕೂಟದ ಭಾಗವಾಗಲಿದೆ," ಎಂದು ಮಾಹಿತಿ ನೀಡಿದ್ದಾರೆ.
"ನಾವು ರೈತರ ಏಳಿಗೆಗಾಗಿ ಕಾರ್ಯ ನಿರ್ವಹಿಸಲು, ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಲು ಈಗಾಗಲೇ ಪಣತೊಟ್ಟಿದ್ದೇವೆ. ನಾವು ಎಮ್ಎಸ್ಪಿಯಲ್ಲೇ ರೈತರ ಬೆಳೆಯನ್ನು ಖರೀದಿ ಮಾಡುವ ಮೂಲಕ ರೈತರ ಉನ್ನತಿಗೆ ಶ್ರಮಿಸುತ್ತೇವೆ. ಹಾಗೆಯೇ ನೈಸರ್ಗಿಕ ಉಳುಮೆ, ಸಾವಯವ ಕೃಷಿಗೆ ನಾವು ಆದ್ಯತೆ ನೀಡುತ್ತೇವೆ. ಒಂದು ಲಕ್ಷ ಕೋಟಿಯನ್ನು ಕೃಷಿ ಮಾರುಕಟ್ಟೆ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ. ಈ ಮೂಲಕ ಬಿಜೆಪಿಯು ರೈತರ, ಬಹು ಮುಖ್ಯವಾಗಿ ಸಣ್ಣ ಬೆಳೆ ಬೆಳೆಯುವ ರೈತರ ಆಶೀರ್ವಾದವನ್ನು ಚುನಾವಣೆಯಲ್ಲಿ ಪಡೆಯಲಿದೆ," ಎಂದಿದ್ದಾರೆ.
ಬಹುನಿರೀಕ್ಷಿತ ಉತ್ತರ ಪ್ರದೇಶ 2022 ರ ವಿಧಾನಸಭೆ ಚುನಾವಣೆಯು ಈಗ ಎಲ್ಲಾ ಪಕ್ಷಗಳಿಗೂ ಭಾರೀ ಮಹತ್ವದ ರಾಜ್ಯವಾಗಿದೆ. ಉತ್ತರ ಪ್ರದೇಶ ಚುನಾವಣೆಗೆ ಎಲ್ಲಾ ಪಕ್ಷಗಳು ಒಂದು ವರ್ಷಕ್ಕೂ ಮುನ್ನವೇ ಸಿದ್ದತೆಯನ್ನು ಆರಂಭ ಮಾಡಿಕೊಂಡಿದೆ. ಹಲವಾರು ಕಾರ್ಯತಂತ್ರಗಳನ್ನು ರೂಪಿಸಿದೆ. ಬಿಜೆಪಿಯು ಕೂಡಾ ಮತ್ತೆ ಪಕ್ಷವೇ ಸರ್ಕಾರವನ್ನು ರಚನೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಎಲ್ಲಾ ಪಕ್ಷಗಳು ಜಾತಿ ಆಧಾರದಲ್ಲಿ ವೋಟ್ ಬ್ಯಾಂಕಿಂಗ್ ಮಾಡಲು ಮುಂದಾಗಿದೆ.
(ಒನ್ ಇಂಡಿಯಾ ಸುದ್ದಿ)