ಎಸ್ಪಿ-ಬಿಎಸ್ಪಿ ಮೈತ್ರಿ ಎಲ್ಲಿಯವರೆಗೆ? ಮಾಯಾವತಿ ನೀಡಿದ ಉತ್ತರ...
ಲಕ್ನೋ, ಮೇ 09: ಉತ್ತರ ಪ್ರದೇಶದಲ್ಲಿ ಅಚ್ಚರಿ ಎಂಬಂತೆ ಸೃಷ್ಟಿಯಾದ ಎಸ್ಪಿ-ಬಿಎಸ್ಪಿ ಮೈತ್ರಿಯನ್ನು ಕಂಡೂ, 'ಎಷ್ಟು ದಿನ ಅಂತ ನೋಡೇ ಬಿಡೋಣ' ಎಂದು ಮೂಗು ಮುರಿದವರೇ ಹೆಚ್ಚು! ಆದರೆ ಅಂಥವರಿಗೆಲ್ಲ ಬಿಎಸ್ಪಿ ಸುಪ್ರಿಮೋ ಮಾಯಾವತಿ ಉತ್ತರ ನೀಡಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಈ ಮೈತ್ರಿ ಹೀಗೆಯೇ ಇರುತ್ತದೆ" ಎಂದು ಮಾಯಾವತಿ ಹೇಳಿದ್ದಾರೆ.
ಮಾಯಾವತಿಗೆ ಪ್ರಧಾನಿ ಪಟ್ಟ, ಅಖಿಲೇಶ್ ಯಾದವ್ ನಿಲುವೇನು?
ಉತ್ತರ ಪ್ರದೇಶದ ಅಝಮ್ಘರ್ ಕ್ಷೇತ್ರದಲ್ಲಿ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಅವರು, ಎಸ್ಪಿ-ಬಿಎಸ್ಪಿ ಮೈತ್ರಿಯ ಬಗ್ಗೆ ಟೀಕಿಸುವವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿಲ್ಲ, ಎರಡೂ ಪಕ್ಷದ ನಾಯಕರೂ ಒಂದೇ ಉದ್ದೇಶ ಹೊತ್ತು ಒಂದಾಗಿದ್ದೇವೆ. ಆ ಗುರಿ ಸಾಧಿಸಲು ಹೋರಾಡುತ್ತೇವೆ ಎಂದು ಅವರು ಹೇಳಿದರು.
ಮೋದಿ ಅಧಿಕಾರ ಕಳೆದುಕೊಳ್ಳುವವರೆಗೆ...
"ಉತ್ತರ ಪ್ರದೇಶದಲ್ಲಿ ನೀವು(ಬಿಜೆಪಿ ನಾಯಕರು) ಎಷ್ಟೇ ಸಮಾವೇಶ ಮಾಡಿದರೂ ಪ್ರಯೋಜನವಿಲ್ಲ. ಈಗಾಗಲೇ ಐದು ಹಂತದ ಮತದಾನ ನಡೆದಿದ್ದು ಬಿಜೆಪಿ ಎಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲೆಡೆಯೂ ಪ್ರಾದೇಶಿಕ ಪಕ್ಷಗಳು ಉತ್ತಮ ಸಾಧನೆ ತೋರಿವೆ. ನರೇಂದ್ರ ಮೋದಿ ಮತ್ತೆಂದೂ ಅಧಿಕಾರಕ್ಕೆ ಬರಲಾರರು ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಬಿಜೆಪಿಯ ಕೆಟ್ಟದಿನ ಆರಂಭವಾಗಿದೆ"-ಮಾಯಾವತಿ, ಬಿ ಎಸ್ಪಿ ನಾಯಕಿ
ಯೋಗಿಯನ್ನು ಮಠಕ್ಕೆ ಕಳಿಸುವವರೆಗೂ!
"ನಮ್ಮ ಮೈತ್ರಿಕೂಟದ ಗುರಿ ಕೇವಲ ಯೋಗಿ ಆದಿತ್ಯನಾಥ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಮಾತ್ರವಲ್ಲ, ಅವರ ಶಿಷ್ಯ ಯೋಗಿ ಆದಿತ್ಯನಾಥ್ ಅವರನ್ನೂ ಅಧಿಕಾರದಿಂದ ಕೆಳಗಿಳಿಸಬೇಕಿದೆ. ಯೋಗಿಯನ್ನು ಹಿಂದಿರುಗಿ ಮಠಕ್ಕೆ ಕಳಿಸುವವರೆಗೂ ನಮ್ಮ ಮೈತ್ರಿ ಮುಂದುವರಿಯಲಿದೆ" ಮಾಯಾವತಿ
ಎಲ್ಲಾ ಅಂದುಕೊಂಡಂತೇ ಆದರೆ.... ಮಾಯಾವತಿ ಪ್ರಧಾನಿ!
ಮೋದಿ ಹಿಂದುಳಿದ ವರ್ಗಕ್ಕೆ ಸೇರಿರುವುದು ಸುಳ್ಳು!
"ಪ್ರಧಾನಿ ಮೋದಿ ಅವರು ತಾವು ಇತರ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ. ಆದರೆ ಅದು ಸತ್ಯವಲ್ಲ. ಅವರೊಬ್ಬ ವಂಚಕ. ಅವರು ಹಿಂದುಳಿದ ವರ್ಗಕ್ಕೆ ಸೇರಿದ್ದೇನೆ ಎಂದಿರುವುದು ಕೇಲವ ಮತಕ್ಕಾಗಿ. ಜನರು ಅವರು ತೋಡಿದ ಹಳ್ಳಕ್ಕೆ ಬೀಳಬಾರದು"- ಮಾಯಾವತಿ
ಪ್ರಧಾನಿಯಾಗುವ ಹಾದಿಯಲ್ಲಿ ಮಾಯಾವತಿ!
"ಎಲ್ಲವೂ ಅಂದುಕೊಂಡರೆ ಆದರೆ ತಾವು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಮಾಯಾವತಿ ಹೇಳಿದ್ದಾರೆ. ಫಲಿತಾಂಶದ ನಂತರ ಅತಂತ್ರ ಲೋಕಸಭೆ ತಲೆದೋರಿದರೆ ಪ್ರಧಾನಿಯಾಗಲು ತಾವು ಮುಂಚೂಣಿಯಲ್ಲಿರುವ ಸೂಚನೆಯನ್ನು ಅವರು ನೀಡಿದ್ದಾರೆ. ಮಾಯಾವತಿ ಪ್ರಧಾನಿಯಾಗುವುದಾದರೆ ನಮ್ಮ ಅಭ್ಯಂತರವಿಲ್ಲ. ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಈಗಾಗಲೇ ಎಸ್ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.