ಕಡೆಗೂ ಸುಟ್ಟು ಬೂದಿಯಾದಳು ಉನ್ನಾವ್ ಅತ್ಯಾಚಾರ ಸಂತ್ರಸ್ತೆ!
ಲಕ್ನೊ, ಡಿಸೆಂಬರ್ 8; ಉತ್ತರ ಪ್ರದೇಶದ ಉನ್ನಾವದಲ್ಲಿ ಅತ್ಯಾಚಾರವಾಗಿ ಕೊಲೆಯಾದ ಬಾಲಕಿಯ ಶವ ಸಂಸ್ಕಾರವನ್ನು ಕಡೆಗೂ ಮಾಡಲಾಯಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಬರುವವರೆಗೂ ಮಾಡುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದರು. ಆದರೆ, ಸ್ಥಳೀಯರ ಮನವೊಲಿಕೆ ನಂತರ ಭಾನುವಾರ ಮಧ್ಯಾಹ್ನ ಭಾರೀ ಪೊಲೀಸ್ ಭದ್ರತೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಉನ್ನಾವದ ಬಾಲಕಿ ಮೇಲೆ ಆತ್ಯಾಚಾರ ನಡೆಸಿ ಬಂಧನಕ್ಕೆ ಒಳಗಾಗಿ ಹೊರ ಬಂದಿದ್ದ ಆರೋಪಿಗಳೇ ಕಳೆದ ವಾರ ಬಾಲಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ತೀವ್ರ ಗಾಯಗೊಂಡಿದ್ದ ಆಕೆ, ಚಿಕಿತ್ಸೆ ಫಲಿಸದೇ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಅಂತ್ಯ ಸಂಸ್ಕಾರಕ್ಕೆ ಶವವನ್ನು ಉನ್ನಾವಗೆ ತೆಗೆದುಕೊಂಡು ಹೋಗಲಾಗಿತ್ತು.
ಉನ್ನಾವ ಅತ್ಯಾಚಾರ ಸಂತ್ರಸ್ತೆಯ ಮನೆಗೆ ಹೋಗ್ತಾರಾ ಸಿಎಂ ಯೋಗಿ?
ಭಾನುವಾರ ಮೃತಳ ಅಂತ್ಯ ಸಂಸ್ಕಾರ ನಡೆಸಲು ತಿರ್ಮಾನಿಸಲಾಗಿತ್ತು. ಆದರೆ, ಕುಟುಂಬಸ್ಥರು ಹಾಗೂ ಬಾಲಕಿ ಸಹೋದರಿ ಒಬ್ಬಳು ಮುಖ್ಯಮಂತ್ರಿ ಸ್ಥಳಕ್ಕೆ ಬರುವವರೆಗೂ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಸಿಎಂ ಯೋಗಿ ಬರಬೇಕು, ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮೃತಳ ಸಹೋದರಿ ಮಾದ್ಯಮಗಳಿಗೆ ತಿಳಿಸಿದ್ದಳು. ಈ ಭರವಸೆ ಈಡೇರಿಸಿ, ತನಿಖೆ ಪೂರ್ಣಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಸಿಎಂ ಯೋಗಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
2017 ರ ಜುಲೈನಲ್ಲಿ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯ ಉನ್ನಾವ್ ಎಂಬ ಊರಿನ ಹದಿನೇಳು ವರ್ಷದ ಬಾಲಕಿಯ ಮೇಲೆ ಅತ್ಯಚಾರ ಮಾಡಲಾಗಿತ್ತು. ಉತ್ತರ ಪ್ರದೇಶ ಬಿಜೆಪಿ ಶಾಸಕ ಕುಲದೀಪ ಸಿಂಗ್ ಸೆಹಾರ್ ಹಾಗೂ ಆತನ ಇತರ ನಾಲ್ವರು ಸಂಗಡಿಗರ ಮೇಲೆ ಆರೋಪ ಹೊರಿಸಲಾಗಿತ್ತು. ಸಾರ್ವಜನಿಕರ ವಿರೋಧ ತೀವ್ರವಾದಾಗ ಯೋಗಿ ಸರ್ಕಾರ ಸೆಹಾರ್ ಹಾಗೂ ಆತನ ಸಹಚರರನ್ನು ಬಂಧಿಸಿತ್ತು. ನಂತರ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.