ಉನ್ನಾವೋ ಸಂತ್ರಸ್ತೆ ಕಾರಿಗೆ ಗುದ್ದಿದ ಟ್ರಕ್; ಆಕೆ ಸ್ಥಿತಿ ಗಂಭೀರ, ಇಬ್ಬರು ಸಾವು
ರಾಯ್ ಬರೇಲಿ (ಉತ್ತರಪ್ರದೇಶ), ಜುಲೈ 28: ಬಿಜೆಪಿ ಶಾಸಕ ಕುಲ್ ದೀಪ್ ಸೆಂಗರ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಆರೋಪ ಮಾಡಿದ್ದ ಉನ್ನಾವೋ ಮಹಿಳೆ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಯ್ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಟ್ರಕ್ ವೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಸಂತ್ರಸ್ತೆ ಜತೆಗೆ ಸಂಬಂಧಿ ಮಹಿಳೆ ಹಾಗೂ ವಕೀಲ ಮಹೇಂದ್ರ ಸಿಂಗ್ ಇದ್ದರು. ಇಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಲಖನೌ ಆಸ್ಪತ್ರೆಗೆ ಮಹಿಳೆಯನ್ನು ಸೇರಿಸಲಾಗಿದೆ. ಆ ಮಹಿಳೆಯು ತನ್ನ ಸಂಬಂಧಿ, ರಾಯ್ ಬರೇಲಿ ಜೈಲಿನಲ್ಲಿ ಇರುವ ಮಹೇಶ್ ಸಿಂಗ್ ರನ್ನು ನೋಡಲು ತೆರಳುತ್ತಿದ್ದರು.
ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಬಿಚ್ಚಿಟ್ಟ ಆ ಕರಾಳ ದಿನದ ನೆನಪು...
ಎರಡು ವರ್ಷದ ಹಿಂದೆ ನನ್ನ ಮನೆಯಲ್ಲಿ ಬಿಜೆಪಿ ಶಾಸಕರು ಅತ್ಯಾಚಾರ ನಡೆಸಿದ್ದಾಗಿ ಆ ಮಹಿಳೆ ದೂರು ನೀಡಿದ್ದರು. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಮಹಿಳೆಯ ತಂದೆಯ ವಿರುದ್ಧ ಕಳೆದ ವರ್ಷ ಏಪ್ರಿಲ್ ನಲ್ಲಿ ಪೊಲೀಸರು ದೂರು ದಾಖಲಿಸಿದ್ದರು. ಅದು ಬಿಜೆಪಿ ಶಾಸಕರ ವಿರುದ್ಧ ದೂರು ದಾಖಲಿಸಿದ ನಂತರ ಹೀಗಾಗಿತ್ತು.
ಆಕೆಯ ತಂದೆ ಜೈಲಿನಲ್ಲೇ ಸಾವನ್ನಪ್ಪಿದ್ದರು. ಶಾಸಕರ ಕಡೆಯವರು ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು, ಆತ ಮೃತಪಟ್ಟರು ಎಂದು ಆರೋಪಿಸಲಾಯಿತು. ಕಳೆದ ವರ್ಷದಿಂದ ಬಿಜೆಪಿ ಶಾಸಕ ಕುಲ್ ದೀಪ್ ಸೆಂಗರ್ ಮತ್ತು ಸೋದರ ಅತುಲ್ ಸಿಂಗ್ ಜೈಲಿನಲ್ಲೇ ಇದ್ದಾರೆ.