ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್ ಅಮಾನತು
ಲಕ್ನೋ, ಜುಲೈ 30: ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಅಮಾನತು ಮಾಡಿ ಬಿಜೆಪಿ ಆದೇಶ ಹೊರಡಿಸಿದೆ. "ಅತ್ಯಾಚಾರ ಸಂತ್ರಸ್ತೆಯನ್ನು ಕೊಲೆ ಮಾಡಲು ರಸ್ತೆ ಅಪಘಾತದ ನಾಟಕ ನಡೆಸಲಾಗಿದೆ" ಎಂಬ ಆರೋಪದ ನಡುವೆಯೇ ಆಕೆಯ ಕುಟುಂಬದವರು ತಮಗೆ ಎದುರಾದ ಬೆದರಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಅತ್ಯಾಚಾರದ ಆರೋಪಿಯಾಗಿರುವ ಬಿಜೆಪಿಯ ಶಾಸಕ ಕುಲದೀಪ್ ಸಿಂಗ್ ಸೆಂಗರ್, ಜೈಲಿನಲ್ಲಿದ್ದುಕೊಂಡೇ ತನ್ನ ಪ್ರಭಾವ ಬಳಸಿ ಮಹಿಳೆಯ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದರು. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಜೈಲಿನಲ್ಲಿ ಇರುವ ಕುಲದೀಪ್ ಸಿಂಗ್, ಫೋನ್ ಮೂಲಕ ಜೈಲಿನಿಂದಲೇ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರು.
ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಬಿಚ್ಚಿಟ್ಟ ಆ ಕರಾಳ ದಿನದ ನೆನಪು...
ಶಾಸಕನ ಬೆಂಬಲಿಗರು, ಪ್ರಕರಣವನ್ನು ಅವರೊಂದಿಗೆ ರಾಜಿ ಮಾಡಿ ಇತ್ಯರ್ಥಪಡಿಸದೆ ಹೋದರೆ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇಡೀ ಸರ್ಕಾರವೇ ಶಾಸಕನ ಪರವಾಗಿದೆ ಎಂದು ಕೂಡ ಅವರು ಬೆದರಿಕೆ ಹಾಕಿದ್ದಾಗಿ ಮಹಿಳೆಯ ಚಿಕ್ಕಪ್ಪ ಆರೋಪಿಸಿದ್ದಾರೆ.
ಇಷ್ಟೆಲ್ಲಾ ನಡೆದರೂ ಶಾಸಕನನ್ನು ಪಕ್ಷದಿಂದ ಉಚ್ಚಾಟನೆ ಮಾಡದೆ ಇರುವುದರ ಬಗ್ಗೆ ಬಿಜೆಪಿಯ ನಡೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ. 'ಬಿಜೆಪಿ ಯಾವುದಕ್ಕೆ ಕಾಯುತ್ತಿದೆ? ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಇತ್ತೀಚಿನ ಎಫ್ಐಆರ್ನಲ್ಲಿ ಅವರ ಹೆಸರು ದಾಖಲಾದರೂ ಕೂಡ ಪಕ್ಷ ಅವರನ್ನು ಏಕೆ ಉಚ್ಚಾಟನೆ ಮಾಡುತ್ತಿಲ್ಲ? ಎಂದು ಅವರು ಕೇಳಿದ್ದರು.