ಯೋಗಿ ಸರ್ಕಾರದ ಕೊರೊನಾ ನಿರ್ವಹಣೆ ಬಗ್ಗೆ ಕೇಂದ್ರ ಸಚಿವರ ಅಸಮಾಧಾನ
ಲಕ್ನೋ, ಮೇ 10: ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ ಕೊರೊನಾ ನಿರ್ವಹಣೆ ವಿರುದ್ಧ ಕೇಂದ್ರ ಸಚಿವರು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಭಾನುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಉತ್ತರಪ್ರದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ: ಯೋಗಿ
ಬರೇಲಿಯ 8 ಬಾರಿ ಬಿಜೆಪಿ ಸಂಸದರೂ ಆಗಿರುವ ಗಂಗ್ವಾರ್, ಉತ್ತರ ಪ್ರದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಕೆಲವು ಕ್ರಮಗಳನ್ನು ಆದಿತ್ಯನಾಥ್ ಅವರಿಗೆ ಸೂಚಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ
ಕಳೆದ ಎರಡು ದಿನಗಳ ಹಿಂದೆ ಕಾನ್ಪುರ ಸಂಸದ ಸತ್ಯದೇವ ಪಚೌರಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು, ಉತ್ತರ ಪ್ರದೇಶದ ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ಮನೆಯಿಂದ ಹೊರಗೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ, ಈ ಹಿಂದೆ ಕೌಶಲ್ ಕಿಶೋರ್ ಕೂಡ ಪತ್ರ ಬರೆದು ಮೆಡಿಕಲ್ ಆಕ್ಸಿಜನ್ ಸರಿಯಾದ ರೀತಿಯಲ್ಲಿ ಪೂರೈಸುವಂತೆ ಮನವಿ ಮಾಡಿದ್ದರು.
ಆರೋಗ್ಯಾಧಿಕಾರಿಗಳು ಯಾರ ಕರೆಯನ್ನೂ ಸ್ವೀಕರಿಸಿಲ್ಲ
ಉತ್ತರಪ್ರದೇಶದ ಆರೋಗ್ಯ ಅಧಿಕಾರಿಗಳು ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ. ರೋಗಿಗಳು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ರೆಫರಲ್ ಪತ್ರದ ಹೆಸರಿನಲ್ಲಿ ಓಡಾಡಿಸಲ್ಪಡುತ್ತಿದ್ದಾರೆ. ಅಲ್ಲದೆ, ಉತ್ತರಪ್ರದೇಶದಲ್ಲಿ ಆಮ್ಲಜನಕದ ಕೊರತೆ ಎದುರಾಗಿದ್ದು, ಆ ಬೇಡಿಕೆಯನ್ನು ನಿಭಾಯಿಸಲು ಬರೇಲಿಯಲ್ಲಿ ಶೀಘ್ರದಲ್ಲೇ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಬೇಕು" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವೈದ್ಯಕೀಯ ಉಪಕರಣಗಳು ಕಾಳ ಸಂತೆಯಲ್ಲಿ ಮಾರಾಟ
ಆಸ್ಪತ್ರೆಗಳಲ್ಲಿ ಬಳಸುವ ಬೈಪ್ಯಾಪ್ ಯಂತ್ರಗಳು, ವೆಂಟಿಲೇಟರ್ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ವೈದ್ಯಕೀಯ ಉಪಕರಣಗಳ ಬೆಲೆಯನ್ನು ಉತ್ತರಪ್ರದೇಶ ಸರ್ಕಾರ ಶೀಘ್ರದಲ್ಲೇ ಸರಿ ಸ್ಥಿತಿಗೆ ತರಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಎಂಎಸ್ಎಂಇ ಅಡಿಯಲ್ಲಿ ರಿಯಾಯಿತಿ ನೀಡಬೇಕು ಎಂದು ಹೇಳಿದ್ದಾರೆ.
ಆಮ್ಲಜನಕದ ಕೊರತೆ ಎದುರಾಗಿದೆ
ಬರೇಲಿಯಲ್ಲಿ ಆಮ್ಲಜನಕದ ಕೊರತೆ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ, ಏಕೆಂದರೆ ಅನೇಕ ಜನರು ತಮ್ಮ ಮನೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆಮ್ಲಜನಕ ಸಿಲಿಂಡರ್ ಗಳನ್ನು ಸಂಗ್ರಹಿಸಿದ್ದಾರೆ. ಹೀಗಾಗಿ ಆಮ್ಲಜನಕ ಸಿಲಿಂಡರ್ಗಳ ಅಗತ್ಯವಿದ್ದು, ಯಾರಿಗೆ ಅದು ಲಭ್ಯವಾಗಿಲ್ಲವೋ ಅಂತವರನ್ನು ಗುರುತಿಸಬೇಕು. ಅಂತವರಿಗೆ ಅಗತ್ಯ ಸೌಲಭ್ಯಗಳನ್ನು ತಲುಪಿಸಬೇಕು. ಆಮ್ಲಜನಕವನ್ನೂ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದ್ದು, ಸರ್ಕಾರ ಇದಕ್ಕೂ ಕಡಿವಾಣ ಹಾಕಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
Recommended Video