ಖಾದ್ರಿ ಅಜ್ಜ ಅಪಘಾತದಲ್ಲಿ ಅಂತ್ಯವಾದರೂ ಪ್ರೇಮವು ಸೌಧದ ರೂಪದಲ್ಲಿ ಈಗಲೂ ತಾಜಾ
ಲಖನೌ, ನವೆಂಬರ್ 10: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಶ್ಚಿಮ ಉತ್ತರಪ್ರದೇಶದ ನಿವೃತ್ತ ಪೋಸ್ಟ್ ಮಾಸ್ಟರ್- 83 ವರ್ಷದ ಫೈಜಲ್ ಹಸನ್ ಖಾದ್ರಿ ಸಾವನ್ನಪ್ಪಿದ್ದಾರೆ. ಅದೆಲ್ಲೋ ಉತ್ತರಪ್ರದೇಶದಲ್ಲಿ ಒಬ್ಬ ಪೋಸ್ಟ್ ಮಾಸ್ಟರ್ ಮೃತಪಟ್ಟರೆ ಅದೆಲ್ಲಾ ಸುದ್ದಿಯಾ ಎಂದು ನಿಮಗನಿಸಿದರೆ, ಅದಕ್ಕೆ ಉತ್ತರ ಈ ವರದಿಯಲ್ಲಿ ಇದೆ.
ಈ ಯಜಮಾನರು ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಗೆ ಬಹಳ ಫೇಮಸ್. ಮೃತಪಟ್ಟ ತನ್ನ ಪತ್ನಿಯ ನೆನಪಿಗಾಗಿ ಸಾಹೇಬರು ಮಿನಿ 'ತಾಜ್ ಮಹಲ್' ನಿರ್ಮಿಸಿದ್ದರು. ಹಾಗೇ ಕಟ್ಟಡ ನಿರ್ಮಿಸಿದ ಖಾದ್ರಿ ಬಗ್ಗೆ ಸುದ್ದಿ ಆಗದೇ ಇರುತ್ತಾ?
ತಾಜ್ ಮಹಲ್ ಸಮಾಧಿಯಷ್ಟೆ, ದೇಗುಲವಲ್ಲ: ಪುರಾತತ್ವ ಸಮೀಕ್ಷೆ ಇಲಾಖೆ
ಕುಟುಂಬ ಮೂಲದ ಪ್ರಕಾರ, ಅಲಿಗಢದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಹೋಗಿದೆ. ಅಪರಿಚಿತ ವಾಹನವೊಂದು ಕಸೇರ್ ಕಲನ್ ಹಳ್ಳಿಯ ಖಾದ್ರಿ ಅವರ ಮನೆಯ ಎದುರೇ ಡಿಕ್ಕಿ ಹೊಡೆದಿದೆ. ರಾತ್ರಿಯ ವೇಳೆ ಮನೆ ಹೊರಗೆ ನಡೆದಾಡುವಾಗ ಈ ಘಟನೆ ಸಂಭವಿಸಿದೆ.
ಎರಡು ವರ್ಷದ ಹಿಂದೆ ಬೈಸಿಕಲ್ ನಿಂದ ಬಿದ್ದು, ಗಾಯಗೊಂಡ ಮೇಲೆ ಖಾದ್ರಿ ಅವರು ವಾಕರ್ ಬಳಸಿ ನಡೆದಾಡುತ್ತಿದ್ದರು ಎಂದು ಸಂಬಂಧಿಕರೊಬ್ಬರು ಮಾಹಿತಿ ನೀಡಿದ್ದಾರೆ.
ಮೃತಪಟ್ಟ ಪತ್ನಿಯ ನೆನಪಿಗಾಗಿ ತಾಜ್ ಮಹಲ್ ನ ಹೋಲುವ ಕಟ್ಟಡವೊಂದನ್ನು ತಮ್ಮ ಮನೆಯ ಬಳಿಯೇ ನಿರ್ಮಿಸಿದ್ದರು. ಹಳ್ಳಿಯಲ್ಲಿ ಹೆಣ್ಣುಮಕ್ಕಳ ಸರಕಾರಿ ಶಾಲೆ ನಿರ್ಮಾಣಕ್ಕೆ ಭೂಮಿ ನೀಡಿದ್ದಾರೆ. ಅಲ್ಲಿಗೆ ಕಟ್ಟಡ ನಿರ್ಮಾಣ ಪೂರ್ಣವಾಗಿದೆ.
ಗಂಟಲು ಕ್ಯಾನ್ಸರ್ ನಿಂದ ತಜಮುಲ್ಲಿ ಬೇಗಮ್ ತೀರಿಕೊಂಡರು
ಖಾದ್ರಿ ಅವರ ಪತ್ನಿ ತಜಮುಲ್ಲಿ ಬೇಗಮ್ ಏಳು ವರ್ಷದ ಹಿಂದೆ ಗಂಟಲು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಇವರಿಬ್ಬರಿಗೆ 1953ರಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಮಕ್ಕಳಿಲ್ಲ. ತಮ್ಮ ಪತ್ನಿ ಮರಣಾ ನಂತರ ತಾಜ್ ಮಹಲ್ ಹೋಲುವ ಕಟ್ಟಡ ನಿರ್ಮಾಣ ಮಾಡಿದ್ದರು. ಅದರೊಳಗೆ ಪತ್ನಿಯ ಅಂತ್ಯಸಂಸ್ಕಾರ ಮಾಡಿದ್ದರು. ಅದರ ಪಕ್ಕದಲ್ಲೇ ಸ್ವಲ್ಪ ಜಾಗ ಬಿಟ್ಟು, ಅಲ್ಲೇ ತನ್ನ ಸಾವಿನ ನಂತರ ಸಮಾಧಿ ಮಾಡಬೇಕು ಎಂದು ತಿಳಿಸಿದ್ದರು.
ಮುಖ್ಯಮಂತ್ರಿ ಸಹಾಯವನ್ನೂ ನಯವಾಗಿ ತಿರಸ್ಕರಿಸಿದ್ದರು
ಹಣಕಾಸಿನ ತೊಂದರೆಯಿಂದ 2014ರ ಫೆಬ್ರವರಿಯಲ್ಲಿ ಕಟ್ಟಡ ನಿರ್ಮಾಣ ನಿಂತಿತ್ತು. ಆ ನಂತರ ತಮ್ಮ ಪಿಂಚಣಿ ಹಣದ ಉಳಿತಾಯದಿಂದ ಪೂರ್ತಿ ಮಾಡಿದ್ದರು. 2015ರ ಆಗಸ್ಟ್ ನಲ್ಲಿ ಉತ್ತರಪ್ರದೇಶದ ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಲಖನೌಗೆ ಬರುವಂತೆ ಖಾದ್ರಿಗೆ ಆಹ್ವಾನ ನೀಡಿದ್ದರು. ಕಟ್ಟಡ ನಿರ್ಮಾಣಕ್ಕೆ ಹಣ ಸಹಾಯ ನೀಡುವ ಬಗ್ಗೆ ಹೇಳಿದಾಗ ಖಾದ್ರಿ ಅದನ್ನು ನಯವಾಗಿ ನಿರಾಕರಿಸಿದ್ದರು.
ತಾಜ್ ಮಹಲ್ ಹಿಂದೂ ದೇಗುಲವೇ? ಮೋದಿ ಸರ್ಕಾರದ ಉತ್ತರ ಇಲ್ಲಿದೆ
ಶಾಲೆ ನಿರ್ಮಿಸಿಕೊಡುವಂತೆ ಕೇಳಿದ್ದರು
ಅದರ ಬದಲು ಗ್ರಾಮದಲ್ಲಿ ಹೆಣ್ಣುಮಕ್ಕಳ ಶಾಲೆ ಆರಂಭಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ತಮ್ಮ ಭೂಮಿಯನ್ನು ಸಹ ನೀಡಿದ್ದರು. ಇದೀಗ ಶಾಲೆ ಕಟ್ಟಡ ಪೂರ್ಣವಾಗಿದೆ. ಈ ಮಧ್ಯೆ 2 ಲಕ್ಷದಷ್ಟು ಹಣ ಉಳಿಸಿ, ತಾವು ನಿರ್ಮಿಸಿದ ಕಟ್ಟಡ ತಾಜ್ ಮಹಲ್ ನಂತೆ ಕಾಣಬೇಕು ಎಂದು ಅದಕ್ಕಾಗಿ ಅಮೃತಶಿಲೆಯನ್ನು ರಾಜಸ್ತಾನದಿಂದ ಖರೀದಿಸಿ ತಂದಿದ್ದರು. ತಾಜ್ ಮಹಲ್ ನಂತೆ ಕಾಣುವ ಕಟ್ಟಡ ನಿರ್ಮಾಣ ಸಲುವಾಗಿ ಖಾದ್ರಿ ತಮ್ಮ ಪಾಲಿಗೆ ಇದ್ದ ಸಣ್ಣ ಪ್ರಮಾಣ ಭೂಮಿ, ಪತ್ನಿಯ ಚಿನ್ನ ಹಾಗೂ ಬೆಳ್ಳಿ ಆಭರಣ ಮಾರಿದ್ದರು. ಸ್ಥಳೀಯವಾಗಿ ಕಲ್ಲಿನ ಕೆಲಸಗಾರರೊಬ್ಬರ ಬಳಿ ಸಹಾಯಕರಾಗಿ ಕೆಲಸಕ್ಕೆ ಹೋಗುತ್ತಿದ್ದರು.
ಆದಷ್ಟು ಬೇಗ ಕಟ್ಟಡ ಪೂರ್ಣ ಮಾಡಲಾಗುತ್ತದೆ
"ಅಮೃತಶಿಲೆ ಬೆಲೆ ಹೆಚ್ಚಾಗಿದ್ದರಿಂದ ಸಮಸ್ಯೆಯಾಯಿತು. ನನಗೆ ಕಟ್ಟಡ ನಿರ್ಮಾಣ ಪೂರ್ಣ ಮಾಡಲು ಹಣಕಾಸು ನೆರವು ನೀಡುವುದಾಗಿ ಹೇಳಿದರು. ನನಗೆ ಸಹಾಯ ಪಡೆಯುವುದು ಇಷ್ಟವಿರಲಿಲ್ಲ. ಇನ್ನು ಕಟ್ಟಡದ ಅಕ್ಕಪಕ್ಕ ಮರಗಳನ್ನು ಹಾಕಬೇಕು ಎಂಬ ಆಸೆ ಇತ್ತು. ಆದರೆ ನೀರಿನ ಸಮಸ್ಯೆ ಇದ್ದಿದ್ದರಿಂದ ಅದು ಕೂಡ ಆಗಲಿಲ್ಲ" ಎಂದು ಹಿಂದೊಮ್ಮೆ ಖಾದ್ರಿ ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಇದೀಗ ಖಾದ್ರಿ ಅವರ ಸೋದರ ಸಂಬಂಧಿ ಕಟ್ಟಡ ಪೂರ್ಣಗೊಳಿಸಲು ಮುಂದಾಗಿದ್ದಾರೆ. ಈ ಕಟ್ಟಡಕ್ಕೆ ಇನ್ನೂ ಅಮೃತಶಿಲೆ ಅಗತ್ಯವಿದೆ. ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಪತ್ನಿಯ ಸಮಾಧಿ ಪಕ್ಕದಲ್ಲೇ ಖಾದ್ರಿ ಅವರ ಸಮಾಧಿಯೂ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.