ಉನ್ನಾವೋ; ಮೇವು ತರಲು ಹೋದ ದಲಿತ ಬಾಲಕಿಯರ ಅನುಮಾನಾಸ್ಪದ ಸಾವು
ಉನ್ನಾವೋ, ಫೆಬ್ರವರಿ 18: ಮೇವು ತರಲು ಹೋದ ಇಬ್ಬರು ದಲಿತ ಬಾಲಕಿಯರು ಹೊಲದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ಬುಧವಾರ ನಡೆದಿದೆ. ಇವರ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
13, 16 ಹಾಗೂ 17 ವಯಸ್ಸಿನ ಮೂವರು ಅಕ್ಕ ತಂಗಿಯರು ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜಾನುವಾರುಗಳಿಗೆ ಮೇವು ತರಲು ಹೊಲದ ಬಳಿ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಯಾರೂ ಮರಳಿರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯವರು ಹೋಗಿ ನೋಡಿದಾಗ, ಮೂವರು ಹೊಲದಲ್ಲಿ ಬಿದ್ದಿದ್ದರು. ಈ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿ ಸ್ಥಿತಿ ಗಂಭೀರವಾಗಿದೆ.
ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ ಘಟಪ್ರಭಾ ನದಿಗೆ ಎಸೆದ ದುಷ್ಕರ್ಮಿಗಳು
ಮರಣೋತ್ತರ ಪರೀಕ್ಷೆ ನಡೆದಿದ್ದು, ಬಾಲಕಿಯರ ದೇಹದಲ್ಲಿ ವಿಷದ ಅಂಶವಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
"ಬಾಲಕಿಯರ ಸಾವಿನ ಕುರಿತು ತನಿಖೆ ನಡೆಸಲಾಗುತ್ತಿದೆ. ಗ್ರಾಮಸ್ಥರನ್ನು ವಿಚಾರಣೆ ಮಾಡಲಾಗಿದೆ. ಹುಡುಗಿಯರ ಮೈಮೇಲೆ ಗಾಯದ ಗುರುತುಗಳಿಲ್ಲ. ಅವರು ನರಳಾಡಿದ ಕುರುಹೂ ದೊರೆತಿಲ್ಲ. ದೇಹದಲ್ಲಿ ವಿಷ ಸೇರಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ತನಿಖೆಗಾಗಿ ಆರು ಪೊಲೀಸರ ತಂಡ ರಚಿಸಲಾಗಿದೆ" ಎಂದು ಉತ್ತರ ಪ್ರದೇಶ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಈ ಬಾಲಕಿಯರ ಸಾವು ಗ್ರಾಮದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.