ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ: ಎರಡು ವಾರದ ಬಳಿಕ ಇಬ್ಬರ ಬಂಧನ
ಲಕ್ನೋ, ಏಪ್ರಿಲ್ 2: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ರೈಲ್ವೆ ಪೊಲೀಸರು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ರೈಲಿನಲ್ಲಿದ್ದ ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಮತ್ತು ಅವರ ಇಬ್ಬರು ಶಿಷ್ಯೆಯರನ್ನು ಮತಾಂತರದ ಆರೋಪದಲ್ಲಿ ಎಬಿವಿಪಿ ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎನ್ನಲಾದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
2021ರ ಮಾರ್ಚ್ 19ರಂದು ಉತ್ಕಲ್ ಎಕ್ಸ್ಪ್ರೆಸ್ ರೈಲಿನ ಬಿ-2 ಕೋಚ್ನಿಂದ ಸನ್ಯಾಸಿನಿಯರು ಮತ್ತು ಇಬ್ಬರು ಶಿಷ್ಯೆಯರನ್ನು ಬಲವಂತವಾಗಿ ಕೆಳಕ್ಕಿಳಿಸಿದ ಪ್ರಕರಣದಲ್ಲಿ ಜಿಲ್ಲಾ ಮತ್ತು ಪೊಲೀಸ್ ಆಡಳಿತವು ಅಂಚಲ್ ಅರ್ಜಾರಿಯಾ ಮತ್ತು ಪುರ್ಗೇಶ್ ಅಮಾರಿಯಾ ಎಂಬುವವರನ್ನು ಬಂಧಿಸಿವೆ. ಇತರರ ವಿರುದ್ಧ ಕೂಡ ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಝಾನ್ಸಿ ಆಡಳಿತದ ಹೇಳಿಕೆ ತಿಳಿಸಿದೆ.
ಕ್ರೈಸ್ತ ಸನ್ಯಾಸಿನಿಯರ ಮೇಲಿನ ಮುತ್ತಿಗೆ ಆರೋಪ ಸುಳ್ಳು; ಪಿಯೂಶ್ ಗೋಯಲ್
'ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ, ಇಬ್ಬರು ವ್ಯಕ್ತಿಗಳು ಮಾರ್ಚ್ 19ರ ಘಟನೆ ಬಗ್ಗೆ ಚರ್ಚಿಸುತ್ತಿರುವುದು ಮತ್ತು ಈ ಪ್ರಕರಣದಲ್ಲಿ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳದೆ ಸನ್ಯಾಸಿನಿಯರನ್ನು ಬಿಟ್ಟುಬಿಟ್ಟರು ಎಂದು ಹೇಳುತ್ತಿರುವುದರ ಬಗ್ಗೆ ಮಾಹಿತಿ ಬಂದಿತ್ತು. ಹೀಗಾಗಿ ಆ ಪುರುಷರನ್ನು ವಿಚಾರಿಸಿದಾಗ ಅವರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲು ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿದೆ. ಪೊಲೀಸರು ಸುಮೊಟೊ ಪ್ರಕರಣದಡಿ ಎಫ್ಐಆರ್ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ' ಎಂದು ಹಿರಿಯ ರೈಲ್ವೆ ಪೊಲೀಸ್ ಅಧಿಕಾರಿ ನಯೀಮ್ ಖಾಮ್ ಮನ್ಸೂರಿ ತಿಳಿಸಿದ್ದಾರೆ.
ಬಂಧಿತರನ್ನು ಝಾನ್ಸಿಯ ಬಲಪಂಥೀಯ ಸಂಘಟನೆಯೊಂದರ ಸದಸ್ಯರು ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಪಾಲ್ಗೊಂಡವರಲ್ಲಿ ಕೆಲವರು ಎಬಿವಿಪಿಯ ಸದಸ್ಯರಾಗಿದ್ದಾರೆ. ಅವರು ರಿಷಿಕೇಶದಲ್ಲಿನ ಶಿಬಿರದಿಂದ ಝಾನ್ಸಿಗೆ ಉತ್ಕಲ್ ಎಕ್ಸ್ಪ್ರೆಸ್ನಲ್ಲಿ ತೆರಳುತ್ತಿದ್ದರು. ನಾಲ್ವರು ಕ್ರೈಸ್ತ ಮಹಿಳೆಯರು ದೆಹಲಿಯ ಹಜ್ರತ್ ನಿಜಾಮುದ್ದೀನ್ನಿಂದ ಒಡಿಶಾದ ರೂರ್ಕೆಲಾಕ್ಕೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಇಬ್ಬರು ಸನ್ಯಾಸಿನಿಯರು ಮತ್ತು ಇಬ್ಬರು ಅವರ ಶಿಷ್ಯೆಯರು. ಆ ಮಹಿಳೆಯರು ಶಿಷ್ಯೆಯರ ಜತೆ ಮಾತನಾಡುತ್ತಿರುವಾಗ ಅವರು ಮತಾಂತರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನದಡಿ ಎಬಿವಿಪಿ ಸದಸ್ಯರು ಪೊಲೀಸರಿಗೆ ದೂರು ನೀಡಿ, ಸನ್ಯಾಸಿನಿಯರನ್ನು ಬಲವಂತವಾಗಿ ರೈಲಿನಿಂದ ಕೆಳಕ್ಕಿಳಿಸಿದ್ದರು.