ನಕಲಿ ಟಿಆರ್ಪಿ ಹಗರಣ: ಕೇಸ್ ದಾಖಲಿಸಿ ತನಿಖೆ ಆರಂಭಿಸಿದ ಸಿಬಿಐ
ನವದೆಹಲಿ, ಅಕ್ಟೋಬರ್ 21: ಉತ್ತರ ಪ್ರದೇಶದಲ್ಲಿ ದಾಖಲಾದ ದೂರಿನ ಆಧಾರದಲ್ಲಿ ನಕಲಿ ಟಿಆರ್ಪಿ ಹಗರಣದ ಕುರಿತು ಸಿಬಿಐ ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದೆ. ರೇಟಿಂಗ್ಸ್ ಲೆಕ್ಕಾಚಾರದಲ್ಲಿ ವಂಚನೆ ನಡೆದಿದೆ ಎಂದು ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್ಗಳ ವಿರುದ್ಧ ಆರೋಪ ಮಾಡಿರುವ ಮುಂಬೈ ಪೊಲೀಸರು, ಅದರ ತನಿಖೆ ನಡೆಸುತ್ತಿರುವಾಗಲೇ ಸಿಬಿಐ ಅಖಾಡಕ್ಕೆ ಇಳಿದಿದೆ.
ಇತ್ತೀಚಿನ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮುಂಬೈ ಪೊಲೀಸರ ತಪ್ಪುಗಳನ್ನು ಎತ್ತಿ ತೋರಿಸಿದ ತಪ್ಪಿಗಾಗಿ ತಮ್ಮ ವಿರುದ್ಧ ಅವರು ಸುಳ್ಳು ಆರೋಪಗಳನ್ನು ಹೊರಿಸಿದೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿತ್ತು. ಈ ಪ್ರಕರಣದಲ್ಲಿ ಸಿಬಿಐ ತನಿಖೆಯಾಗುವಂತಗೆ ಅದು ಒತ್ತಾಯಿಸಿತ್ತು.
ನಕಲಿ ಟಿಆರ್ಪಿ ಹಗರಣ: 3 ತಿಂಗಳು ರೇಟಿಂಗ್ ಸ್ಥಗಿತಕ್ಕೆ ಬಾರ್ಕ್ ನಿರ್ಧಾರ
ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ನಕಲಿ ಟಿಆರ್ಪಿ ದಂಧೆ ವಿರುದ್ಧ ದೂರು ದಾಖಲಾದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. 'ಗೋಲ್ಡನ್ ರಾಬಿಟ್ ಕಮ್ಯುನಿಕೇಷನ್ಸ್' ಶನಿವಾರ ನೀಡಿದ್ದ ದೂರಿನ ಆಧಾರದಲ್ಲಿ ಲಕ್ನೋ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದನ್ನುಸಿಬಿಐಗೆ ಒಪ್ಪಿಸಬೇಕೆಂಬ ಉತ್ತರ ಪ್ರದೇಶದ ಶಿಫಾರಸನ್ನು 24 ಗಂಟೆಯೊಳಗೆ ಕೇಂದ್ರ ಸರ್ಕಾರ ಅನುಮೋದಿಸಿದೆ.
ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಲು ಸಿಬಿಐ ತಂಡವೊಂದು ಲಕ್ನೋಗೆ ಪ್ರಯಾಣಿಸಿದೆ. ಅನಾಮಧೇಯ ವ್ಯಕ್ತಿಗಳ ವಿರುದ್ಧ ಅದು ಎಫ್ಐಆರ್ ದಾಖಲಿಸಿದೆ. ಮುಂಬೈ ಪೊಲೀಸರ ತನಿಖೆಯ ಪ್ರಕರಣದ ಕುರಿತು ಬಿಜೆಪಿ ಆಡಳಿತದ ರಾಜ್ಯದಲ್ಲಿ ದೂರು ದಾಖಲಾಗಿ ಸಿಬಿಐ ಮಧ್ಯಪ್ರವೇಶ ಮಾಡುತ್ತಿರುವುದು ಇದು ಎರಡನೆಯ ಬಾರಿ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕೂಡ ಇದೇ ರೀತಿ ಆಗಿತ್ತು.
ಆಯ್ದ ಮನೆಗಳಲ್ಲಿ ರೇಟಿಂಗ್ ಮೀಟರ್ಗಳನ್ನು ಇರಿಸುವ ಹನ್ಸಾ ಸಂಸ್ಥೆಯ ಮಾಜಿ ಉದ್ಯೋಗಿಗಳು ಮೂರು ಚಾನೆಲ್ಗಳ ಜತೆಗೆ ಗೋಪ್ಯ ದತ್ತಾಂಶಗಳನ್ನು ಹಂಚಿಕೊಂಡಿದ್ದರು ಎಂದು ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ. ಹನ್ಸಾ ನೀಡುವ ವಿವರಗಳನ್ನು ಪ್ರತಿ ವಾರ ದೇಶದಾದ್ಯಂತ ಚಾನೆಲ್ಗಳ ರೇಟಿಂಗ್ ಪಾಯಿಂಟ್ಸ್ ಬಿಡುಗಡೆ ಮಾಡುವ ಬಾರ್ಕ್ ಬಳಸಿಕೊಳ್ಳುತ್ತದೆ.
ಈ ರೇಟಿಂಗ್ ಮೀಟರ್ಗಳನ್ನು ಅಳವಡಿಸಿದ ಮನೆಯವರಿಗೆ ಲಂಚ ನೀಡುವ ಮಾಧ್ಯಮ ಸಂಸ್ಥೆಗಳು ತಾವು ಟಿವಿ ನೋಡದೆ ಇದ್ದರೂ ಚಾನೆಲ್ಅನ್ನು ಸದಾ ಆನ್ನಲ್ಲಿ ಇರಿಸಿರುವಂತೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.