ಅಕ್ರಮ ಗಣಿಗಾರಿಕೆ : ಅಖಿಲೇಶ್ ಯಾದವ್ ಗೆ ಸಿಬಿಐ ತನಿಖೆ ಭೀತಿ!
ನವದೆಹಲಿ, ಜನವರಿ 06: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಸಿಬಿಐ ತನಿಖೆ ಭೀತಿ ಎದುರಾಗಿದೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡವು ಶನಿವಾರದಂದು ಎಫ್ಐಆರ್ ದಾಖಲಿಸಿದೆ.
ಲೋಕಸಭೆ ಚುನಾವಣೆ 2019ರಲ್ಲಿ ಬಿಜೆಪಿ ವಿರುದ್ಧ ಸಮರ ಸಾರಲು ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಸಾಧಿಸಿದ ಬೆನ್ನಲ್ಲೇ ಸಿಬಿಐ ದಾಳಿ ನಡೆಸಲಾಗಿದೆ.
ಕಾಂಗ್ರೆಸ್ಸಿಗೆ ಭಾರೀ ಆಘಾತ ನೀಡಿದ ಮಾಯಾವತಿ-ಅಖಿಲೇಶ್ ನಡೆ
ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಎಸ್ಪಿ ನಾಯಕ ಸತ್ಯದೇವ ದೀಕ್ಷಿತ್ , ಎಸ್ಪಿ ಶಾಸಕ ರಮೇಶ್ ಮಿಶ್ರಾ ಹಾಗೂ ಐಎಎಸ್ ಅಧಿಕಾರಿ ಬಿ ಚಂದ್ರಕಲಾ ಅವರ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ. ಜಲಾನ್, ಹಮೀರ್ ಪುರ್, ಲಕ್ನೋ, ನವದೆಹಲಿ ಸೇರಿದಂತೆ 14 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. 12.5 ಲಕ್ಷ ರು ನಗದು, 1.8 ಕೆಜಿ ಬಂಗಾರ ವಶಪಡಿಸಿಕೊಳ್ಳಲಾಗಿದೆ.
2012 ಹಾಗೂ 2017ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾ ಅಖಿಲೇಶ್ ಯಾದವ್ ಅವರು 2012-13ರ ಅವಧಿಯಲ್ಲಿ ಗಣಿಗಾರಿಕೆ ಖಾತೆ ಹೊಂದಿದ್ದರು. ನಂತರ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರಿಗೆ ಈ ಖಾತೆ ಲಭಿಸಿತ್ತು. ಇವರಿಬ್ಬರಿಗೂ ಸಿಬಿಐ ಸಮನ್ಸ್ ನೀಡುವ ಸಾಧ್ಯತೆಯಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾದರೆ ಫಲಿತಾಂಶ ಏನಾಗಲಿದೆ?
ಎಸ್ಪಿ ಶಾಸಕ ರಮೇಶ್ ಮಿಶ್ರಾ ಅವರ ಸೋದರ ದಿನೇಶ್ ಕುಮಾರ್ ಮಿಶ್ರಾ,ರಾಮ್ ಆಶ್ರಾಯ್ ಪ್ರಜಾಪತಿ(ಗಣಿಗಾರಿಕೆ ಇಲಾಖೆ ಕ್ಲರ್ಕ್), ಅಂಬಿಕಾ ತಿವಾರಿ (ಮಿಶ್ರಾ ಸೋದರರ ಸಂಬಂಧಿ), ಸಂಜಯ್ ದೀಕ್ಷಿತ್, ರಾಮ್ ಅವತಾರ್ ಸಿಂಗ್(ನಿವೃತ್ತ ಕ್ಲರ್ಕ್), ಕರಣ್ ಸಿಂಗ್(ಭೋಗ್ಯಕ್ಕೆ ಪಡೆದವರು) ಹಾಗೂ ಆದಿಲ್ ಖಾನ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.