ನಿಮ್ಮ ಮನೆಗೆ ಬಾಂಬ್ ಇಡ್ತೀವಿ ಹುಷಾರ್: ಬಿಜೆಪಿ ಸಂಸದರಿಗೆ ಆವಾಜ್!
ಲಕ್ನೋ, ಆಗಸ್ಟ್.11: ಜೀವ ಬೆದರಿಕೆ ಹಾಗೂ ಮನೆಗೆ ಬಾಂಬ್ ಇರಿಸುವ ಕುರಿತು ಬೆದರಿಕೆ ಕರೆ ಬಂದಿದೆ ಎಂದು ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸೋಮವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಉನ್ನಾವೋ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಸಂಬಂಧ ದೂರು ನೀಡಲಾಗಿದೆ. ಪಾಕಿಸ್ತಾನದ 923151225989 ಎಂಬ ದೂರವಾಣಿ ಸಂಖ್ಯೆಯಿಂದ ಎರಡು ಬಾರಿ ಬೆದರಿಕೆ ಕರೆ ಬಂದಿದೆ. ಫೋನ್ ನಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಯು ತಮಗೆ ಜೀವ ಬೆದರಿಕೆ ಹಾಕಿದ್ದು ಅಲ್ಲದೇ ಸಂಸದರ ಮನೆಗೆ ಬಾಂಬ್ ಇರಿಸುವುದಾಗಿ ಆವಾಜ್ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉತ್ತರಪ್ರದೇಶದಲ್ಲಿ ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ
"ನನ್ನ ಸ್ನೇಹಿತ ಮೊಹಮ್ಮದ್ ಗಫಾರ್ ನನ್ನು ಪೊಲೀಸರು ಬಂಧಿಸಲು ಸಹಾಯ ಮಾಡುವ ಮೂಲಕ ನಿನ್ನ ಸಾವನ್ನು ನೀವೇ ಸ್ವಾಗತಿಸಿಕೊಂಡಿದ್ದೀಯ" ಎಂದು ಅಪರಿಚಿತ ವ್ಯಕ್ತಿಯು ಫೋನ್ ನಲ್ಲಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಇನ್ನು 10 ದಿನಗಳಲ್ಲೇ ಸಂಸದ ಸಾಕ್ಷಿ ಮಹಾರಾಜ್ ಮತ್ತು ಸಹದ್ಯೋಗಿಗಳನ್ನು ಹತ್ಯೆಗಯ್ಯುವುದಾಗಿ ಬೆದರಿಸಲಾಗಿದೆ.
ಸಾಕ್ಷಿ ಮಹಾರಾಜ್ ಮೇಲೆ ಮುಜಾಹಿದ್ದೀನ್ ಕಣ್ಣು
ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ಚಟುವಟಿಕೆಗಳ ಮೇಲೆ 24/7 ತಮ್ಮ ಮುಜಾಹಿದ್ದೀನ್ ಸಂಘಟನೆ ಕಣ್ಣು ಇರಿಸಿದೆ. ಅವಕಾಶ ಸಿಗುತ್ತಿದ್ದಂತೆ ನಿಮ್ಮನ್ನು ಕೊಂದು ಹಾಕುತ್ತೇವೆ. ಏಕೆಂದರೆ ಸಾಕ್ಷಿ ಮಹಾರಾಜ್ ಅವರ ಚಳವಳಿಯ ಬಗ್ಗೆ ತಮ್ಮ ಜನರಿಗೆ ತಿಳಿದಿದೆ ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಸಾಕ್ಷಿ ಮಹಾರಾಜರಿಗೆ ತಿಳಿಸಿದ್ದಾರೆ. ಕರೆ ಮಾಡಿದ ವ್ಯಕ್ತಿಯು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು ಹೆಸರಿಸಿದ್ದಾರೆ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಬಗ್ಗೆ ಸಂಸದರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಮೇಲೆ ಕಣ್ಣು
ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೂ ಜೀವ ಬೆದರಿಕೆಯನ್ನು ಅಪರಿಚಿತ ವ್ಯಕ್ತಿಯು ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೇಶದಲ್ಲಿ ಮುಸ್ಲಿಂ ಆಡಳಿತ ಜಾರಿಗೊಳಿಸುವ ಬಗ್ಗೆ ಹೇಳಿಕೆ
ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಜೀವ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿಯು ಭಾರತದಲ್ಲಿನ ಆಡಳಿತ ವ್ಯವಸ್ಥೆಯನ್ನೇ ಬದಲಿಸುವ ಬಗ್ಗೆ ಮಾತನಾಡಿದ್ದಾನೆ. ದೇಶದಲ್ಲಿ ಮುಸ್ಲಿಂ ಆಡಳಿತವನ್ನು ಜಾರಿಗೊಳಿಸುವುದೇ ತಮ್ಮ ಮುಖ್ಯ ಉದ್ದೇಶ ಎಂದು ವ್ಯಕ್ತಿಯು ಆವಾಜ್ ಹಾಕಿದ್ದಾನೆ ಎಂದು ಸಂಸದರು ಆರೋಪಿಸಿದ್ದಾರೆ.
ಇದೇ ಮೊದಲಲ್ಲ ಸಾಕ್ಷಿ ಮಹಾರಾಜ್ ರಿಗೆ ಜೀವ ಬೆದರಿಕೆ
ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಉಗ್ರ ಸಂಘಟನೆಗಳಿಂದ ಜೀವ ಬೆದರಿಕೆ ಹಾಕುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಸಾಕಷ್ಟು ಉಗ್ರ ಸಂಘಟನೆಗಳಿಂದ ಸಂಸದರಿಗೆ ಜೀವ ಬೆದರಿಕೆಗಳು ಬಂದಿವೆ. ಅಮೂಲಾಗ್ರ ಸಿದ್ದಾಂತವನ್ನು ನಂಬಿರುವ ಜನರು ಹಾಗೂ ಪಿಎಫ್ಐ ಸಂಘಟನೆಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ಸಂಸದ ಸಾಕ್ಷಿ ಮಹಾರಾಜ್ ದೂರಿದ್ದಾರೆ. ಈ ಹಿಂದೆ ತನಗೆ ಕುವೈತ್ನಿಂದ ಮೊಹಮ್ಮದ್ ಘಫರ್ ಬೆದರಿಕೆ ಹಾಕಿದ್ದ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಉತ್ತರ ಪ್ರದೇಶದ ಎಸ್ಟಿಎಫ್ ನಂತರ ಘಾಫರ್ ನನ್ನು ಬಿಜ್ನೋರ್ ನಲ್ಲಿ ಬಂಧಿಸಲಾಗಿತ್ತು. ಹೀಗಾಗಿ ಅವರ ಸ್ನೇಹಿತ ಈಗ ಸಂಸದರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.