ರಾಮಮಂದಿರ, ಹಿಂದುತ್ವ ನೀತಿಗಳಿಗಿಂತ ಯುಪಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳಿವು
ಲಕ್ನೋ ಮಾರ್ಚ್ 14: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಹಿಂದುತ್ವದ ತತ್ವಗಳು ಹಾಗೂ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಿಂತ ಅದರ ಯೋಜನೆಗಳು ಕೇಂದ್ರಬಿಂದುವಾಗಿದೆ ಎಂದು ಚುನಾವಣೋತ್ತರ ಅಧ್ಯಯನಗಳು ತೋರಿಸಿವೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತದಾರರಿಂದ ಬಹುಮತ ಪಡೆದು ಮತ್ತೆ ಎರಡನೇ ಬಾರಿಗೆ ಗೆಲುವು ಸಾಧಿಸಿದೆ. ಯುಪಿಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಯೋಗಿ ಆದಿತ್ಯನಾಥ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗಲಿದ್ದಾರೆ.
ಈ ಮಧ್ಯೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಜನರು ಯಾವ ಆಧಾರದ ಮೇಲೆ ಮತ ಚಲಾಯಿಸಿದ್ದಾರೆ ಎಂಬುದರ ಕುರಿತು ಲೋಕನೀತಿ-ಸಿಎಸ್ಡಿಎಸ್ ಸಮೀಕ್ಷೆ ನಡೆಸಿತು. ಬಿಜೆಪಿಯ ಸಾಮಾನ್ಯ ಹಿಂದುತ್ವ ಸಿದ್ಧಾಂತಕ್ಕಿಂತ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಮತದಾರರ ಮೇಲೆ ಹೆಚ್ಚಿನ ಪರಿಣಾಮ ಬೀರಿವೆ ಎಂದು ಅಧ್ಯಯನ ಹೇಳಿದೆ.
ಯುಪಿ: 'ರಾಮಮಂದಿರ 2,100 ಕ್ವಿಂಟಾಲ್ ಗಂಟೆ ಶಬ್ದಕ್ಕೆ ಹಗಲುಗನಸು ಬೀಳಲ್ಲ'ಯೋಗಿ
ಕೇಂದ್ರ ಸರ್ಕಾರದ ಕಿಶನ್ ಸಮ್ಮಾನ್ ನಿಧಿ, ಉಸ್ವಾಲಾ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಉಚಿತ ಪಡಿತರ ಸಾಮಗ್ರಿಗಳಿಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ರೈತರು, ಬ್ರಾಹ್ಮಣರು, ದಲಿತರು ಸೇರಿದಂತೆ ಸಮಾಜದ ಎಲ್ಲ ವರ್ಗದ ಮತದಾರರನ್ನು ತಲುಪಿವೆ ಎಂದೂ ಅಧ್ಯಯನ ಹೇಳಿದೆ. ಶೇ.38ರಷ್ಟು ಮಂದಿ ಅಭಿವೃದ್ಧಿ ಕಾರ್ಯಗಳತ್ತಲೂ ಗಮನ ಹರಿಸಿದ್ದಾರೆ ಎಂದಿದೆ. 10% ಜನರು ಸರ್ಕಾರದ ಕ್ರಮಗಳ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು. ಜೊತೆಗೆ ರಾಮಮಂದಿರ ನಿರ್ಮಾಣ ಹಾಗೂ ಹಿಂದುತ್ವದ ತತ್ವಗಳಿಗಾಗಿ ಕೇವಲ 2% ಜನರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ. 2017ಕ್ಕೆ ಹೋಲಿಸಿದರೆ ಬಿಜೆಪಿ ಸರ್ಕಾರಕ್ಕೆ ಬೆಂಬಲ ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.
ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಯುಪಿಯ 403 ವಿಧಾನಸಭೆ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202. ಇದರಲ್ಲಿ ಬಿಜೆಪಿ 255 ಸ್ಥಾನಗಳನ್ನು ಪಡೆದಿದೆ. ಸಮಾಜವಾದಿ ಪಕ್ಷ ಒಟ್ಟು 111 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದು ಹೀನಾಯ ಸೋಲು ಕಂಡಿದೆ. ಇನ್ನೂ ಬಿಎಸ್ಪಿ ಕೂಡ ಒಂದೇ ಒಂದು ಸ್ಥಾನ ಪಡೆದುಕೊಂಡಿದ್ದು ಭಾರೀ ಮುಖಭಂಗವನ್ನು ಎದುರಿಸಿದೆ. ಇನ್ನೂ ಇತರೆ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳನ್ನು ಮಾತ್ರ ಸೆಳೆದಿದೆ. ಈ ಬಾರಿ ಎಸ್ಪಿಗೆ ಕಾಂಗ್ರೆಸ್ ಹಾಗೂ ಬಿಎಸ್ಪಿ ಮತಗಳು ಸಿಕ್ಕಿವೆ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಇನ್ನೂ ಮೊದಲಬಾರಿಗೆ ಸ್ಪರ್ಧಿಸಿದೆ ಗೋರಖ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಹಾಗೂ ಕರ್ಹಾಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೆಶ್ ಯಾದವ್ ಬಹುಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದಲ್ಲಿ ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಸ್ಥಾನಗಳಿಗೆ ಮತದಾನ ನಡೆಯಿತು. ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ರಾಜ್ಯದ 55 ಸ್ಥಾನಗಳಿಗೆ ಮತದಾನ ನಡೆಯಿತು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 20ರಂದು ಮೂರನೇ ಹಂತದಲ್ಲಿ 59 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು. ಫೆಬ್ರವರಿ 23ರಂದು ನಾಲ್ಕನೇ ಹಂತದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ತದನಂತರ ಫೆಬ್ರವರಿ 27ರಂದು ಐದನೇ ಹಂತದಲ್ಲಿ 60 ಸ್ಥಾನಗಳಿಗೆ ಚುನಾವಣೆ ನಡೆಯಿತು. ಮಾರ್ಚ್ 3ರಂದು ಆರನೇ ಹಂತದಲ್ಲಿ 57 ಸ್ಥಾನಗಳಿಗೆ ಮತ್ತು ಮಾರ್ಚ್ 7ರಂದು ಅಂತಿಮವಾಗಿ ಏಳನೇ ಹಂತದಲ್ಲಿ 54 ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ.
2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.