ಯುಪಿಯಲ್ಲಿ ಶುಕ್ರವಾರ ಯೋಗಿ ಪದಗ್ರಹಣ; ದಿ ಕಾಶ್ಮೀರ್ ಫೈಲ್ಸ್ ಚಿತ್ರತಂಡಕ್ಕೂ ಆಹ್ವಾನ
ಲಕ್ನೋ, ಮಾರ್ಚ್ 25: ದೇಶದಲ್ಲಿ "ದಿ ಕಾಶ್ಮೀರ್ ಫೈಲ್ಸ್" ಸಿನಿಮಾ ಸಾಕಷ್ಟು ವಿಷಯಗಳಿಗೆ ಸುದ್ದಿ ಆಗುತ್ತಿದೆ. ಬಾಲಿವುಡ್ ಚಿತ್ರ ಬಿಡುಗಡೆಯಾದ ಮರುದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ.
ಉತ್ತರ ಪ್ರದೇಶ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ "ದಿ ಕಾಶ್ಮೀರ್ ಫೈಲ್ಸ್" ಚಿತ್ರತಂಡಕ್ಕೂ ಆಹ್ವಾನ ನೀಡಲಾಗಿದೆ. ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮತ್ತು ನಿರ್ದೇಶಕ ಅಗ್ನಿಹೋತ್ರಿರಿಗೆ ಆಹ್ವಾನಿಸಲಾಗಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಮಾಣವಚನಕ್ಕೆ ಮಾ.25ರ ಮುಹೂರ್ತ
ಮಾರ್ಚ್ 25ರ ಶುಕ್ರವಾರ ಸಂಜೆ 4 ಗಂಟೆಗೆ ಲಕ್ನೋದಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನೂತನ ಮುಖ್ಯಮಂತ್ರಿ ಆಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲಕ್ನೋದಲ್ಲಿ ಶುಕ್ರವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಅದ್ಧೂರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಮುಖ್ಯ ಅತಿಥಿ:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇವರ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಎಲ್ಲಾ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗಿದೆ.
ಬಾಲಿವುಡ್ ನಟ-ನಟಿಯರಿಗೂ ಆಹ್ವಾನ:
ಯೋಗಿ ಆದಿತ್ಯನಾಥ್ ಪಟ್ಟಾಭಿಷೇಕಕ್ಕೆ ಬಾಲಿವುಡ್ ಸ್ಟಾರ್ ನಟ-ನಟಿಯರಿಗೂ ಆಹ್ವಾನ ನೀಡಲಾಗಿದೆ. ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಣಾವತ್, ಬೋನಿ ಕಪೂರ್ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿದೆ. ಹೈಪ್ರೊಫೈಲ್ ನಾಯಕರು, ಉದ್ಯಮಿಗಳು, ರಾಜಕಾರಣಿಗಳು ಈ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.
ಲಕ್ನೋದ ಏಕಾನಾ ಕ್ರೀಡಾಂಗಣದ ವಿಶೇಷತೆ:
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸುವ ಅಂತಾರಾಷ್ಟ್ರೀಯ ಏಕನಾ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಐದು ನೂರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಭಾರತದ ಐದನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಒಟ್ಟಿಗೆ ಒಂದು ಸಾವಿರ ಕಾರ್ ಪಾರ್ಕಿಂಗ್ ಮಾಡಬಹುದು ಮತ್ತು ಐದು ಸಾವಿರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶವಿದೆ. ಈ ಕ್ರೀಡಾಂಗಣವು ಅಂತಾರಾಷ್ಟ್ರೀಯ ಮಟ್ಟದ ಫ್ಲಡ್ ಲೈಟ್ಗಳು, ಮಾಧ್ಯಮ ಕೇಂದ್ರ ಇತರ ಸೌಲಭ್ಯಗಳನ್ನು ಹೊಂದಿದೆ. ಬರೋಬ್ಬರಿ 70 ಎಕರೆ ಪ್ರದೇಶದ ವಿಸ್ತೀರ್ಣವನ್ನು ಹೊಂದಿದೆ. 50,000 ಆಸನಗಳ ಸಾಮರ್ಥ್ಯವನ್ನು ಹೊಂದಿರುವ ಕ್ರೀಡಾಂಗಣದಲ್ಲಿ 200 ವಿವಿಐಪಿ ಆಸನಗಳ ವ್ಯವಸ್ಥೆಯೂ ಇದೆ.
ಯೋಗಿಗೆ ಎರಡನೇ ಬಾರಿ ಸಿಎಂ ಯೋಗ:
Recommended Video
2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸಿದೆ. ರಾಜ್ಯದ 75 ಜಿಲ್ಲೆಗಳ 403 ಕ್ಷೇತ್ರಗಳಲ್ಲಿ ಸರ್ಕಾರ ರಚಿಸುವುದಕ್ಕೆ ಕನಿಷ್ಠ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಆದರೆ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಡ್ಡು ಹೊಡೆದ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವಿನ ಸೈಕಲ್ ಏರಿದೆ. ಅಪ್ನಾ ದಳ 12, ಬಹುಜನ ಸಮಾಜವಾದಿ ಪಕ್ಷ 1, ಜೆಡಿಎಲ್ 2, ನಿರ್ಬಲ್ ಇಂಡಿಯನ್ ಶೋಷಿತ ಹಮಾರಾ ಆಮ್ ದಳ 6, ರಾಷ್ಟ್ರೀಯ ಲೋಕ ದಳ 8, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮಾತ್ರ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ.