ಕೊರೊನಾವೈರಸ್ ಬದಲಿಗೆ ಬಾವಲಿಗಳ ಸಾವೇ ಜನರಲ್ಲಿ ಹುಟ್ಟಿಸಿದ್ದೇಕೆ ಆತಂಕ?
ಲಕ್ನೋ, ಮೇ.27: ಕೊರೊನಾ ವೈರಸ್. ವಿಶ್ವದ ಜನರಲ್ಲಿ ಭಯ ಹುಟ್ಟಿಸಲು ಇದೊಂದು ಪದವೇ ಸಾಕು. ಕೊರೊನಾವೈರಸ್ ಎಂದರೆ ಭಾರತೀಯರಷ್ಟೇ ಅಲ್ಲ ಜಗತ್ತಿನಾದ್ಯಂತ ಜನರು ಕನಸಿನಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ಸೃಷ್ಟಿಯಾಗಿ ಬಿಟ್ಟಿದೆ.
ಕೊರೊನಾ ವೈರಸ್ ಮಹಾಮಾರಿಗೆ ಬುಧವಾರದ ಅಂಕಿ-ಅಂಶಗಳ ಪ್ರಕಾರ ಜಗತ್ತಿನಾದ್ಯಂತ 3,52,225ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 56,84,795ಕ್ಕೂ ಅಧಿಕ ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.
ಕೊರೊನಾ ವೈರಸ್ ಹರಡಲು ಪ್ಯಾಂಗೋಲಿನ್ ಕಾರಣ?
ಭಾರತದ ಮಟ್ಟಿಗೆ ಕೊರೊನಾ ವೈರಸ್ ಸೋಂಕಿತರ ಅಂಕಿ-ಸಂಖ್ಯೆಗಳೇನೂ ಕಡಿಮೆಯಿಲ್ಲ. ಬುಧವಾರದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 1,51,863ಕ್ಕೂ ಅಧಿಕ ಮಂದಿ ಸೋಂಕಿತರಿದ್ದರೆ 4,344 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಇಷ್ಟೆಲ್ಲ ನಡೆದರೂ ಕೊರೊನಾ ವೈರಸ್ ಗಿಂತ ಉತ್ತರ ಪ್ರದೇಶದ ಈ ಭಾಗದಲ್ಲಿ ಜನರು ಬಾವಲಿಗಳ ಸಾವಿಗೆ ಭಯ ಪಡುತ್ತಿದ್ದಾರೆ.
ನೂರಾರು ಬಾವಲಿಗಳ ಸಾವಿನಿಂದ ಬೆದರಿದ ಜನರು
ಉತ್ತರ ಪ್ರದೇಶ ಗೋರಖ್ ಪುರದ ಬೆಲ್ಘಟ್ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಬಾವಲಿಗಳು ಮೃತಪಟ್ಟಿರುವುದು ವರದಿಯಾಗಿದೆ. ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಬಾವಲಿಗಳೇ ಕಾರಣ ಎಂಬ ಒಂದು ಸುದ್ದಿ ತಿಳಿದಿದ್ದ ಸ್ಥಳೀಯರಲ್ಲಿ ಈ ಬಾವಲಿಗಳ ಸಾವು ಭೀತಿಯನ್ನು ಹುಟ್ಟಿಸಿದ್ದು, ಆತಂಕದಲ್ಲೇ ಕಾಲ ಕಳೆಯುವಂತೆ ಮಾಡಿದೆ.
ಮಾವಿನ ತೋಟದಲ್ಲಿ ಸತ್ತು ಬಿದ್ದ ನೂರಾರು ಬಾವಲಿಗಳು
ಬೆಳ್ಳಂಬೆಳಗ್ಗೆ ದ್ರುವ ನಾರಾಯಣ ಶಶಿ ಅವರ ಮಾವಿನ ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ನೂರಾರು ಬಾವಲಿಗಳು ಬಿದ್ದಿದ್ದವು. ಅದರಲ್ಲಿ ನೂರಾರು ಬಾವಲಿಗಳು ಸತ್ತು ಬಿದ್ದಿರುವುದು ನನ್ನ ಗಮನಕ್ಕೆ ಬಂದಿತು ಎಂದು ಪಂಕಜ್ ಶಶಿ ಎಂಬುವವರು ತಿಳಿಸಿದ್ದಾರೆ. ನಂತರದಲ್ಲಿ ಬಾವಲಿಗಳು ಬಿದ್ದಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಅವುಗಳನ್ನೆಲ್ಲ ಸಾಗಿಸಿದರು. ನಂತರದಲ್ಲಿ ಅತಿಯಾದ ಶಾಖದಿಂದ ಬಾವಲಿಗಳು ಮೃತಪಟ್ಟಿರುವ ಶಂಕೆಯಿದೆ. ತೋಟಕ್ಕೆ ನೀರನ್ನು ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ ಎಂದು ಪಂಕಜ್ ತಿಳಿಸಿದ್ದಾರೆ.
ಬಾವಲಿಗಳ ಸಾವಿಗೆ ಅತಿಯಾದ ಶಾಖವೇ ಕಾರಣ
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಲೇ ಬಾವಲಿಗಳು ಕೂಡಾ ಬಲಿಯಾಗಿರಬಹುದು ಎಂದು ಸ್ಥಳೀಯರು ಆತಂಕದಲ್ಲಿದ್ದಾರೆ. ಆದರೆ, ಉತ್ತರ ಪ್ರದೇಶದ ಹಲವೆಡೆಗಳಲ್ಲಿ ಬಿಸಿಲಿನ ಶಾಕ 45 ಡಿಗ್ರಿ ಸೆಲ್ಸಿಯಸ್ ಮೀರಿದ ಹಾಗೆ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಬಿಸಿಲಿನ ಶಾಖವನ್ನು ತಾಳದೇ ಬಾವಲಿಗಳು ಮೃತಪಟ್ಟಿರಬಹುದು ಎಂದು ಊಹಿಸಿದ್ದಾರೆ. ಮೃತ ಬಾವಲಿಗಳ ಮಾದರಿಯನ್ನು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ.
ಪಶುವೈದ್ಯಕೀಯ ವರದಿ ಮೇಲೆ ಗಮನ
ಬಾವಲಿಗಳ ಸಾವಿಗೇನು ಕಾರಣ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವುದಕ್ಕಾಗಿ ಮೃತಪಟ್ಟ ಬಾವಲಿಗಳ ಮಾದರಿಯನ್ನು ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರವಷ್ಟೇ ಅಧಿಕೃತವಾಗಿ ಬಾವಲಿಗಳ ಸಾವಿನ ಹಿಂದಿನ ಕಾರಣ ಸ್ಪಷ್ಟವಾಗಲಿದೆ ಎಂದು ವಿಭಾಗ ಅರಣ್ಯ ಅಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.