ತಾಂಡವ್ ಕೇಸ್: ಅಪರ್ಣಾ ಪುರೋಹಿತ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಅಲಹಾಬಾದ್, ಫೆಬ್ರವರಿ 26: ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಿರುವ ''ತಾಂಡವ್'' ವೆಬ್ ಸೀರಿಸ್ಗೆ ಸಂಬಂಧಿಸಿದಂತೆ ಅಮೆಜಾನ್ ಪ್ರೈಮ್ನ ಕಾರ್ಯಕ್ರಮಗಳ ಭಾರತ ವಿಭಾಗದ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ತಾಂಡವ್ ಹೆಸರಿನ ಬಳಕೆ ಅವಹೇಳನಕಾರಿ, ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಎಂದು ನೀಡಿದ ದೂರಿನ ಮೇರೆಗೆ ಅಪರ್ಣಾ ಪುರೋಹಿತ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಎಫ್ಐಆರ್ ರದ್ದು ಕೋರಿ ಅಪರ್ಣಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಅಪರ್ಣಾರನ್ನು ಬಂಧಿಸದಂತೆ ಅಲಾಹಾಬಾದ್ ಹೈಕೋರ್ಟ್ ಸೂಚಿಸಿದ್ದು, ಮುಂದಿನ ಆದೇಶದ ತನಕ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ನ್ಯಾಯಮೂರ್ತಿ ಸಿದ್ಧಾರ್ಥ್ ಸೂಚಿಸಿದ್ದಾರೆ.
ದೇಶದ ವಿವಿಧೆಡೆ ತಾಂಡವ್ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಕಿರಣ್ ಆರಾಧ್ಯ ಎಂಬುವರು ಬೆಂಗಳೂರಿನ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ತಾಂಡವ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಾಂಡವ್ ಚಿತ್ರ ನಿರ್ಮಾಣ ತಂಡದ ವಿರುದ್ಧ ಎಫ್ಐಆರ್ ಹಾಕಿದ್ದಾರೆ.
ತಾಂಡವ್ ಸರಣಿಯಲ್ಲಿ ಶಿವನ ಸಂಬೋಧನೆ ಬಗ್ಗೆ ಚರ್ಚೆ
''ಬಹುಸಂಖ್ಯಾತ ಸಮುದಾಯದ ಭಾವನೆಗಳನ್ನು ಅವರ ನಂಬಿಕೆಯ ಪಾತ್ರಗಳನ್ನು ಅಗೌರವದಿಂದ ತೋರ್ಪಡಿಸುವ ಮೂಲಕ ನೋಯಿಸಲಾಗಿದೆ. ವಿಭಿನ್ನ ಜಾತಿಗಳು ಮತ್ತು ಸಮುದಾಯಗಳ ನಡುವಿನ ಅಂತರ ತಗ್ಗಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿರುವಾಗ ಮೇಲ್ಜಾತಿಗಳು ಮತ್ತು ಪರಿಶಿಷ್ಟ ಜಾತಿಗಳ ನಡುವಿನ ಅಂತರ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ, ವೆಬ್ ಸರಣಿಯಲ್ಲಿ ಶಿವನಿಗೆ ಸಂಬೋಧಿಸಲಾಗುವ ಪದದ ಬಗ್ಗೆ ದೇಶದ ಬಹುಸಂಖ್ಯಾತರಿಗೆ ಅವಹೇಳನಕಾರಿಯಾಗಿ ಕಂಡಿದೆ'' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ
ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ 'ತಾಂಡವ್' ವೆಬ್ ಸರಣಿ ಮೇಲೆ ಈಗಾಗಲೇ ದೇಶದ ವಿವಿಧೆಡೆ ದೂರು ದಾಖಲಾಗಿದ್ದು, ವಿವಿಧ ಕೋರ್ಟ್ ಗಳಲ್ಲಿ ಪ್ರಕರಣವು ವಿಚಾರಣೆ ಹಂತದಲ್ಲಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಾಂಡವ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಜಾಮೀನು ಅರ್ಜಿಯನ್ನು ಆಯಾ ರಾಜ್ಯಗಳ ಹೈಕೋರ್ಟ್ ನಲ್ಲಿ ಸಲ್ಲಿಸುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ತಾಂಡವ್ ನಿರ್ಮಾಣಾ ತಂಡಕ್ಕೆ ಭೀತಿ
ಅಮೆಜಾನ್ ಪ್ರೈ ವಿಡಿಯೋದ ಅಪರ್ಣಾ ಪುರೋಹಿತ್, ತಾಂಡವ್ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಫರಾನ್ ಅಖ್ತರ್, ನಟ ಜೀಶಾನ್ ಅಯುಬ್, ಸೈಫ್ ಅಲಿ ಖಾನ್ ವಿರುದ್ಧ ದೂರು ದಾಖಲಿಸಲಾಗಿದೆ. ಹಿಂದು ದೇವರುಗಳ ವಿರುದ್ಧ ಅವಹೇಳನಕಾರಿ ಸಂಭಾಷಣೆಗಳಿವೆ. ಶಿವನನ್ನು ಕೆಟ್ಟ ಪದಗಳಿಂದ ನಿಂದಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸನ್ನಿವೇಶ, ದೃಶ್ಯ ತೆಗೆದು ಹಾಕಬೇಕು ಹಾಗೂ ಕ್ಷಮೆಯಾಚಿಸಬೇಕು ಎಂದು ದೂರು ದಾಖಲಿಸಲಾಗಿತ್ತು. ಕ್ಷಮೆಯಾಚಿಸಿದ ಚಿತ್ರ ತಂಡ ಎರಡು ದೃಶ್ಯಗಳಿಗೆ ಕತ್ತರಿ ಹಾಕಿದೆ. ಶಿವ ಪಾತ್ರಧಾರಿಯಾಗಿ ಜೀಶಾನ್ ಕಾಣಿಸಿಕೊಂಡಿದ್ದು ಹಾಗೂ ದಲಿತ ಮುಖಂಡರಿಗೆ ಅವಮಾನ ದೃಶ್ಯ ಡಿಲೀಟ್ ಮಾಡಲಾಗಿದೆ.
ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲು
ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂಬ ಆರೋಪದ ಮೇಲೆ ಐಪಿಸಿ ಸೆಕ್ಷನ್ 295 ಎ, 153ಎ, 501, 501 (1)(B) ಹಾಗೂ 298 ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ಗಳಾದ 66 ಮತ್ತು 67ರ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತರ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಬಹುತೇಕ ಇದೇ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಹಂತದಲ್ಲಿ ಕೋರ್ಟ್ ನಲ್ಲಿ ವಿಚಾರಣೆ ಜಾರಿಯಲ್ಲಿದೆ.