ಪ್ರಚಾರದ ಕೊನೇ ದಿನ ರಾಹುಲ್ ನಾಡಿನಲ್ಲಿ ಅಮಿತ್ ಶಾ ಬೃಹತ್ ರೋಡ್ ಶೋ
ಅಮೇಥಿ, ಮೇ 4 (ಎಎನ್ಐ): ಗಾಂಧಿ ಕುಟುಂಬದ ಕರ್ಮಭೂಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪಕ್ಷದ ಅಭ್ಯರ್ಥಿ ಸ್ಮೃತಿ ಇರಾನಿ ಪರವಾಗಿ ಬೃಹತ್ ರೋಡ್ ಶೋ ನಡೆಸಿದ್ದಾರೆ.
ರೋಡ್ ಶೋ ಉದ್ದಕ್ಕೂ ಜನರು ತೋರಿಸಿದ ಪ್ರೀತಿಯಿಂದಲೇ ಅರ್ಥವಾಗುತ್ತದೆ, ನಮ್ಮ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಜಯಗಳಿಸಲಿದ್ದಾರೆಂದು ವಿಶ್ವಾಸದ ಮಾತನಾಡಿರುವ ಅಮಿತ್ ಶಾ, ರಾಹುಲ್ ಗಾಂಧಿಗೆ ಈ ಬಾರಿ ಸೋಲು ಕಟ್ಟಿಟ್ಟಬುತ್ತಿ ಎಂದಿದ್ದಾರೆ.
ದೂರದ ರಾಜಸ್ಥಾನದಲ್ಲೂ ಕುಮಾರಸ್ವಾಮಿಯನ್ನು ಬೆಂಬಿಡದ ಪ್ರಧಾನಿ ಮೋದಿ
ಕ್ಷೇತ್ರದ ಜನತೆಗೆ ಪ್ರಧಾನಿ ಮೋದಿಯವರ ಬಗ್ಗೆ ಅಚಲ ವಿಶ್ವಾಸವಿದೆ, ಮೇ 23ರ ನಂತರ ವಿಪಕ್ಷಗಳ ಎಲ್ಲಾ ಟೀಕೆಗೂ ಉತ್ತರ ಸಿಗಲಿದೆ. ಬಹುಮತದಿಂದ ನಾವು ಸರಕಾರ ರಚಿಸಲಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದುವರೆಗಿನ ಇತಿಹಾಸದಲ್ಲಿ ಅಭಿವೃದ್ದಿ ಎನ್ನುವುದು ಸಾಧ್ಯವಿದೆ ಎಂದು ಅಮೇಥಿ ಜನರಿಗೆ ಇತ್ತೀಚೆಗೆ ವಿಶ್ವಾಸ ಬರಲಾರಂಭಿಸಿದೆ. ಗಾಂಧಿ ಕುಟುಂಬದ ಮೇಲೆ ಸತತವಾಗಿ ಇಲ್ಲಿನ ಜನತೆ ನಿಷ್ಠೆ ತೋರಿದರೂ, ಎಷ್ಟೋ ಹಳ್ಳಿಗಳಲ್ಲಿ ಇನ್ನೂ ವಿದ್ಯುತ್ ನೀಡಲು ಗಾಂಧಿ ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ ಎಂದು ಅಮಿತ್ ಶಾ ಟೀಕಿಸಿದ್ದಾರೆ.
ಅಮೇಥಿ ಜನರಿಗೆ ಭಾವನಾತ್ಮಕ ಪತ್ರ ಬರೆದಿರುವ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿರುವ ಸ್ಮೃತಿ, ಈ ಚುನಾವಣೆಯ ನಂತರ ತಾವು ಅಮೇಥಿಯ ಸಂಸದರಾಗಿರುವುದಿಲ್ಲ ಎನ್ನುವ ಭಯ ಅವರಿಗೆ ಕಾಡುತ್ತಿರಬಹುದು ಎಂದು ಹೇಳಿದ್ದಾರೆ.
ಅಮೇಥಿಯ ಜನರಿಗೆ ಬಹಿರಂಗ ಪತ್ರ ಬರೆದ ರಾಹುಲ್ ಗಾಂಧಿ
ಅಮೇಥಿಯಲ್ಲಿ ಸೋಮವಾರ (ಮೇ 6) ಚುನಾವಣೆ ನಡೆಯಲಿದ್ದು ಬಹಿರಂಗ ಪ್ರಚಾರಕ್ಕೆ ಇಂದು ತೆರೆಬೀಳಲಿದೆ. ಹಾಗಾಗಿ, ಕೊನೆಯ ದಿನ ಭರ್ಜರಿ ರೋಡ್ ಶೋ ಮೂಲಕ ಪ್ರಚಾರಕ್ಕೆ ಬಿಜೆಪಿ ತೆರೆ ಎಳೆಯುತ್ತಿದೆ. ರೋಡ್ ಶೋ ಉದ್ದಕ್ಕೂ 'ಮೋದಿ.. ಮೋದಿ' ಘೋಷಣೆ ಮೊಳಗಿದೆ.