ತಾಜ್ ಮಹಲ್ಗೆ 'ರಾಮ ಮಹಲ್' ಎಂದು ಮರುನಾಮಕರಣ: ಬಿಜೆಪಿ ಶಾಸಕ
ಆಗ್ರಾ, ಮಾರ್ಚ್ 15: ದೇಶದ ಐತಿಹಾಸಿಕ ಸ್ಮಾರಕ ತಾಜ್ಮಹಲ್ಗೆ 'ರಾಮ ಮಹಲ್' ಅಥವಾ 'ಶಿವ ಮಹಲ್' ಎಂದು ಮರುನಾಮಕರಣ ಮಾಡಲಾಗುವುದು ಎಂಬುದಾಗಿ ಉತ್ತರ ಪ್ರದೇಶದ ಬೈರಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳುವ ಮೂಲಕ ತಾಜ್ ಮಹಲ್ ಕುರಿತಾದ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ತಾಜ್ಮಹಲ್ ಮೂಲತಃ ಶಿವ ದೇವಾಲಯವಾಗಿತ್ತು. ಅದನ್ನು ಮರುನಿರ್ಮಾಣ ಮಾಡಿ ಸಮಾಧಿಯನ್ನು ಸ್ಥಾಪಿಸಲಾಯಿತು ಎಂದು ಸುರೇಂದ್ರ ಸಿಂಗ್ ಅವರು ಹೇಳಿದ್ದಾರೆ.
ತಾಜ್ಮಹಲ್ನಲ್ಲಿ ಶಿವಪೂಜೆ: ಹಿಂದೂ ಮಹಾಸಭಾದ ಮೂವರ ಬಂಧನ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮರಾಠಾ ಯೋಧ ರಾಜ ಶಿವಾಜಿ ಮಹಾರಾಜರ ವಂಶದವರು. ಮುಸ್ಲಿಂ ದಾಳಿಕೋರರು ಭಾರತದ ಸಂಸ್ಕೃತಿಯನ್ನು ನಾಶಪಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದರೂ, ಈಗಿನ 'ಉತ್ತರ ಪ್ರದೇಶದ ಸುವರ್ಣಯುಗ'ವು ಎಲ್ಲವನ್ನೂ ಬದಲಿಸಲಿದೆ ಎಂದು ಹೇಳಿದ್ದಾರೆ.
'ದೇವರು ಇಚ್ಛಿಸಿದ್ದರೆ, ಶೀಘ್ರದಲ್ಲಿಯೇ ತಾಜ್ಮಹಲ್ ಈಗ ರಾಮ ಮಹಲ್ ಅಥವಾ ಶಿವ ಮಹಲ್ ಆಗಿದೆ ಎಂಬುದನ್ನು ತಿಳಿಯುವಂತಾಗುತ್ತದೆ. ಭಾರತದ ಸಂಸ್ಕೃತಿಯನ್ನು ನಾಶಪಡಿಸಲು ಮುಸ್ಲಿಂ ದಾಳಿಕೋರರು ಎಲ್ಲ ರೀತಿಯಲ್ಲಿಯೂ ಪ್ರಯತ್ನಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಈಗ ಶಿವಾಜಿ ವಂಶಸ್ಥರ ರೂಪದಲ್ಲಿ ಸುವರ್ಣಯುಗ ಬಂದಿದೆ' ಎಂದಿದ್ದಾರೆ.
ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ?: ಯೋಗಿ ಆದಿತ್ಯನಾಥ್
Recommended Video
'ತಾಜ್ಮಹಲ್ ಬದಲಾಗಲಿದೆ. ಅದು ಶಿವ ದೇವಾಲಯವಾಗಿತ್ತು. ತಾಜ್ ಮಹಲ್ ಮತ್ತೆ ರಾಷ್ಟ್ರೀಯ ಪಾರಂಪರಿಕ ತಾಣವಾಗಲಿದೆ ಅಥವಾ ರಾಮ ದೇವಾಲಯ ಆಗಲಿದೆ. ಅದು ರಾಮ ದೇವಾಲಯವಾಗಿ ಬದಲಾಗಲಿದೆ ಮತ್ತು ಅದರ ಹೆಸರು ಬದಲಾಗಲಿದೆ. ಅದು ಯೋಗಿಜಿ ಅವರಿಂದಾಗಿ ಬದಲಾವಣೆ ಕಾಣಲಿದೆ' ಎಂದು ಸುರೇಂದ್ರ ಸಿಂಗ್ ತಿಳಿಸಿದ್ದಾರೆ.