ಸ್ವಚ್ಛ,ಸುರಕ್ಷಿತ ಕುಂಭ ಮೇಳ ಸಿದ್ಧತೆ ಖುದ್ದು ಪರಿಶೀಲಿಸಿದ ಆದಿತ್ಯನಾಥ್
ಪ್ರಯಾಗ್ ರಾಜ್(ಉತ್ತರಪ್ರದೇಶ), ಜನವರಿ 11: ಪ್ರತಿ ಆರು ವರ್ಷಕ್ಕೊಮ್ಮೆ ನಡೆಯುವ ಅರ್ಧ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್(ಅಲಹಾಬಾದ್) ಈಗಾಗಲೇ ಸಿದ್ಧಗೊಂಡಿದೆ. ಜನವರಿ 15 ರಿಂದ ಮಾರ್ಚ್ 04 ರವರೆಗೆ ನಡೆಯಲಿರುವ ಈ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಹರಿದುಬರುತ್ತಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರುವ ಮೊದಲ ಕುಂಭಮೇಳ ಇದಾಗಿದ್ದು, ಕುಂಭಮೇಳದ ಸಿದ್ಧತೆಯನ್ನು ಖುದ್ದು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ.
ಎಲ್ಲೆಲ್ಲೂ ಕೇಸರಿಯ ಮಾತು! ವಿಶ್ವವಿಖ್ಯಾತ ಕುಂಭಮೇಳಕ್ಕೆ ಕ್ಷಣಗಣನೆ!
ಸ್ವಚ್ಛ ಕುಂಭ್, ಸುರಕ್ಷಿತ್ ಕುಂಭ್ ಇದು ಈ ಬಾರಿಯ ಥೀಮ್ ಆಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಇದಕ್ಕಾಗಿ 1,20,000 ಪರಿಸರ ಸ್ನೇಹಿ, ಇ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
40,000 ಬೀದಿ ದೀಪಗಳನ್ನು ಸ್ಥಾಪಿಸಲಾಗಿದೆ. ಕುಂಭಮೇಳಕ್ಕಾಗಿ 3,200 ಹೆಕ್ಟೇರು ಪ್ರದೇಶವನ್ನು ಗುರುತಿಸಲಾಗಿದೆ. ಜನವರಿ 17ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪ್ರಯಾಗದಲ್ಲಿ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮ ಸ್ಥಳದಲ್ಲಿ ಪೂರ್ಣಕುಂಭಮೇಳ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಆರು ವರ್ಷಕ್ಕೊಮ್ಮೆ ಅರ್ಧನದಿಯ ತಟದಲ್ಲಿ, ಹರಿದ್ವಾರದಲ್ಲಿ ಗಂಗಾ ನದಿಯ ತಟದಲ್ಲಿ, ನಾಸಿಕದಲ್ಲಿ ಗೋದಾವರಿ ನದಿ ತಟದಲ್ಲಿ, ಉಜ್ಜೈನಿಯಲ್ಲಿ ಕ್ಷಿಪ್ರಾ ನದಿ ತಟದಲ್ಲಿ ಕುಂಭಮೇಳಗಳು ನಡೆಯುತ್ತವೆ.
ಪ್ರಯಾಗದಲ್ಲಿ ನಡೆಯುವ ಮಹಾಕುಂಭ ಮೇಳ ವಿಶ್ವದಲ್ಲೇ ದೊಡ್ಡ ಮೇಳ ಎಂಬ ಖ್ಯಾತಿ ಗಳಿಸಿದೆ. 2019 ರ ಅರ್ಧ ಕುಂಭಮೇಳದ ತಯಾರಿಗಾಗಿಯೇ ಸುಮಾರು 42 ದಶಲಕ್ಷ ಕೋಟಿ ರೂ.ವೆಚ್ಚವಾಗಿದೆ. 3200 ಹೆಕ್ಟೇರ್ ಪ್ರದೇಶದಲ್ಲಿ ಮೇಳಕ್ಕೆ ಸಿದ್ಧತೆ ನಡೆದಿದೆ. 122000 ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ.
ಭಾರತೀಯ ರೈಲ್ವೇ ಇಲಾಖೆಯು ಕುಂಭಮೇಳಕ್ಕೆಂದೇ 800 ರೈಲುಗಳ ವ್ಯವಸ್ಥೆ ಮಾಡಿದೆ. ಎಲ್ಲೆಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ರಕ್ಷಣಾ ದಳ, ಹಡಗುಗಳ ವ್ಯವಸ್ಥೆ, ಮೇಳಕ್ಕೆ ಬರುವವರಿಗೆ ತಂಗಲು ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ.