ಸಂಸದರ ಅಮಾನತು: ಚರ್ಚೆ ಮೂಲಕ ಬಗೆಹರಿಸಿಕೊಳ್ಳಲಿ ಎಂದ ಮಾಯಾವತಿ
ಲಕ್ನೋ, ನವೆಂಬರ್ 30: 12 ಸಂಸದರ ಅಮಾನತು ಕುರಿತು ಮಾತನಾಡಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಸರ್ಕಾರವು ಕಠಿಣ ನಿಲುವನ್ನು ತೆಗೆದುಕೊಳ್ಳಬಾರದು ಹಾಗೂ ಮಾತುಕತೆಯ ಮೂಲಕವೇ ಇದನ್ನು ಬಗೆಹರಿಸಿಕೊಳ್ಳಬೇಕು. ಈ ವಿಚಾರವು ಕಳೆದ ಮುಂಗಾರು ಅಧಿವೇಶನಕ್ಕೆ ಸಂಬಂಧಿಸಿದ್ದು ಹಾಗೂ ಈಗ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಎಂದರು.
ಉ.ಪ್ರ ಚುನಾವಣೆ: ಬಿಎಸ್ಪಿ ಮತಗಳನ್ನು ಬಾಚಿಕೊಳ್ಳಲು ಎಸ್ಪಿ ಯತ್ನ
ಕಳೆದ ಮುಂಗಾರು ಅಧಿವೇಶನದ ಅವಧಿಯಲ್ಲಿ ಅನುಚಿತ, ಅಶಿಸ್ತಿನ ವರ್ತನೆ ಪ್ರದರ್ಶಿಸಿದ ಕಾರಣಕ್ಕಾಗಿ ರಾಜ್ಯಸಭೆಯ ಕಾಂಗ್ರೆಸ್ ಸಂಸದೆ ಛಾಯಾ ವರ್ಮಾ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಹಾಗೂ ಟಿಎಂಸಿಯ ಡೋಲಾ ಸೇನ್ ಸೇರಿದಂತೆ 12 ಪ್ರತಿಪಕ್ಷ ಸದಸ್ಯರನ್ನು ಸೋಮವಾರ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.
ಅಮಾನತುಗೊಂಡವರಲ್ಲಿ ಕಾಂಗ್ರೆಸ್ನ ಆರು, ತೃಣಮೂಲ ಕಾಂಗ್ರೆಸ್ ಹಾಗೂ ಶಿವಸೇನೆಯ ತಲಾ ಇಬ್ಬರು, ಸಿಪಿಐ ಹಾಗೂ ಸಿಪಿಎಂನ ತಲಾ ಇಬ್ಬರು ಇದ್ದಾರೆ. ಅಮಾನತುಗೊಂಡಿರುವ 12 ಮಂದಿ ಶಾಸಕರು ಕ್ಷಮೆ ಕೇಳಿದರೆ ನಿರ್ಧಾರ ಮರುಪರಿಶೀಲಿಸಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಪ್ರಲ್ಹಾದ್ ಜೋಶಿ ಈ ಕುರಿತು ಟ್ವೀಟ್ ಮಾಡಿದ್ದು, ಸರ್ಕಾರವು ಹಲವು ಪ್ರಮುಖ ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲಿದೆ. ವಿರೋಧಪಕ್ಷದವರಿಗೆ ಮುಕ್ತ ಆಹ್ವಾನ ನೀಡಿದೆ. ಶಾಂತಿಯುತವಾಗಿ ಕಲಾಪ ನಡೆಯಲಿ ಎಂದಷ್ಟೇ ಸರ್ಕಾರ ಹೇಳುತ್ತಿದೆ ಎಂದರು.
ಸಂಸತ್ನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷದ 12 ಸಂಸದರನ್ನು ಸರ್ಕಾರವು ತಂದ ನಿರ್ಣಯದ ಮೂಲಕ ರಾಜ್ಯಸಭೆಯಿಂದ ಅಮಾನತುಗೊಳಿಸಲಾಯಿತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಈ ನಿರ್ಣಯ ಮಂಡಿಸಿದ್ದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದಾಗಲೂ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಪ್ರಸ್ತುತ ಅಧಿವೇಶನದ ಉಳಿದ ಅವಧಿಗೆ ಸದಸ್ಯರು ಅಮಾನತುಗೊಂಡಿರುತ್ತಾರೆ. ಆಗಸ್ಟ್ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಸಂಸದರ 'ಅಶಿಸ್ತಿನ' ನಡವಳಿಕೆಯಿಂದಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ನಿಂದ 6, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯಿಂದ ತಲಾ ಇಬ್ಬರು, ಮತ್ತು ಸಿಪಿಐ ಮತ್ತು ಸಿಪಿಎಂನಿಂದ ತಲಾ ಒಬ್ಬರು ಸಂಸದರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಫೂಲೋ ದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್ ಮತ್ತು ಕಾಂಗ್ರೆಸ್ನ ಅಖಿಲೇಶ್ ಪ್ರಸಾದ್ ಸಿಂಗ್, ದೋಲಾ ಸೇನ್, ತೃಣಮೂಲ ಕಾಂಗ್ರೆಸ್ನ ಶಾಂತಾ ಛೆಟ್ರಿ, ಪ್ರಿಯಾಂಕಾ ಚತುರ್ವೇದಿ, ಶಿವಸೇನೆಯ ಅನಿಲ್ ದೇಸಾಯಿ,ಸಿಪಿಎಂನ ಎಳಮರಮ್ ಕರೀಂ, ಮತ್ತು ಸಿಪಿಐನ ಬಿನೋಯ್ ವಿಶ್ವಂ ಅಮಾನುತುಗೊಂಡ ಸಂಸದರು.
ರಾಜ್ಯಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ನಿಯಮ 256 ರ ಅಡಿಯಲ್ಲಿ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ರಾಜ್ಯಸಭಾ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದಸ್ಯರ ಅಮಾನತು ಘೋಷಿಸಿ ಸದನವನ್ನು ನವೆಂಬರ್ 30ಕ್ಕೆ ಮುಂದೂಡಿದರು.
ಮುಂಗಾರು ಅಧಿವೇಶನದ ಕೊನೆಯ ದಿನ ವಿವಿಧ ವಿಷಯಗಳ ಕುರಿತು ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಮಾರ್ಷಲ್ಗಳನ್ನು ಕರೆಸಿ ಎಳೆದಾಡುವ ದೃಶ್ಯಗಳು ಕಂಡುಬಂದವು. ಪ್ರತಿಪಕ್ಷಗಳು ಸದನದ ಅಂಗಳದಲ್ಲಿ ಅಶಿಸ್ತಿನ ವರ್ತನೆ ತೋರಿದ್ದು ಮಾತ್ರವಲ್ಲದೆ ಕೆಲವರು ಸದನದಲ್ಲಿ ಮಹಿಳಾ ಮಾರ್ಷಲ್ ಜತೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.
ಇನ್ನೊಂದೆಡೆ, ಕಳೆದ ಅಧಿವೇಶನದಲ್ಲಿ ನಡೆದಿದ್ದನ್ನು ಆಗಲೇ ಬಗೆಹರಿಸಿಕೊಳ್ಳಬೇಕಿತ್ತು, ಇದು ಚಳಿಗಾಲದ ಅಧಿವೇಶನ ಇದಕ್ಕೂ ಅದಕ್ಕೂ ಏನು ಸಂಬಂಧ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.