ರಾಮಮಂದಿರ ಭೂಮಿ ಪೂಜೆ ಅಡ್ವಾಣಿಗೂ ಸಿಕ್ಕಿದೆ ಆಹ್ವಾನ
ಲಕ್ನೋ, ಆ.2: ಆಯೋಧ್ಯೆಯ ರಾಮಮಂದಿರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಮಹೋತ್ಸವಕ್ಕೆ ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರನ್ನೇ ಆಹ್ವಾನಿಸಿಲ್ಲ ಎಂಬ ಸುದ್ದಿ ಹಬ್ಬಿತ್ತು. ಜೊತೆಗೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಸಂದೇಶವನ್ನು ಹಬ್ಬಿಸಲಾಗಿತ್ತು. ಆದರೆ, ಈ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ.
ರಾಮ ಮಂದಿರ ನಿರ್ಮಾಣದ ಕನಸು ಕಂಡು ಹೋರಾಡಿದ ಪ್ರಮುಖ ನಾಯಕರಿಬ್ಬರು ಆಗಸ್ಟ್ 5ರಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಅಯೋಧ್ಯಾ ರಾಮ ಮಂದಿರ ಮೇಲೆ ಪಾಕ್ ಐಎಸ್ಐ ಕಣ್ಣು!
92 ವರ್ಷದ ಎಲ್ ಕೆ ಅಡ್ವಾಣಿ ಹಾಗೂ 86 ವರ್ಷದ ಮುರಳಿ ಮನೋಹರ್ ಜೋಶಿ ಇಬ್ಬರು ರಾಮ ಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಖುದ್ದು ಭಾಗಿಯಾಗುತ್ತಿಲ್ಲ. ಕೊರೊನಾ ವೈರಸ್ ಭೀತಿ ಮತ್ತು ಆರೋಗ್ಯದ ಸ್ಥಿತಿಗತಿಯ ಕಾರಣ ಕಾರ್ಯಕ್ರಮದಲ್ಲಿ ಇಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕ ಉಪಸ್ಥಿತರಿರಲಿದ್ದಾರೆ.
ಶ್ರೀರಾಮಮಂದಿರ ನಿರ್ಮಾಣ ಟ್ರಸ್ಟ್ ನಿಂದ ಶನಿವಾರದಂದು ಅಧಿಕೃತವಾಗಿ ಫೋನ್ ಮಾಡಿ ಇಬ್ಬರು ನಾಯಕರನ್ನು ಆಹ್ವಾನಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.
ಶ್ರೀರಾಮನಿಂದ ಸಾಮಾಜಿಕ ಸಮರಸತೆ: ಮಿಲಿಂದ್ ಪರಾಂಡೆ
ಆಗಸ್ಟ್ 5ರ ಬುಧವಾರ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12.30ಕ್ಕೆ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಶಂಕು ಸ್ಥಾಪನೆ ದಿನದಂದು 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಇಟ್ಟು ಮೋದಿ ಪೂಜಿಸಲಿದ್ದಾರೆ.
ರಾಮ ಮಂದಿರ 161 ಅಡಿ ಎತ್ತರವಿರಲಿದೆ. 1988ರಲ್ಲಿ ತಯಾರಿಸಲಾಗಿದ್ದ ಮಾದರಿ 141 ಅಡಿ ಎತ್ತರವಿತ್ತು. ಈಗ ಎತ್ತರವನ್ನು ಹೆಚ್ಚಳ ಮಾಡಲಾಗಿದೆ. ಎರಡು ಮಂಟಪಗಳನ್ನು ಹೊಸ ವಿನ್ಯಾಸಕ್ಕೆ ಸೇರಿಸಲಾಗಿದೆ.
ಒಟ್ಟು 50 ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಆರ್ಎಸ್ಎಸ್ನ ಪ್ರಮುಖ ನಾಯಕರು ಸೇರಿದ್ದಾರೆ. ಆಹ್ವಾನಿತರು, ಗಣ್ಯರು ಸೇರಿದಂತೆ 200 ಜನರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಅಂತರವನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಲಿದ್ದಾರೆ. ದೂರದರ್ಶನ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.