'ತೆಲಂಗಾಣ ಪ್ರಕರಣ ರೀತಿ ಮಾಡೋಣ': ವಿಕಾಸ್ ದುಬೆ ಕೇಸ್ ಬಗ್ಗೆ ಸುಪ್ರೀಂ ಚಿಂತನೆ
ಲಕ್ನೌ, ಜುಲೈ 14: ಏಂಟು ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದನು. ದುಬೆ ಎನ್ಕೌಂಟರ್ ಕುರಿತು ಕೋರ್ಟ್ ಅಡಿ ಸಿಬಿಐ ತನಿಖೆ ಆಗಲಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂಕೋರ್ಟ್ ಮುಂದೆ ಬಂದಿದೆ.
Recommended Video
ಈ ಅರ್ಜಿ ಸ್ವೀಕರಿಸಿದ ಸುಪ್ರೀಂಕೋರ್ಟ್ 'ತೆಲಂಗಾಣ ಪ್ರಕರಣದ ಮಾದರಿ ಮಾಡೋಣ' ಎಂಬ ನಿಲುವಿಗೆ ಬಂದಿದೆ. ಈ ಬಗ್ಗೆ ಉತ್ತರ ಪ್ರದೇಶದ ಸರ್ಕಾರ ಅಭಿಪ್ರಾಯ ಏನು ಎಂದು ಕೋರ್ಟ್ ಕೇಳಿದ್ದು, ನ್ಯಾಯಾಲಯದ ಅಭಿಪ್ರಾಯಕ್ಕೆ ಉತ್ತರಿಸಲು ಸಮಯ ಬೇಕಿದೆ ಎಂದು ವಕೀಲರು ವಿನಂತಿಸಿಕೊಂಡಿದ್ದಾರೆ.
ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?
ಅಷ್ಟಕ್ಕೂ, ವಿಕಾಸ್ ದುಬೆ ಕೇಸ್ನಲ್ಲಿ ತೆಲಂಗಾಣ ಪ್ರಕರಣದ ಮಾದರಿ ಮಾಡೋಣ ಎಂದು ಸುಪ್ರೀಂ ಕೋರ್ಟ್ ಮಾತಿನ ಅರ್ಥವೇನು? ಯಾವ ನಿರ್ಧಾರಕ್ಕೆ ನ್ಯಾಯಾಲಯ ಬಂದಿದೆ? ಮುಂದೆ ಓದಿ....
ತನಿಖಾ ಸಮಿತಿ ರಚನೆಗೆ ಕೋರ್ಟ್ ಚಿಂತನೆ
ತೆಲಂಗಾಣದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ನಾಲ್ವರು ಆರೋಪಿಗಳ ಪ್ರಕರಣದಲ್ಲಿ ಮಾಡಿದಂತೆ ವಿಕಾಸ್ ದುಬೆ ಎನ್ಕೌಂಟರ್ ವಿಚಾರದಲ್ಲೂ ನಿವೃತ್ತ ನ್ಯಾಯಾಮೂರ್ತಿ ನೇತೃತ್ವದಲ್ಲಿ ವಿಶೇಷವಾದ ತನಿಖಾ ಸಮಿತಿಯೊಂದನ್ನು ರಚನೆ ಮಾಡೋಣ ಎಂದು ಸುಪ್ರೀಂಕೋರ್ಟ್ ನ್ಯಾಯಾ ಪೀಠ ಅಭಿಪ್ರಾಯ ಪಟ್ಟಿದೆ.
ತೆಲಂಗಾಣ ಪ್ರಕರಣದಲ್ಲಿ ಏನಾಗಿತ್ತು
ಯುವತಿ ಮೇಲೆ ಅತ್ಯಾಚಾರವೆಸಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ನಡೆದ ಸ್ಥಳಕ್ಕೆ ಸ್ಥಳ ಪರಿಶೀಲನೆ ಮಾಡಲು ಮುಂಜಾನೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ನಾಲ್ವರು ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದರು. ಕಲ್ಲುಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು. ನಂತರ ಆತ್ಮರಕ್ಷಣೆಗಾಗಿ ನಾಲ್ವರು ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲಬೇಕಾಯಿತು ಎಂದು ಪೊಲೀಸ್ ಇಲಾಖೆ ಹೇಳಿತ್ತು.
ನಕಲಿ ಎನ್ಕೌಂಟರ್ ಎಂಬ ವಾದ
ಈ ಕೇಸ್ನಲ್ಲಿ ತೆಲಂಗಾಣ ಪೊಲೀಸರು ನಕಲಿ ಎನ್ಕೌಂಟರ್ ಮಾಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗ ಆರೋಪಿಸಿತ್ತು. ಬಳಿಕ, ಅತ್ಯಾಚಾರಿ ಆರೋಪಿಗಳ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತಿ ನ್ಯಾಯಾಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಯಿತು. ಈ ಕೇಸ್ಗೆ ಸಂಬಂಧಿಸಿದಂತೆ ತನಿಖಾ ತಂಡ ಇನ್ನು ವರದಿ ನೀಡಿಲ್ಲ. ಇದೀಗ, ಇಂತಹದ್ದೇ ತನಿಖೆಯನ್ನು ವಿಕಾಸ್ ದುಬೆ ಪ್ರಕರಣದಲ್ಲೂ ಮಾಡಬಹುದು ಎಂದು ಕೋರ್ಟ್ ಚಿಂತಿಸಿದೆ.
ಸರ್ಕಾರದ ನಿಲುವು ಕೇಳಿದ ಕೋರ್ಟ್
ವಿಕಾಸ್ ದುಬೆ ಎನ್ಕೌಂಟರ್ ತನಿಖೆಗೆ 'ನಿಮಗೆ ಯಾವ ರೀತಿಯ ಸಮಿತಿ ಬೇಕು' ಎಂದು ನ್ಯಾಯಾಲಯ ಸರ್ಕಾರಕ್ಕೆ ಕೇಳಿದೆ. ಸರ್ಕಾರದ ಪರ ಹಾಜರಾಗಿದ್ದ ವಕೀಲ ತುಷಾರ್ ಮೆಹ್ತಾ ಈ ಕುರಿತು ನಿರ್ಧರಿಸಲು ಸಮಯ ಬೇಕಿದೆ ಎಂದು ಮನವಿ ಮಾಡಿದ್ದರು. ಜುಲೈ 20ರಂದು ಮತ್ತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದ್ದು, ನ್ಯಾಯಾಲಯಕ್ಕೆ ಸರ್ಕಾರದ ತೀರ್ಮಾನ ತಿಳಿಸಬೇಕು ಎಂದು ಸೂಚಿಸಲಾಗಿದೆ.