ಅಯೋಧ್ಯೆ 5 ಎಕರೆಯಲ್ಲಿ ಆಸ್ಪತ್ರೆ ಮಸೀದಿ ನಿರ್ಮಾಣ: ಸುನ್ನಿ ಬೋರ್ಡ್
ಅಯೋಧ್ಯಾ(ಉ.ಪ್ರ), ಫೆಬ್ರವರಿ 24: ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಸರ್ಕಾರವು ಮುಸ್ಲಿಮರಿಗೆ 5 ಎಕರೆ ಮಂಜೂರು ಮಾಡಲಾಗಿದೆ. ಸರ್ಕಾರದಿಂದ ದೊರೆಯುವ 5 ಎಕರೆ ಜಮೀನಿನಲ್ಲಿ ಏನೆಲ್ಲ ನಿರ್ಮಾಣವಾಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಉತ್ತರ ಪ್ರದೇಶ ಸರ್ಕಾರವು ನೀಡಿದ 5 ಎಕರೆ ಜಮೀನನಲ್ಲಿ ಮಸೀದಿ, ಭಾರತ-ಇಸ್ಲಾಮಿಕ್ ಸಂಶೋಧನಾ ಕೇಂದ್ರ, ಆಸ್ಪತ್ರೆ ಹಾಗೂ ಗ್ರಂಥಾಲಯ ನಿರ್ಮಿಸುವುದಾಗಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಘೋಷಿಸಿದೆ.
ರಾಮಮಂದಿರ ನಿರ್ಮಾಣಕ್ಕೆ ಕೋಟ್ಯಂತರ ದೇಣಿಗೆ ಕೊಟ್ಟ ದೇಗುಲ
ಈ ಕುರಿತು ಸುನ್ನಿ ಬೋರ್ಡ್ ಅಧ್ಯಕ್ಷ ಜುಫರ್ ಫಾರೂಖಿ ಮಾತನಾಡಿ, ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಭೆಯಲ್ಲಿ ಜಮೀನಿನಲ್ಲಿ ಏನೆಲ್ಲ ನಿರ್ಮಾಣ ಮಾಡಬೇಕು ಎಂಬುದನ್ನು ನಿರ್ಧರಿಸಲಾಗಿದೆ. ಈ ಕುರಿತಂತೆ ಶೀಘ್ರದಲ್ಲೇ ಟ್ರಸ್ಟ್ ರಚಿಸಲಾಗುವುದು ಆಸ್ಪತ್ರೆ, ಮಸೀದಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ನವೆಂಬರ್ 09 ರಂದು ಅಯೋಧ್ಯೆ ವಿವಾದದ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಶರದ್ ಬೊಬ್ಡೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಅಯೋಧ್ಯಾದ ವಿವಾದಿತ ಭೂಮಿ ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ ನೀಡಿತ್ತು. 2.77 ಎಕರೆ ವಿವಾದಿತ ಭೂಮಿ ರಾಮಲಲ್ಲಾಗೆ ಸೇರಿದೆ ಎಂದಿತ್ತು. ಜೊತೆಗೆ ಮುಸ್ಲಿಮರಿಗೆ ಬೇರೆ ಎಲ್ಲಾದರೂ 5 ಎಕರೆ ಪರ್ಯಾಯ ಜಮೀನನ್ನು ನೀಡಲು ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರಂತೆ, ಯೋಗಿ ಆದಿತ್ಯನಾಥ್ ಸರ್ಕಾರವು ಜಮೀನನ್ನು ನೀಡಿದೆ. ಇನ್ನು ರಾಮಮಂದಿರ ನಿರ್ಮಾಣ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಟ್ರಸ್ಟ್ ರಚಿಸಿದ್ದು, ಅದರಲ್ಲಿಕರ್ನಾಟಕದ ಉಡುಪಿ ಪೇಜಾವರ ಮಠದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನೂ ವಿಶ್ವಸ್ಥರನ್ನಾಗಿ ನೇಮಿಸಲಾಗಿದೆ.