ಕಾಣೆಯಾಗಿದ್ದ ವಿದ್ಯಾರ್ಥಿನಿ 6 ದಿನಗಳ ಬಳಿಕ ಪತ್ತೆ: ಬಿಜೆಪಿ ಮುಖಂಡನ ಕೈವಾಡ?
ಲಕ್ನೋ, ಆಗಸ್ಟ್ 30: ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಆರು ದಿನಗಳ ಬಳಿಕ ವಾಪಸಾಗಿದ್ದಾಳೆ.
ತನ್ನ ಅಪಹರಣಕ್ಕೆ ಬಿಜೆಪಿ ಮುಖಂಡ ಚಿನ್ಮಯಾನಂದ ಅವರೇ ಕಾರಣ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.ಇದು ಮತ್ತೊಂದು ಉನ್ನಾವೋ ಪ್ರಕರಣದ ರೀತಿ ಆಗಿದೆ ಎಂದು ವಕೀಲರು ವಾದ ಮಂಡಿಸಿದ ಬಳಿಕ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ವಿದ್ಯಾರ್ಥಿನಿ ನಾಪತ್ತೆ: ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್
ಮಂಗಳವಾರ ಬೆಳಗ್ಗೆ ಶಹಜಹಾನ್ಪುರ ಪೊಲೀಸರು ಚಿನ್ಮಯಾನಂದ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.ಚಿನ್ಮಯಾನಂದ ಯಾರು?: ಚಿನ್ಮಯಾನಂದ ಶಹಜಹಾನ್ಪುರದಲ್ಲಿ ಆಶ್ರಮವೊಂದನ್ನು ನಡೆಸುತ್ತಿದ್ದು, ನಗರದಲ್ಲಿ ಐದು ಕಾಲೇಜುಗಳನ್ನು ಕೂಡ ನಡೆಸುತ್ತಿದ್ದಾರೆ. ಹರಿದ್ವಾರ, ರಿಷಿಕೇಶದಲ್ಲೂ ಆಶ್ರಮಗಳಿವೆ.
ಸಾಮಾಜಿಕ ಜಾಲತಾಣದಲ್ಲಿ ಕಳೆದ ವಾರ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದ ಯುವತಿ, ಸ್ವಾಮಿ ಚಿನ್ಮಯಾನಂದ ಅವರ ವಿರುದ್ಧ ತಮ್ಮ ಬಳಿ ಕೆಲವು ಪುರಾವೆಗಳಿವೆ. ಈ ಕಾರಣಕ್ಕಾಗಿಯೇ ಅವರು ತನ್ನನ್ನು ಹಾಗೂ ತನ್ನ ಕುಟುಂಬವನ್ನು ನಾಶಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆಗಸ್ಟ್ 23ರಂದು ವಿಡಿಯೋ ಹಂಚಿಕೊಂಡಿದ್ದ ಯುವತಿ, ತಮಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿದ್ದರು. ಆದರೆ, ಮರುದಿನದಿಂದಲೇ ಯುವತಿ ನಾಪತ್ತೆಯಾಗಿದ್ದಳು.