ಸುಪ್ರೀಂ ನಿರ್ದೇಶನದಂತೆ ರಾಮಜನ್ಮಭೂಮಿ ಟ್ರಸ್ಟ್ ರಚನೆ
ನವದೆಹಲಿ, ಫೆಬ್ರವರಿ 05: ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಿತ್ತು. ಐತಿಹಾಸಿಕ ತೀರ್ಪು ನೀಡಿದ ಬಳಿಕ ಸರ್ಕಾರ ರಾಮಮಂದಿರ ನಿರ್ಮಾಣದತ್ತ ಮೊದಲ ಹೆಜ್ಜೆ ಇಡಲಾಗಿದೆ. ಸುಪ್ರೀಂ ನಿರ್ದೇಶನದಂತೆ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು(ಫೆ. 5) ಘೋಷಿಸಿದ್ದಾರೆ.
ವಿವಾದಾತ್ಮಕ ಭೂಮಿ ರಾಮಲಲ್ಲಾಗೇ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ರಾಮಮಂದಿರ ನಿರ್ಮಾಣಕ್ಕೆ ಇದ್ದ ಬಹುದೊಡ್ಡ ಅಡೆತಡೆ ನಿವಾರಣೆಯಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ಟ್ರಸ್ಟ್ ರಚನೆಗೆ ಮುಂದಾದ ಸರ್ಕಾರ, ಟ್ರಸ್ಟ್ ರಚನೆ ಸಲುವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಇದ್ದ ಸಮಿತಿಯಲ್ಲಿ ಚರ್ಚೆ ನಡೆಸಿ "ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ" ಎಂದು ಟ್ರಸ್ಟ್ ಗೆ ಹೆಸರನ್ನಿಡಲಾಗಿದೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರವು ಟ್ರಸ್ಟ್ ಸ್ಥಾಪನೆ ಮಾಡಿದ್ದು,, 2024ರೊಳಗೆ ಮಂದಿರ ನಿರ್ಮಾಣವಾಗಲಿದ್ದು, ಶ್ರೀರಾಮಚಂದ್ರ ಮೂರ್ತಿಯ ದರ್ಶನ ಪ್ರಾಪ್ತಿಯಾಗಲಿದೆ" ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಕೊಕ್ಜೆ ಪ್ರತಿಕ್ರಿಯಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಶರದ್ ಬೊಬ್ಡೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು ನೀಡಿದ ಒಮ್ಮತದ ತೀರ್ಪಿನಂತೆ, ಅಯೋಧ್ಯಾದ ವಿವಾದಿತ ಭೂಮಿ ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ ಸಿಗಲಿದೆ.
ನವೆಂಬರ್ 09 ರಂದು ಅಯೋಧ್ಯೆ ವಿವಾದದ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್, 2.77 ಎಕರೆ ವಿವಾದಿತ ಭೂಮಿ ರಾಮಲಲ್ಲಾಗೆ ಸೇರಿದೆ ಎಂದಿತ್ತು. ಜೊತೆಗೆ ಮುಸ್ಲಿಮರಿಗೆ ಬೇರೆ ಎಲ್ಲಾದರೂ 5 ಎಕರೆ ಪರ್ಯಾಯ ಜಮೀನನ್ನು ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.