ಮನೆಯಲ್ಲಿ ಶಾಂತಿ ನೆಲೆಸಲು ಗೋಮೂತ್ರ ಸಿಂಪಡಿಸಿ: ಯುಪಿ ಸಚಿವರ ವಿಲಕ್ಷಣ ಸಲಹೆ
ಫತೇಪುರ್ ಮೇ 14: ಗೋಮೂತ್ರವನ್ನು ಚಿಮುಕಿಸುವುದರಿಂದ ಮನೆಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಉತ್ತರ ಪ್ರದೇಶದ ಸಚಿವ ಧರಂಪಾಲ್ ಸಿಂಗ್ ಶುಕ್ರವಾರ ವಿಲಕ್ಷಣ ಸಲಹೆಯನ್ನು ನೀಡಿದ್ದಾರೆ.
ವಿಡಿಯೋ; ಕೋವಿಡ್ ತಡೆಗೆ ಗೋಮೂತ್ರ ಸೇವನೆ ಸಲಹೆ ಕೊಟ್ಟ ಶಾಸಕ
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಪಶುಸಂಗೋಪನಾ ಸಚಿವರು, ಗಂಗಾ ದೇವಿಯು ಗೋವಿನ ಮೂತ್ರದಲ್ಲಿ ನೆಲೆಸಿದ್ದಾಳೆ. ಇದನ್ನು ಮನೆಯಲ್ಲಿ ಚಿಮುಕಿಸುವುದರಿಂದ ವಾಸ್ತು ದೋಷಗಳು ಅಥವಾ ಇನ್ನಾವುದೇ ಅಡೆತಡೆಗಳು ನಿವಾರಣೆಯಾಗುತ್ತದೆ. ಲಕ್ಷ್ಮೀಜಿ ಹಸುವಿನ ಸಗಣಿಯಲ್ಲಿ ವಾಸಿಸುತ್ತಾಳೆ ಎಂದಿದ್ದಾರೆ.
ಗೋಶಾಲೆಗಳಲ್ಲಿ ಗೋವುಗಳ ದುಃಸ್ಥಿತಿಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೋಶಾಲೆಗಳ ಸುಧಾರಣೆಗೆ ತಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು. ಗೋಶಾಲೆ ತೆರಳುವ ಮುನ್ನ ಸಚಿವರು ಪಕ್ಷದ ಪದಾಧಿಕಾರಿಗಳು ಹಾಗೂ ಶಾಸಕರನ್ನು ಭೇಟಿ ಮಾಡಿದರು. ನಂತರ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗೋಶಾಲೆಗಳಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡಿದರು.
ಕಳೆದ ವಾರವಷ್ಟೇ ಉತ್ತರಪ್ರದೇಶದಲ್ಲಿ ಶಾಸಕರೊಬ್ಬರು ಇದೇ ರೀತಿ ಸಲಹೆಯನ್ನು ನೀಡಿದ ವಿಡಿಯೋ ವೈರಲ್ ಆಗಿತ್ತು. ಕೋವಿಡ್ ಸೋಂಕು ತಡೆಯಲು ಖಾಲಿ ಹೊಟ್ಟೆಯಲ್ಲಿ ಜನರು ಗೋಮೂತ್ರ ಸೇವಿಸಿಬೇಕು ಎಂದು ಬಿಜೆಪಿ ಶಾಸಕರು ಸಲಹೆ ನೀಡಿದ್ದರು. ತಾವೇ ಗೋಮೂತ್ರ ಕುಡಿದು ಜನರಿಗೆ ಸಲಹೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಗೆ ಗೋಮೂತ್ರ ಸೇವಿಸಬೇಕು ಎಂದು ಜನರಿಗೆ ಮಾಹಿತಿ ನೀಡಿದ್ದಾರೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಮುಚ್ಚಳ ಗೋಮೂತ್ರವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸಿಬೇಕು ಎಂದು ಹೇಳಿದ್ದಾರೆ.
"ತಾನು ವಿಜ್ಞಾನವನ್ನು ನಂಬದಿದ್ದರೂ ಗೋಮೂತ್ರವನ್ನು ನಂಬುತ್ತೇನೆ. ಗೂಮೂತ್ರ ಸೇವಿಸಿದ ಬಳಿಕ ಅರ್ಧಗಂಟೆ ಬೇರೆ ಏನೂ ಸೇವಿಸಬಾರದು," ಎಂದು ಶಾಸಕರು ವಿಡಿಯೋದಲ್ಲಿ ತಿಳಿಸಿದ್ದಾರೆ.
"ತಾನು ಪ್ರತಿನಿತ್ಯ 18 ಗಂಟೆ ಕೆಲಸ ಮಾಡುತ್ತೇನೆ. ಇದಕ್ಕೆ ಗೋಮೂತ್ರದಿಂದ ಸಿಕ್ಕಿರುವ ಆರೋಗ್ಯವೇ ಕಾರಣವಾಗಿದೆ," ಎಂದು ಶಾಸಕರು ವಿಡಿಯೋದಲ್ಲಿ ವಿವರಣೆ ನೀಡಿದ್ದಾರೆ. ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ.