'ಅವರ ಬಾಯಿಂದ ಶಬ್ದ ನಮ್ಮ ಬಂದೂಕಿನಿಂದ ಗುಂಡು' ಎಂದ ಎಸ್ಪಿ ಮೇಲೆ ಬುಲ್ಡೋಜರ್
ಬರೇಲಿ ಏಪ್ರಿಲ್ 07: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆಗೇರಿದ ಸಿಎಂ ಯೋಗಿ ಆದಿತ್ಯನಾಥ್ ಅವರು ನಿಧಾನಕ್ಕೆ ತಮ್ಮ ಬುಲ್ಡೋಜರ್ ಅನ್ನು ಚಾಲಾಯಿಸುತ್ತಿರುವಂತೆ ಕಾಣಿಸುತ್ತಿದೆ. ಈ ಮೂಲಕ ತಮ್ಮ ವಿರೋಧಿ ಪಕ್ಷಗಳಿಗೆ ಬಿಸಿ ಮುಟ್ಟಿಸುವ ಪ್ರಯತ್ನಗಳು ನಡೆದಂತೆ ತೋರುತ್ತಿದೆ.
ಮ್ಯಾಪ್ ಪಾಸ್ ಮಾಡದೆ ಪೆಟ್ರೋಲ್ ಬಂಕ್ ನಿರ್ಮಿಸಿದ ಕಾರಣಕ್ಕೆ ಗುರುವಾರ ಸಿಬಿಗಂಜ್ನಲ್ಲಿರುವ ಎಸ್ಪಿ ಶಾಸಕರ ಪೆಟ್ರೋಲ್ ಬಂಕ್ನ ಮೇಲೆ ಬರೇಲಿ ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕ್ರಮ ಕೈಗೊಂಡಿದೆ. ಬುಲ್ಡೋಜರ್ ಹತ್ತಿಸುವ ಮೂಲಕ ಪೆಟ್ರೋಲ್ ಬಂಕ್ ಅನ್ನು ದ್ವಂಸಗೊಳಿಸಿದೆ. ಇದರೊಂದಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಎಸ್ಪಿ ಶಾಸಕ ಶಾಜಿಲ್ ಇಸ್ಲಾಂ ಅವರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಯುಪಿಯಲ್ಲಿ ಇಂದಿನಿಂದ ಆ್ಯಂಟಿ ರೋಮಿಯೋ ಸ್ಕ್ವಾಡ್ ಮತ್ತೆ ಸಕ್ರಿಯ
ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜೊತೆಗೆ ಪೆಟ್ರೊಲ್ ಬಂಕ್ ನಿರ್ಮಾಣ ವೇಳೆ ಜಮೀನು ಆಕ್ರಮಿಸಿಕೊಳ್ಳಲಾಗಿದೆ ಎನ್ನುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
#WATCH: UP | District admin in Bareilly demolishes a petrol pump owned by SP MLA Shazil Islam. The petrol pump was allegedly constructed without a map approval. pic.twitter.com/qhkfp6l3So
— ANI UP/Uttarakhand (@ANINewsUP) April 7, 2022
ಏಪ್ರಿಲ್ 2 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಭೋಜಿಪುರದ ಎಸ್ಪಿ ಶಾಸಕ ಶಾಜಿಲ್ ಇಸ್ಲಾಂ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಕಳೆದ ಅವಧಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸದನದಲ್ಲಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಎಸ್ಪಿ ಶಾಸಕರು ಆರೋಪಿಸಿದ್ದಾರೆ. ಮಾತ್ರವಲ್ಲದೇ ನಾವು ಸಂಖ್ಯೆಯಲ್ಲಿ ಕಡಿಮೆ ಇದ್ದೆವು. ಆದರೆ, ಈ ಬಾರಿ ಪ್ರಬಲ ವಿರೋಧ ಪಕ್ಷದಲ್ಲಿದ್ದೇವೆ ಎನ್ನುವುದನ್ನು ಮರೆಯಬಾರದು. ಅವರ ಬಾಯಿಂದ ಶಬ್ದ ಬಂದರೆ ನಮ್ಮ ಬಂದೂಕುಗಳಿಂದ ಹೊಗೆ ಬರುವುದಿಲ್ಲ ಬದಲಿಗೆ ಗುಂಡುಗಳು ಹೊರಬರುತ್ತವೆ ಎಂದು ಶಾಜಿಲ್ ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಯೋಗಿ ಸರ್ಕಾರ ಈ ಕ್ರಮ ಕೈಗೊಂಡು ಎಸ್ಪಿ ಶಾಸಕರಿಗೆ ಬಿಸಿ ಮುಟ್ಟಿಸಿದೆ ಎನ್ನಲಾಗುತ್ತಿದೆ.
ಶಾಜಿಲ್ ವಿರುದ್ಧ ಪ್ರಕರಣ ದಾಖಲು
ಉದ್ರೇಕಕಾರಿ ಭಾಷಣಕ್ಕಾಗಿ ಎಸ್ಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಎಸ್ಪಿ ಜಿಲ್ಲಾ ಉಪಾಧ್ಯಕ್ಷ ಸಂಜೀವ್ ಕುಮಾರ್ ಸಕ್ಸೇನಾ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಿಂದೂ ಯುವವಾಹಿನಿಯ ಜಿಲ್ಲಾ ಉಸ್ತುವಾರಿ ಅನುಜ್ ವರ್ಮಾ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಜಿಲ್ ಇಸ್ಲಾಂ ಯಾರು?
ಶಾಜಿಲ್ ಇಸ್ಲಾಂ ಅವರು ಪ್ರಸ್ತುತ ಬರೇಲಿಯ ಭೋಜಿಪುರ ಕ್ಷೇತ್ರದಿಂದ ಎಸ್ಪಿಯ ಶಾಸಕರಾಗಿದ್ದಾರೆ. ಶಾಜಿಲ್ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಬಿಎಸ್ಪಿ ಸರ್ಕಾರದಲ್ಲಿ ಮುಸ್ಲಿಂ ವಕ್ಫ್ ಖಾತೆ ರಾಜ್ಯ ಸಚಿವರೂ ಆಗಿದ್ದರು. ಶಾಜಿಲ್ ಬರೇಲಿಯ ಹಳೆಯ ರಾಜಕೀಯ ಕುಟುಂಬದಿಂದ ಬಂದವರು. ಇವರ ಕುಟುಂಬ ಬರೇಲಿಯ ಅನ್ಸಾರಿ ಮುಸ್ಲಿಮರಲ್ಲಿ ಪ್ರಭಾವವನ್ನು ಹೊಂದಿದೆ. 2007 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಜಿಲ್ ಇಸ್ಲಾಂ ಬಿಎಸ್ಪಿಗೆ ಸೇರ್ಪಡೆಗೊಂಡಿದ್ದರು. ಆದರೆ ಮುಂದಿನ 2012ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಅವರಿಗೆ ಟಿಕೆಟ್ ನೀಡಲಿಲ್ಲ.
ಇದರ ಮೇಲೆ ಅವರು ಮೌಲಾನಾ ತೌಕಿರ್ ರಜಾ ಅವರ ರಾಜಕೀಯ ಪಕ್ಷವಾದ IMC ಅಂದರೆ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ನಿಂದ ಸ್ಪರ್ಧಿಸಿದರು ಮತ್ತು ಗೆದ್ದ ನಂತರ ಮತ್ತೆ ಶಾಸಕರಾದರು. ಆದರೆ, ನಂತರ ಅವರು ಐಎಂಸಿ ತೊರೆದು ಎಸ್ಪಿ ಸೇರಿದರು. 2017 ರ ವಿಧಾನಸಭಾ ಚುನಾವಣೆಯಲ್ಲಿ ಭೋಜಿಪುರದಿಂದ ಎಸ್ಪಿ ಟಿಕೆಟ್ನಲ್ಲಿ ಸ್ಪರ್ಧಿಸಿ ಬಿಜೆಪಿ ಅಲೆಯಿಂದ ಸೋತರು. ಈ ಬಾರಿ 2022ರ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ಅಭ್ಯರ್ಥಿಯಾಗಿ ನಾಲ್ಕನೇ ಬಾರಿ ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದಾರೆ.