ವಾರಣಾಸಿಯಲ್ಲಿ ಎಸ್ಪಿ-ಬಿಎಸ್ಪಿ ಅಚ್ಚರಿಯ ನಡೆ, ಕೊನೇ ಕ್ಷಣದಲ್ಲಿ ಅಭ್ಯರ್ಥಿ ಬದಲು
Recommended Video
ವಾರಣಾಸಿ, ಏಪ್ರಿಲ್ 29: ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಮೈತ್ರಿಕೂಟ ಅಚ್ಚರಿಯ ನಿರ್ಧಾರ ಪ್ರಕಟಿಸಿದೆ.
ತನ್ನ ಅಭ್ಯರ್ಥಿಯನ್ನು ಬದಲಿಸಿರುವ ಮೈತ್ರಿಕೂಟ, ಶಾಲಿನಿ ಯಾದವ್ ಬದಲು, ಪಕ್ಷೇತರ ಅಭ್ಯರ್ಥಿಯಾಗಿದ್ದ ತೇಜ್ ಬಹದ್ದೂರ್ ಯಾದವ್ ಅವರಿಗೆ ಟಿಕೆಟ್ ನೀಡಿದೆ.
ವಜಾಗೊಂಡ ಬಿಎಸ್ಎಫ್ ಸೈನಿಕ ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ
ಸೇನೆಗೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ದೂರಿ ಅಂತರ್ಜಾಲದಲ್ಲಿ ವಿಡಿಯೋ ಹರಿಬಿಟ್ಟ ಕಾರಣಕ್ಕೆ ಸೇವೆಯಿಂದ ವಜಾಗೊಂಡಿದ್ದ ಬಿಎಸ್ ಎಫ್ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಎಸ್ಪಿ-ಬಿಎಸ್ಪಿ ಘೋಷಿಸಿದೆ.
ಮೇ 19 ರಂದು ಕೊನೆಯ ಹಂತದಂದು ವಾರಣಾಸಿಯಲ್ಲಿ ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದೆ.
ಯಾರು ಯಾದವ್?
ಸೈನಿಕರಿಗೆ ನೀಡುವ ಆಹಾರದ ಗುಣಮಟ್ಟ ಸರಿಯಿಲ್ಲ ಎಂದು 2017ರಲ್ಲಿ ತೇಜ್ ಬಹದ್ದೂರ್ ಯಾದವ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದನ್ನು ಅಶಿಸ್ತು ಎಂದು ದೂರಿ, ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಾದವ್
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಯಾದವ್ ಸ್ಪರ್ಧಿಸಿದ್ದರು. ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ನ ಮಾಜಿ ಮುಖಂಡರೊಬ್ಬರ ಪುತ್ರಿಯಾದ ಶಾಲಿನಿ ಯಾದವ್ ಅವರನ್ನು ಕಣಕ್ಕಿಳಿಸಲಾಗಿತ್ತು.ಆದರೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಇಂದು, ಅಭ್ಯರ್ಥಿಯನ್ನು ಬದಲಿಸಿ, ಎಸ್ಪಿ-ಬಿಎಸ್ಪಿ ಮೈತ್ರಿಕೂಟ ತೇಝ್ ಪ್ರತಾಪ್ ಯಾದವ್ ಅವರಿಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ನಿಂದ ಅಜಯ್ ರೈ ಕಣಕ್ಕೆ
ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಿಂದ ಅಜಯ್ ರೈ ಅವರನ್ನು ಕಣಕ್ಕಿಳಿಸಿದ್ದು, 2014 ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರ ವಿರುದ್ಧ 49 ವರ್ಷ ವಯಸ್ಸಿನ ಅಜಯ್ ರೈ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ ಅವರು ಈ ಚುನಾವಣೆಯಲ್ಲಿ ಕೇವಲ 75,614 ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದರು.
ಈ ಬಾರಿಯೂ ಬಿಜೆಪಿಯಿಂದ ನರೇಂದ್ರ ಮೋದಿ
ಈ ಬಾರಿಯೂ ವಾರಣಾಸಿಯಿಂದ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕಣಕ್ಕಿಳಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಅರವಿಂದ್ ಕೇಜ್ರಿವಾಲ್ ಅವರೂ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು 5,81,022 ಮತಗಳನ್ನು ಪಡೆದರೆ, ಅರವಿಂದ್ ಕೇಜ್ರಿವಾಲ್ 2,09,238 ಮತಗಳನ್ನು ಪಡೆದಿದ್ದರು.