ಮಗನ ಶವವನ್ನು ರಿಕ್ಷಾದಲ್ಲಿ ಸಾಗಿಸಿದ ತಾಯಿ: ಹೃದಯ ಕಲಕುವ ಘಟನೆ
ವಾರಾಣಸಿ, ಏಪ್ರಿಲ್ 20: ಕೋವಿಡ್ ಸೋಂಕಿನಲ್ಲಿ ಉಂಟಾಗುತ್ತಿರುವ ಭಾರಿ ಏರಿಕೆಯು ದೇಶದ ಆರೋಗ್ಯ ಮೂಲಸೌಕರ್ಯದ ಕರಾಳ ಸ್ವರೂಪವನ್ನು ತೆರೆದಿಡುತ್ತಿದೆ. ಈ ಸನ್ನಿವೇಶವು ಕೋವಿಡ್ ಮಾತ್ರವಲ್ಲದೆ, ಇತರೆ ಸಾಮಾನ್ಯ ರೋಗಿಗಳಿಗೂ ಆರೋಗ್ಯ ಸೇವೆಗಳು ಸರಿಯಾಗಿ ಸಿಗದಂತೆ ಮಾಡಿದೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಆಸ್ಪತ್ರೆ ಹುಡುಕುವ ಪ್ರಯತ್ನದ ನಡುವೆ ಮೃತಪಟ್ಟಿದ್ದಾರೆ. ಸಾವಿನ ಬಳಿಕವೂ ಅವರಿಗೆ ಸೂಕ್ತ ಗೌರವ ಸಿಕ್ಕಿಲ್ಲ. ಅವರು ಮೃತಪಟ್ಟ ಬಳಿಕ ದೇಹ ಕೊಂಡೊಯ್ಯಲು ಆಂಬುಲೆನ್ಸ್ ದೊರಕದ ಕಾರಣ ಅವರ ತಾಯಿ ಇ-ರಿಕ್ಷಾದಲ್ಲಿ ಶವವನ್ನು ಸಾಗಿಸಿದ್ದಾರೆ.
ಜಾವುನ್ಪುರದ ನಿವಾಸಿಯಾಗಿರುವ ವಿನಯ್ ಸಿಂಗ್ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯಕೀಯ ಚಿಕಿತ್ಸೆಯ ತುರ್ತು ಅಗತ್ಯಕ್ಕಾಗಿ ಅವರು ವಾರಾಣಸಿಗೆ ತೆರಳಿದ್ದರು. ಮೊದಲು ಬನಾರಸ್ ಹಿಂದೂ ವಿವಿಗೆ ತೆರಳಿದ್ದ ಅವರಿಗೆ ಅಲ್ಲಿ ಕೋವಿಡ್ ಯೇತರ ಹಾಸಿಗೆಗಳ ಕೊರತೆ ಕಾರಣ ಚಿಕಿತ್ಸೆ ನಿರಾಕರಿಸಲಾಯಿತು. ಬಿಕ ಅವರು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾದರು. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ತಾಯಿಯ ಕಣ್ಣೆದುರೇ ಮೃತಪಟ್ಟಿದ್ದಾರೆ.
A Helpless Mother Lost His Son In PM Constituency Varanasi
— Sanwar Ali (@SanwarSpeaks) April 20, 2021
Who Is Responsible ? Who Is Accountable ? pic.twitter.com/UqbTtDzmeW
ಮಗನ ಸಾವಿನ ಆಘಾತದ ನಡುವೆಯೂ ತಾಯಿ, ಮೃತದೇಹವನ್ನು ಮರಳಿ ತಮ್ಮ ಊರಿಗೆ ಸಾಗಿಸುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಆಂಬುಲೆನ್ಸ್ ಸಿಗಲಿಲ್ಲ. ಕೊನೆಗೆ ಇ-ರಿಕ್ಷಾವೊಂದನ್ನು ಬಾಡಿಗೆಗೆ ಹೊಂದಿಸಲು ಯಶಸ್ವಿಯಾಗಿದ್ದಾರೆ. ತನ್ನ ಮಗನ ದೇಹವನ್ನು ಆ ತಾಯಿ ಆಟೊರಿಕ್ಷಾದಲ್ಲಿ ಇರಿಸಿಕೊಂಡು ಕೊಂಡೊಯ್ಯುತ್ತಿರುವ ಹೃದಯವಿದ್ರಾವಕ ಘಟನೆಯ ಚಿತ್ರಗಳು ವೈರಲ್ ಆಗಿವೆ.
ರಾಜ್ಯದಲ್ಲಿ ಯಾವುದೇ ರೀತಿಯ ಆರೋಗ್ಯ ಸೇವೆಗೆ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳುತ್ತಿರುವಾಗ, ಚಿಕಿತ್ಸೆಗೆ ಹಾಸಿಗೆ ಸಿಗದೆ, ಕೊನೆಗೆ ಶವ ಕೊಂಡೊಯ್ಯಲೂ ವಾಹನ ಸಿಗದೆ ಪರದಾಡಿದ ಅಸಹಾಯಕ ಮಹಿಳೆಯ ಸ್ಥಿತಿ ಸರ್ಕಾರದ ವಿರುದ್ಧದ ಟೀಕೆಗೆ ಗುರಿಯಾಗಿದೆ.