ವಾರಾಣಸಿಯಲ್ಲಿ ಹಸಿವಿನಿಂದ ಎಲೆ ತಿಂದರೆ ಈ ಆರು ಮಕ್ಕಳು?
ವಾರಾಣಸಿ (ಉತ್ತರಪ್ರದೇಶ), ಮಾರ್ಚ್ 27: ಹಸಿವಿನಿಂದ ಮಕ್ಕಳು ಎಲೆಗಳನ್ನು ತಿನ್ನುತ್ತಿರುವ ಕರುಳು ಹಿಂಡುವ ವರದಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಿಂದ ಬಂದಿದೆ. ವಾರಾಣಸಿ ಜಿಲ್ಲೆಯ ಬಾರಾಗಾಂವ್ ಪ್ರದೇಶಕ್ಕೆ ಬುಧವಾರ ಜಿಲ್ಲಾಡಳಿತದ ಅಧಿಕಾರಿಗಳು ಧಾವಿಸಿದ್ದು, ಮುಸಾಹರ್ ಸಮುದಾಯಕ್ಕೆ ಸೇರಿದ ಈ ಆರು ಮಕ್ಕಳ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದಾರೆ.
ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಕ್ಕಳ ಫೋಟೋ ಗುರುವಾರ ವೈರಲ್ ಆಗಿತ್ತು. ಸ್ಟೀಲ್ ಪಾತ್ರೆಯಲ್ಲಿ ಎಲೆಯ ಭಾಗವೊಂದನ್ನು ತಿನ್ನುತ್ತಿರುವ ದೃಶ್ಯ ಇರುವ ವಿಡಿಯೋ ಕೂಡ ಹರಿದಾಡಿತ್ತು. ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಮಾತನಾಡಿ, ಈ ಹಳ್ಳಿಯ ಮಕ್ಕಳು ಈ ಎಲೆಗಳನ್ನು ತಿನ್ನುತ್ತಾರೆ. ಈ ಕುಟುಂಬಕ್ಕೆ ರೇಷನ್ ಕಾರ್ಡ್ ಇದೆ. ಈ ತಿಂಗಳ ದಿನಸಿಯನ್ನೂ ತೆಗೆದುಕೊಂಡಿದ್ದಾರೆ. ಈ ದಿನ ಹೆಚ್ಚುವರಿ ದಿನಸಿ ಕೂಡ ನೀಡಲಾಗಿದೆ ಎಂದಿದ್ದಾರೆ.
ಈ ಕುಟುಂಬಕ್ಕೆ ಸಮಸ್ಯೆ ಇರುವುದಾಗಿ ಮಾಧ್ಯಮಗಳಿಂದ ತಿಳಿದು ಬಂತು. ಆ ಕೂಡಲೇ ಅವರಿಗೆ ಎಲ್ಲ ಅಗತ್ಯ ಪದಾರ್ಥಗಳನ್ನು ಒದಗಿಸಲಾಗಿದೆ ಎಂದು ಕೂಡ ಅವರು ತಿಳಿಸಿದ್ದು, ಇನ್ನೂ ಅಗತ್ಯ ನೆರವು ಒದಗಿಸುವುದಾಗಿ ಹೇಳಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮೇಲೆ, ಪೊಲೀಸರು ಹಳ್ಳಿಗೆ ಬಂದಿದ್ದಾರೆ. ಯಾವುದೇ ಸಮಸ್ಯೆ ಬಂದಲ್ಲಿ ಹಳ್ಳಿಯ ಮುಖ್ಯಸ್ಥರನ್ನು ಸಂಪರ್ಕಿಸಿ. ಆತ ಸರಿಯಾಗಿ ಸ್ಪಂದಿಸದಿದ್ದಲ್ಲಿ ತಮ್ಮ ಬಳಿ ತಿಳಿಸಿದರೆ ಅಗತ್ಯ ವಸ್ತುಗಳ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ.