ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಗೆ 12 ಕೋಣೆಯ ಸರಕಾರಿ ಬಂಗಲೆ
ಲಖನೌ, ಅಕ್ಟೋಬರ್ 12: ಸಮಾಜವಾದಿ ಪಕ್ಷದಿಂದ ಹೊರಬಂದು ಬಿಜೆಪಿಗೆ ಸೇರಬಹುದು ಎಂಬ ಊಹೆ ಇರುವ, ಮುಲಾಯಂ ಸಿಂಗ್ ಯಾದವ್ ರ ತಮ್ಮ ಶಿವಪಾಲ್ ಯಾದವ್ ಗೆ ಲಖನೌದಲ್ಲಿ ಸರಕಾರದಿಂದ ಅದ್ಭುತವಾದ ಬಂಗಲೆ ನೀಡಲಾಗಿದೆ. ಇದಕ್ಕೂ ಮುನ್ನ ಈ ಬಂಗಲೆಯಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿ ವಾಸವಾಗಿದ್ದರು.
ಉತ್ತರಪ್ರದೇಶದ ಶಾಸ್ತ್ರೀಜಿ ಮಾರ್ಗದಲ್ಲಿ ಇರುವ ಬಂಗಲೆಯಲ್ಲಿ ಈ ವರ್ಷ ಮೇ ತನಕ ಮಾಯಾವತಿ ವಾಸವಿದ್ದರು. ಮಾಯಾವತಿ ಸೇರಿದಂತೆ ಐವರು ಮಾಜಿ ಮುಖ್ಯಮಂತ್ರಿಗಳು ಸರಕಾರಿ ಬಂಗಲೆಯನ್ನು ತೆರವು ಮಾಡಿಕೊಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ಬಂಗಲೆಗೆ 4.67 ಕೋಟಿ ಹಾನಿ ಮಾಡಿದ ಅಖಿಲೇಶ್ 6 ಲಕ್ಷ ಕೊಟ್ಟರೆ ಸಾಕಂತೆ!
ಅಖಿಲೇಶ್ ಯಾದವ್ ಗೆ ಚಿಕ್ಕಪ್ಪ ಶಿವಪಾಲ್ ತಮಗೆ ಈ ಬಂಗಲೆ ಸಿಕ್ಕಿದ್ದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಧನ್ಯವಾದ ಹೇಳಿದ್ದಾರೆ. ಈ ಬಂಗಲೆಯಲ್ಲೆ ಹನ್ನೆರಡು ಮಲಗುವ ಕೋಣೆಗಳು ಇವೆ. ಹನ್ನೆರಡು ಡ್ರೆಸ್ಸಿಂಗ್ ರೂಮ್ ಗಳಿವೆ. ನಾಲ್ಕು ವಿಶಾಲವಾದ ವರಾಂಡ ಇದೆ. ಎರಡು ಹಜಾರ, ಅಡುಗೆ ಮನೆ, ನಾಲ್ಕು ಭದ್ರತಾ ವೀಕ್ಷಣಾ ಗೋಪುರ, ಸಿಬ್ಬಂದಿ ಉಳಿದುಕೊಳ್ಳುವ ವ್ಯವಸ್ಥೆ ಇದೆ.
"ನಾನು ಸಣ್ಣ ಫ್ಲ್ಯಾಟ್ ನಲ್ಲಿದ್ದೆ. ಐದು ಬಾರಿ ಶಾಸಕ ಹಾಗೂ ಎರಡು ಬಾರಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಸರಕಾರದಿಂದ ದೊಡ್ಡ ಬಂಗಲೆ ಪಡೆಯಲು ನಾನು ಅರ್ಹ ಹಾಗೂ ಅದರ ಅಗತ್ಯ ನನಗೆ ಇದೆ" ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.
ಅಖಿಲೇಶ್ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಪ್ರತಿಯಾಗಿ ಬಿಜೆಪಿ ಸರಕಾರ ನೀಡಿದ ಕೊಡುಗೆ ಈ ಬಂಗಲೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಜತೆಗೆ ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂಬ ಗುಪ್ತಚರ ವರದಿ ನಿಜ ಎಂದು ಕೂಡ ಶಿವಪಾಲ್ ಹೇಳಿದ್ದಾರೆ.
ಅಖಿಲೇಶ್ ಯಾದವ್ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ ಮೇಲೆ ಶಿವಪಾಲ್ ಯಾದವ್ ಸ್ವಂತ ಪಕ್ಷ ಸ್ಥಾಪನೆ ಮಾಡಿದ್ದರು. ಉತ್ತರ ಪ್ರದೇಶದ ಎಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದಾರೆ. ಆದರೆ ಅಧಿಕೃತವಾಗಿ ಸಮಾಜವಾದಿ ಪಕ್ಷ ತೊರೆಯದ ಶಿವಪಾಲ್ ಯಾದವ್, ಹೊಸ ಬಂಗಲೆಯನ್ನು ತಮ್ಮ ಹೊಸ ಪಕ್ಷದ ಕೆಲಸಕ್ಕೆ ಬಳಸುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿಯೊಬ್ಬರು ಇದ್ದ ವಿಶಾಲವಾದ ಬಂಗಲೆಯಲ್ಲಿ ಶಿವಪಾಲ್ ಯಾದವ್ ಗೆ ಹಂಚಿಕೆ ಮಾಡಬಹುದಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಇನ್ನು ಶಿವಪ್ರಸಾದ್ ಮಾತನಾಡಿ, ನಮ್ಮ ಹೋರಾಟ ಬಿಜೆಪಿ ವಿರುದ್ಧ ಹಾಗೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದಲ್ಲಿ ಶಿವಪಾಲ್ ಯಾದವ್ ರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಮಾತು ಕೇಳಿಬಂದಿದ್ದು, ಈಚೆಗೆ ಬಿಜೆಪಿಯ ನಾಯಕರನ್ನು ಭೇಟಿ ಆಗಿದ್ದರು ಎಂಬ ಸುದ್ದಿ ಇದೆ.