ಅಯೋಧ್ಯೆಯಲ್ಲಿ ಅಕ್ರಮ ಭೂ ವ್ಯವಹಾರ: ಬಿಜೆಪಿ ವಿರುದ್ಧ ಶಿವಸೇನೆ ಗಂಭೀರ ಆರೋಪ
ಲಕ್ನೋ ಡಿಸೆಂಬರ್ 24: ಬಿಜೆಪಿ ಅಯೋಧ್ಯಯಲ್ಲಿ ಅಕ್ರಮ ಭೂ ವ್ಯವಹಾರಗಳನ್ನು ಮಾಡಿದೆ ಎಂದು ಶಿವಸೇನೆ ಗಂಭೀರ ಆರೋಪವನ್ನು ಮಾಡಿದೆ. ಜೊತೆಗೆ ಬಿಜೆಪಿಯನ್ನು 'ಚೋರ್ ಬಜಾರ್' ಎಂದು ಕರೆದಿದೆ. ಅಯೋಧ್ಯೆ ಭೂ ವ್ಯವಹಾರಗಳ ಕುರಿತು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯನ್ನು ಉಲ್ಲೇಖಿಸಿ, ಶಿವಸೇನೆಯ ಮುಖವಾಣಿ ಸಾಮ್ನಾ ಗುರುವಾರ ತನ್ನ ಸಂಪಾದಕೀಯದ ಮೂಲಕ ಬಿಜೆಪಿ ಮತ್ತು ಅದರ ಹಿಂದುತ್ವದ ಅಜೆಂಡಾವನ್ನು ತಳ್ಳಿಹಾಕಿದೆ. ಜೊತೆಗೆ ಕೇಸರಿ ಪಕ್ಷವನ್ನು "ಚೋರ್ ಬಜಾರ್" ಎಂದು ಕರೆದಿದೆ.
ಶಿವಸೇನೆಯ ಸಾಮ್ನಾದ ಸಂಪಾದಕೀಯದಲ್ಲಿ, "ಅಯೋಧ್ಯೆಯ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಬಿಜೆಪಿ ನಾಯಕರು, ಶಾಸಕರು ಮತ್ತು ಮೇಯರ್ ಅಯೋಧ್ಯೆಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿದ್ದಾರೆ. ಜೊತೆಗೆ ಅದನ್ನು ಅಧಿಕ ಹಣಕ್ಕೆ ಮಾರಾಟ ಮಾಡಿದ್ದಾರೆ. ಈ ಎಲ್ಲಾ ವಹಿವಾಟುಗಳು ಅನುಮಾನಾಸ್ಪದ ಮತ್ತು ಅಷ್ಟೇ ಆಘಾತಕಾರಿ" ಎಂದಿದೆ. ಇದರಿಂದ ಬಿಜೆಪಿಯ ಹಿಂದುತ್ವವು ಒಂದು ರೀತಿಯ ಚೋರ್ ಬಜಾರ್ ಆಗಿರುವುದು ಹೆಚ್ಚು ಸ್ಪಷ್ಟವಾಗಿದೆ. ಅಯೋಧ್ಯೆ ಒಪ್ಪಂದಗಳು ಈಗ ಆ ಚೋರ್ ಬಜಾರ್ನ ಒಂದು ಭಾಗವಾಗಿದೆ ಎಂದು ಶಿವಸೇನಾ ಮುಖವಾಣಿ ಹೇಳಿದೆ.
ನವೆಂಬರ್ 9, 2019 ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂಕೋರ್ಟ್ ಪೀಠದ ಐವರು ನ್ಯಾಯಾಧೀಶರು ರಾಮ್ ಲಲ್ಲಾ ಪರವಾಗಿ ತೀರ್ಪು ನೀಡಿದರು ಮತ್ತು 2.7 ಎಕರೆ ಪ್ರದೇಶದಲ್ಲಿ ಹರಡಿರುವ ಸಂಪೂರ್ಣ ವಿವಾದಿತ ಭೂಮಿಯನ್ನು ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ಗೆ ಹಸ್ತಾಂತರ ಮಾಡಿದ್ದಾರೆ. ನವೆಂಬರ್ 9, 2019 ರಂದು ಜಿಲ್ಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ನಂತರ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಂಬಂಧಿಕರು ಅಯೋಧ್ಯೆಯಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಬುಧವಾರ ತನಿಖಾ ವರದಿ ಪ್ರಕಟಿಸಿದೆ. ಅದೇ ದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೂ ವ್ಯವಹಾರಗಳ ತನಿಖೆಗೆ ಆದೇಶಿಸಿದರು.
ಪ್ರಧಾನಿ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ದೇವಾಲಯದ ಭೂಮಿಪೂಜೆ ನಡೆಯಿತು. ನಂತರ ಬಿಜೆಪಿಯ ಕೆಲ ಅಧಿಕಾರಿಗಳು ಉದ್ದೇಶಿತ ದೇವಾಲಯದ ಸ್ಥಳದ ಬಳಿ ಪ್ರಮುಖ ಪ್ಲಾಟ್ಗಳನ್ನು ವ್ಯಾಪಾರ ಮಾಡಲು ಪ್ರಾರಂಭಿಸಿದರು. ದೇವಸ್ಥಾನದ ಟ್ರಸ್ಟ್ 70 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಬಿಜೆಪಿ ಶಾಸಕರು, ಕಾರ್ಪೊರೇಟರ್ಗಳು ಮತ್ತು ಪೊಲೀಸ್ ಅಧಿಕಾರಿಗಳು ದೇವಸ್ಥಾನಕ್ಕೆ ಹತ್ತಿರವಿರುವ ಭೂಮಿಯನ್ನು ಖರೀದಿಸಿ ದೊಡ್ಡ ಹೂಡಿಕೆ ಮಾಡಿದರು.
ಶಾಸಕರು, ಮೇಯರ್, ರಾಜ್ಯ ಒಬಿಸಿ ಸದಸ್ಯರು, ವಿಭಾಗೀಯ ಆಯುಕ್ತರು ಮತ್ತು ಇತರ ಅಧಿಕಾರಿಗಳ ಸಂಬಂಧಿಕರು ದೇವಸ್ಥಾನದ ಆವರಣದ ಬಳಿ ಕೋಟಿ ಮೌಲ್ಯದ ಭೂಮಿಯನ್ನು ಹೇಗೆ ಖರೀದಿಸಿದರು ಎಂಬುದನ್ನು ಇಂಡಿಯನ್ ಎಕ್ಸ್ಪ್ರೆಸ್ ಹೈಲೈಟ್ ಮಾಡಿದೆ. ದೇವಾಲಯದ ನಿರ್ಮಾಣದ ನಂತರ, ಇಡೀ ಪ್ರದೇಶವು ರೂಪಾಂತರಗೊಳ್ಳುತ್ತದೆ. ಇದು ಭೂಮಿಯ ಬೆಲೆಯಲ್ಲಿ ಏರಿಕೆಗೆ ಕಾರಣವಾಗುತ್ತದೆ. ಇದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದಂಧೆ. "ರಾಮ ಮಂದಿರ ನಿರ್ಮಾಣಕ್ಕೆ ರಕ್ತ ಕೊಟ್ಟವರು ಯಾರು? ಮತ್ತು ಯಾರು ಲಾಭ ಮಾಡುತ್ತಿದ್ದಾರೆ ಎಂದು ನೋಡಿ? ಇದು ಬಹು ದೊಡ್ಡ ಹಗರಣವಾಗಿದೆ" ಎಂದು ದೂರಲಾಗಿದೆ.
ಸಂಪಾದಕೀಯದಲ್ಲಿ ಹೇಳಿದಂತೆ "ಅಯೋಧ್ಯೆಯ ಮೇಯರ್ ಕೆಲವು ಲಕ್ಷಗಳಿಗೆ ಭೂಮಿಯನ್ನು ಖರೀದಿಸಿದರು. ಮುಂದಿನ ಐದು-ಹತ್ತು ನಿಮಿಷಗಳಲ್ಲಿ ಅದನ್ನು ರಾಮ ಜನ್ಮಭೂಮಿಗೆ 16 ಕೋಟಿ ರೂ.ಗೆ ಮಾರಾಟ ಮಾಡಿದರು. ಮೇಯರ್ ಬಿಜೆಪಿಯವರು. ಇದು ಭಗವಾನ್ ರಾಮನ ಹೆಸರಿನಲ್ಲಿರುವ ಚೋರ್ ಬಜಾರ್ ಆಗಿದೆ. ಯಾರಾದರೂ ಇದನ್ನು ಹಿಂದುತ್ವ ಎಂದು ಕರೆಯುತ್ತಿದ್ದರೆ, ನಾವು ಅವರ ಮುಂದೆ ಕೈಮುಗಿದು ಸಾಷ್ಟಾಂಗ ನಮಸ್ಕಾರ ಮಾಡಬೇಕಾಗಿದೆ" ಎಂದು ಆರೋಪಿಸಲಾಗಿದೆ.
"ಅಧಿಕಾರಕ್ಕಾಗಿ ಶಿವಸೇನೆ ಹಿಂದುತ್ವದೊಂದಿಗೆ ವಿಚ್ಛೇದನ ಪಡೆದಿದೆ ಎಂದು ಬಿಜೆಪಿಯವರು ಬೋಧಿಸುತ್ತಿದ್ದಾರೆ. ಆದರೆ ಬಿಜೆಪಿ ಈ ವಾಣಿಜ್ಯ ಹಿಂದುತ್ವವನ್ನು ತನ್ನಲ್ಲೇ ಇಟ್ಟುಕೊಳ್ಳಬೇಕು. ಈ ಜನರು ಭಗವಾನ್ ರಾಮನನ್ನು ತಮ್ಮ ವಾಣಿಜ್ಯ ವ್ಯವಹಾರಗಳಿಂದ ದೂರವಿರಲು ಸಹ ಅನುಮತಿಸಲಿಲ್ಲ. ದೇವಸ್ಥಾನದ ಸಲುವಾಗಿ ಬೇರೆಯವರು ಸತ್ತರು ಮತ್ತು ಬಿಜೆಪಿಯವರು ಅದರಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಆಂದೋಲನದ ನೇತೃತ್ವ ವಹಿಸಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಬಿಜೆಪಿ ಬದಿಗೊತ್ತಿ ಈಗ ಅಯೋಧ್ಯೆಯಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸುತ್ತಿದೆ" ಎಂದು ಅದು ಹೇಳಿದೆ.
ಬಿಜೆಪಿಯ "ಹೊಸ ಹಿಂದುತ್ವ" ಸಮುದಾಯವನ್ನು ದೂಷಿಸುತ್ತದೆ ಎಂದು ಸಾಮ್ನಾ ಮುಖವಾಣಿ ಹೇಳಿದೆ. ಭೂಮಿಯನ್ನು ಕಬಳಿಸುವ ತಂತ್ರಜ್ಞಾನವನ್ನು ಬಿಜೆಪಿ ಅಭಿವೃದ್ಧಿಪಡಿಸಿದೆ ಎಂದು ಸಾಮ್ನಾ ಆರೋಪಿಸಿದ್ದಾರೆ.
"ಬಿಜೆಪಿಯ ಹಿಂದುತ್ವದಲ್ಲಿ ಭಗವಾನ್ ರಾಮನಿಗೆ ಸ್ಥಾನವಿಲ್ಲ ಆದರೆ ವ್ಯಾಪಾರಕ್ಕೆ ಮಾತ್ರ ಸ್ಥಾನವಿದೆ ಎಂಬುದನ್ನು ಹಗರಣವು ಎತ್ತಿ ತೋರಿಸುತ್ತದೆ. ಹತ್ತಿರದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅವರಿಗೆ ದೇವಾಲಯಗಳು ಬೇಕು. 'ರಾಮ್ ನಾಮ್ ಸತ್ಯ ಹೇ' ಎಂಬುದು ಇತರರಿಗೆ ಆದರೆ ಬಿಜೆಪಿಗೆ ಹಣ ಮತ್ತು ಅಧಿಕಾರ ಬೇಕು. ಜನರು 'ದೇವಚಿ ಆಳಂದಿ' (ದೇವರ ಅಳಂದಿ - ಪುಣೆಯ ದೇವಾಲಯದ ಪಟ್ಟಣ ಮತ್ತು ಸಂತ ಜ್ಞಾನೇಶ್ವರನ ಜನ್ಮಸ್ಥಳ) ಗೆ ಹೋಗುತ್ತಿದ್ದಾರೆ ಎಂದು ಭಾವಿಸಿದ್ದರು. ಆದರೆ ಬಿಜೆಪಿ ಅವರನ್ನು ಕಳ್ಳರ ಆಳಂದಿಗೆ ಕರೆದೊಯ್ಯುತ್ತಿದೆ. "ಬಿಜೆಪಿ ದೇಶವನ್ನು ಮಾರಿದೆ ಆದರೆ ಅಯೋಧ್ಯೆಯನ್ನು ಮಾರಲು ನಾವು ಬಿಡುವುದಿಲ್ಲ. ಏಕೆಂದರೆ ಶಿವಸೇನೆ ಹಿಂದುತ್ವದ ಕೇಸರಿ ಧ್ವಜವನ್ನು ಎತ್ತಿ ಹಿಡಿದಿದೆ,'' ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.