ಅಯೋಧ್ಯೆ ಮಸೀದಿ ನಿರ್ಮಾಣ ಟ್ರಸ್ಟ್:ಸರ್ಕಾರಿ ಪ್ರತಿನಿಧಿ ನಾಮನಿರ್ದೇಶನಕ್ಕೆ ಸುಪ್ರೀಂ ನಕಾರ
ನವದೆಹಲಿ, ಡಿಸೆಂಬರ್ 05: ಅಯೋಧ್ಯೆ ಮಸೀದಿ ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ನಾಮನಿರ್ದೇಶನಗೊಳಿಸುವಂತೆ ನಿರ್ದೇಶನ ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಅಯೋಧ್ಯೆಯ ಮಸೀದಿ ಕಟ್ಟಡ ನಿರ್ಮಾಣಕ್ಕಾಗಿ ರಚಿಸಿರುವ ಇಂಡೋ ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಷನ್ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ನಾಮನಿರ್ದೇಶನಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿದಾರರು ರಾಮ ಮಂದಿರ ಟ್ರಸ್ಟ್ ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಗೆ ಸೇರಿಸುವಂತೆ ಅರ್ಜಿದಾರರು ಕೋರಿದ್ದರು.
ವಕೀಲರಾದ ಶಿಶಿರ್ ಚತುರ್ವೇದಿ ಮತ್ತು ಕೆಕೆ ಶುಕ್ಲಾ ಸಲ್ಲಿಸಿದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಮತ್ತು ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿತು.
ಉತ್ತರ ಪ್ರದೇಶದ ಅಯೋಧ್ಯಾ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿಷಯದ ವಿವಾದ ದಶಕಗಳ ಇತಿಹಾಸ ಹೊಂದಿದೆ. ಭಾರತದಲ್ಲಿ ಅಯೋಧ್ಯೆ ರಾಮಮಂದಿರ ವಿವಾದ ಎನ್ನುವುದು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನ ಹೊಂದಿದೆ. 1528ರಲ್ಲಿ ಇಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಿತ್ತು ಎನ್ನುವ ವಾದ.
ಆದರೆ 1885ರಿಂದ ಈ ಕುರಿತು ಕಾನೂನು ಹೋರಾಟ ನಡೆಯುತ್ತಲೇ ಇದೆ. ಇದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು ನವೆಂಬರ್ 9, 2019ರಲ್ಲಿ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೂಡ ಸಿಕ್ಕಿದೆ. ಈಗ ಬಾಬರಿ ಮಸೀದಿ ಧ್ವಂಸ ಪ್ರಕರಣ ಕೂಡ ಮತ್ತೊಂದು ಅಧ್ಯಾಯ ಕಂಡಿದೆ.
ಎಲ್ಕೆ ಅಡ್ವಾಣಿ ಸೇರಿದಂತೆ ಬಹುತೇಕ ಎಲ್ಲರನ್ನೂ ಆರೋಪ ಮುಕ್ತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇತಿಹಾಸವನ್ನೊಮ್ಮೆ ಅವಲೋಕನ ಮಾಡಿದರೆ ಹಲವಾರು ಘಟನೆಗಳು ದಾಖಲಾಗಿವೆ