ಸ್ವಾಮಿ ಚಿನ್ಮಯಾನಂದ ವಿರುದ್ಧ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ನವದೆಹಲಿ, ಫೆಬ್ರವರಿ 20: ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರೋಪಿ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.
ಚಿನ್ಮಯಾನಂದ ಅವರಿಗೆ ಜಾಮೀನು ನೀಡಿರುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಪ್ರಶ್ನಿಸಿ, ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ಸೋಮವಾರ ವಿಚಾರಣೆಗೆ ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.
ವಿದ್ಯಾರ್ಥಿನಿ ನಾಪತ್ತೆ: ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್
ಚಿನ್ಮಯಾನಂದ ಅವರ ಟ್ರಸ್ಟ್ ಉತ್ತರ ಪ್ರದೇಶದ ಷಹಜಾನ್ಪುರದಲ್ಲಿ ಎಸ್ ಎಸ್ ಕಾನೂನು ಕಾಲೇಜು ನಡೆಸುತ್ತಿದ್ದು, ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದರು. ಚಿನ್ಮಯಾನಂದ ಅವರನ್ನು ಕಳೆದ ಸೆಪ್ಟೆಂಬರ್ನಲ್ಲಿ ಬಂಧಿಸಲಾಗಿತ್ತು.
72 ವರ್ಷದ ಚಿನ್ಮಯಾನಂದ ವಿರುದ್ಧ ಐಪಿಸಿ ಸೆಕ್ಷನ್ 376 ಸಿ (ತಮ್ಮ ಅಧಿಕಾರ, ಸ್ಥಾನದ ಲಾಭ ಬಳಸಿಕೊಂಡು ಲೈಂಗಿಕ ಸಂಪರ್ಕ ಪಡೆಯುವುದು) ಸೆಕ್ಷನ್ 506 (ಬೆದರಿಕೆ ಅಪರಾಧ) ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಸೆಕ್ಷನ್ 354ಡಿ, ಸೆಕ್ಷನ್ 342ರ ಅಡಿಯಲ್ಲಿ ಸಹ ದೂರು ದಾಖಲು ಮಾಡಲಾಗಿತ್ತು.
ಆಗಸ್ಟ್ 24ರಂದು ವಿದ್ಯಾರ್ಥಿನಿ ನಾಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಯುವತಿ, 'ಸಂತ ಸಮುದಾಯ ಹಿರಿಯ ಮುಖಂಡರೊಬ್ಬರು' ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದರು. ಚಿನ್ಮಯಾನಂದ ತಮ್ಮ ಮಗಳ ಮೇಲೆ ಲೈಂಗಿಕ ಕಿರುಕುಳ ಎಸಗುತ್ತಿದ್ದಾರೆ ಎಂದು ಯುವತಿಯ ತಂದೆ ದೂರು ನೀಡಿದ್ದರು. ಈ ಸಂಬಂಧ ಸೆಪ್ಟೆಂಬರ್ 20ರಂದು ಚಿನ್ಮಯಾನಂದ ಅವರನ್ನ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಫೆಬ್ರವರಿ 3ರಂದು ಅಲಹಾಬಾದ್ ಹೈಕೋರ್ಟ್ ಸ್ವಾಮಿ ಚಿನ್ಮಯಾನಂದ ಅವರಿಗೆ ಜಾಮೀನು ಮಂಜೂರು ಮಾಡಿತ್ತು.