ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣಕ್ಕೆ ವಿಘ್ನ
ಲಕ್ನೋ,ಡಿಸೆಂಬರ್ 31: ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಅಯೋಧ್ಯೆ ಶ್ರೀರಾಮಮಂದಿರ ಅಡಿಪಾಯಕ್ಕಾಗಿ ಈಗ ಅಸ್ತಿತ್ವದಲ್ಲಿರುವ ಮಾದರಿಯ ಕೆಳಗೆ ಸರಯೂ ನದಿಯ ಹರಿವು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಉತ್ತಮ ಮಾದರಿಯನ್ನು ರೂಪಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶದ ಪ್ರಮುಖ ಐಐಟಿ ಎಂಜಿನಿಯರ್ಗಳ ಮೊರೆ ಹೋಗಿದ್ದಾರೆ. ಆಮಮಂದಿರ ನಿರ್ಮಾಣ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿರುವ ಸಮಿತಿಯು ಪ್ರಧಾನಿಯವರ ಮಾಜಿ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಶರ್ಮಾ ನೇತೃತ್ವದಲ್ಲಿ ಬುಧವಾರ ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿವೆ.
ರಾಮ ಮಂದಿರ ಯೋಜನೆಗೆ 1,100 ಕೋಟಿ ರೂ. ವೆಚ್ಚ: ಟ್ರಸ್ಟ್ ಮಾಹಿತಿ
ದೇವಾಲಯ ನಿರ್ಮಾಣವಾಗಲಿರುವ ಸ್ಥಳದ ಕೆಳಗೆ ಸರಯೂ ನದಿಯ ಹರಿವು ಕಂಡುಬಂದಿರುವುದರಿಂದ ಈ ಅಡಿಪಾಯ ಮಾದರಿ ಕಾರ್ಯ ಸಾಧ್ಯವಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಉತ್ತಮ ಮಾದರಿಯನ್ನು ರೂಪಿಸುವಂತೆ ಐಐಟಿಮುಂಬೈ, ಐಐಟಿ ರೂರ್ಕಿ, ನ್ಯಾಷನಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್, ಟಾಟಾ ಕನ್ಸಲ್ಟೆನ್ಸಿ, ಲಾರ್ಸನ್ ಆಂಡ್ ಡೂಬ್ರೋ ಸೇರಿದಂತೆ ಪ್ರಮುಖ ಸ್ಥಳಗಳ ಎಂಜಿನಿಯರ್ಗಳಿಗೆ ಮನವಿ ಮಾಡಲಾಗಿದೆ.
ಮಂದಿರದ ಸ್ತಂಭಗಳು ಸಾವಿರಾರು ವರ್ಷ ಬಾಳಿಕೆ ಬರಬೇಕೆಂಬ ಉದ್ದೇಶವಿದೆ. ಸರಯೂ ನದಿಯ ಹರಿವು ಕಂಡುಬಂದ ಬಳಿಕ ಅಡಿಪಾಯ ಸ್ತಂಭಗಳ ವಿನ್ಯಾಸ ಕಾರ್ಯವನ್ನೂ ಮುಂದೂಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಅಲೋಕ್ ಕುಮಾರ್ ಹೇಳಿದ್ದಾರೆ.
ಅಡಿಪಾಯ ಸ್ತಂಭಗಳ ಮೇಲೆ ಸುಮಾರು 700 ಟನ್ಗಳಷ್ಟು ಭಾರ ಇಟ್ಟಾಗ ಸ್ತಂಭ ಸುಮಾರು 4 ಇಂಚಿನಷ್ಟು ಕುಸಿದಿದೆ. ಅಲ್ಲದೆ ಸ್ತಂಭಗಳಲ್ಲಿ ಬಿರುಕು ಬಿಟ್ಟ ಸೂಚನೆ ಕಂಡುಬಂದಿದೆ. ಈ ಪ್ರದೇಶ ಭೂಕಂಪ ವಲಯದಲ್ಲಿರುವುದರಿಂದ ರಚನಾತ್ಮಕವಾಗಿ ಸುರಕ್ಷಿತ ಮಾದರಿಯನ್ನು ರೂಪಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.