ಸಂಭಾಲ್: ಶಿಕ್ಷಕರ ನಿರ್ಲಕ್ಷ್ಯ- 18 ಗಂಟೆಗಳ ಕಾಲ ತರಗತಿಯಲ್ಲಿ ಬಾಲಕಿ ಲಾಕ್
ಸಂಭಾಲ್ ಸೆಪ್ಟೆಂಬರ್ 22: ಆ ಬಾಲಕಿಗೆ ಹಸಿವು, ಬಾಯಾರಿಕೆ ಆದರೆ ನೀಡುವವರಿಲ್ಲ. ಆ ಬಾಲಕಿಯ ಸುತ್ತಲೂ ಕತ್ತಲು, ಜೊತೆಗೆ ಯಾರೂ ಇಲ್ಲ. ಹಾಗಂತ ಈ ಬಾಲಕಿ ಅನಾಥೆ ಏನೂ ಅಲ್ಲ. ಆದರೆ ಈ ಬಾಲಕಿಯನ್ನು ಶಾಲೆಯಲ್ಲಿದ್ದರೂ ಬಾಗಿಲು ಬೀಗ ಹಾಕಿಕೊಂಡು ಶಿಕ್ಷಕರು ಹೋಗಿರುವುದು ತಿಳಿದು ಬಂದಿದೆ. 18 ಗಂಟೆಗಳ ಕಾಲ ತರಗತಿಯಲ್ಲಿ ಬಾಲಕಿಯನ್ನು ಬಂಧಿಸಿ, ಶಾಲೆಗೆ ಬೀಗ ಹಾಕಿ ಶಿಕ್ಷಕರು ಮನೆಗೆ ತೆರಳಿದ್ದಾರೆ.
ಉತ್ತರಪ್ರದೇಶದ ಸಂಭಾಲ್ ಪ್ರಾಥಮಿಕ ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯ ಬಯಲಿಗೆ ಬಂದಿದ್ದು, ಇದನ್ನು ಕೇಳಿ ಪೋಷಕರು ಬೆಚ್ಚಿ ಬೀದಿದ್ದಾರೆ. ಇಲ್ಲಿ ಒಬ್ಬ ಹುಡುಗಿ ಹಸಿವಿನಿಂದ ಮತ್ತು ಬಾಯಾರಿಕೆಯಿಂದ ತರಗತಿಯಲ್ಲಿ 18 ಗಂಟೆಗಳ ಕಾಲ ಕಳೆದಿದ್ದಾಳೆ. ಆದರೆ, ಆಕೆ ಎಲ್ಲಿದ್ದಾಳೆ ಎಂಬುದೂ ಯಾರಿಗೂ ಗೊತ್ತಾಗಲಿಲ್ಲ. ಮರುದಿನ ಬೆಳಿಗ್ಗೆ ಶಾಲೆ ತೆರೆದಾಗ ವಿದ್ಯಾರ್ಥಿನಿ ಹೊರಗೆ ಬಂದಿದ್ದಾಳೆ. ಈ ವಿಷಯವು ಈಗ ಉನ್ನತ ಅಧಿಕಾರಿಗಳಿಗೆ ತಲುಪಿದೆ. ತನಿಖೆಯ ನಂತರ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶದ ಲಕ್ನೋದಲ್ಲಿ 5.2 ತೀವ್ರತೆಯ ಭೂಕಂಪ!
ಈ ಪ್ರಕರಣ ಸಂಭಾಲ್ ಜಿಲ್ಲೆಯ ಧನಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಧನಾರಿ ಗ್ರಾಮದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಅಂಶಿಕಾ ಬಾಲುಶಂಕರ ಪಟ್ಟಿಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿ. ಅವಳು ಮಂಗಳವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗಿದ್ದಾಳೆ. ಆದರೆ ಸಂಜೆಯಾದರೂ ಅಂಶಿಕಾ ಮನೆಗೆ ಬಂದಿರಲಿಲ್ಲ. ಮನೆಯವರು ಆತಂಕಗೊಂಡು ಶಾಲೆಗೆ ತೆರಳಿದರು. ಆದರೆ ಅಲ್ಲಿ ಬಾಲಕಿ ಶಾಲೆಯಲ್ಲಿ ಇಲ್ಲ ಎಂದು ಶಿಕ್ಷಕರು ಹೇಳಿಕೊಂಡಿದ್ದಾರೆ.
ಕಂಬನಿ ಮಿಡಿದ ಕುಟುಂಬ
ಬಾಲಕಿ ಪತ್ತೆಯಾಗದಿದ್ದಾಗ ಕುಟುಂಬಸ್ಥರಲ್ಲಿ ಕಂಬನಿ ಮಿಡಿದಿತ್ತು. ನಂತರ ಅವರು ಹಳ್ಳಿಯ ಸಮೀಪ ಮತ್ತು ಕಾಡಿನಲ್ಲಿ ಹುಡುಗಿಯನ್ನು ಹುಡುಕುತ್ತಲೇ ಇದ್ದರು. ಆದರೆ ಅವಳ ಯಾವುದೇ ಕುರುಹು ಇರಲಿಲ್ಲ. ಬುಧವಾರ ಬೆಳಗ್ಗೆ ಶಾಲೆ ತೆರೆದಾಗ ಬಾಲಕಿಯನ್ನು ಒಳಗಡೆ ಬಿಟ್ಟು ತರಗತಿಗೆ ಬೀಗ ಹಾಕಿರುವುದು ಕಂಡು ಬಂದಿದೆ. ಬಳಿಕ ವಿದ್ಯಾರ್ಥಿನಿ ಅಂಶಿಕಾ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ.
ಶಿಕ್ಷಕರ ತರಾಟೆ ತೆಗೆದುಕೊಂಡ ಕುಟುಂಬ
ಮಾಹಿತಿ ಪಡೆದ ನಂತರ, ಅಂಶಿಕಾಳ ಚಿಕ್ಕಪ್ಪ ಶಾಲೆಗೆ ಆಗಮಿಸಿ ಶಿಕ್ಷಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ವಿದ್ಯಾರ್ಥಿನಿಯನ್ನು ರಾತ್ರೋರಾತ್ರಿ ತರಗತಿಗೆ ಬೀಗ ಹಾಕಿರುವ ಸುದ್ದಿ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸಿದ್ದಾರೆ.
ಕರಾಳ ರಾತ್ರಿಯ ಬಗ್ಗೆ ಹಂಚಿಕೊಂಡ ಬಾಲಕಿ
ಈ ವೇಳೆ ಶಿಕ್ಷಕರ ನಿರ್ಲಕ್ಷ್ಯದ ಆರೋಪ ಹೊರಿಸಿ ಗದ್ದಲ ಎಬ್ಬಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಬ್ಲಾಕ್ ಶಿಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿನಿ ಅಂಶಿಕಾ ಮಾತನಾಡಿ, 'ತರಗತಿಯಲ್ಲಿ ಓದುವಾಗ ಶಾಲೆಯ ಬೆಂಚಿನ ಮೇಲೆ ಮಲಗಿದ್ದಳು. ಆದರೆ ನಾನು ಕಣ್ಣು ತೆರೆದಾಗ ರಾತ್ರಿಯಾಗಿತ್ತು ಮತ್ತು ನನಗೆ ಹಸಿವಾಗಿತ್ತು. ಶಾಲೆಯಲ್ಲಿ ಕತ್ತಲು ಕವಿದಿತ್ತು, ಅದನ್ನು ನೋಡಿ ಹೆದರಿ ಅಳಲು ಶುರು ಮಾಡಿದೆ. ಆ ಸಮಯದಲ್ಲಿ ಯಾರೂ ಬರಲಿಲ್ಲ. ಅಮ್ಮನೂ ಬರಲಿಲ್ಲ' ಎಂದು ಹೇಳಿಕೊಂಡಿದ್ದಾಳೆ.
ಕಿರುಚಾಡಿದ ಶಾಲೆಯಲ್ಲಿ ಲಾಕ್ ಆದ ಬಾಲಕಿ
ಮಾಧ್ಯಮ ವರದಿಗಳ ಪ್ರಕಾರ, ಪ್ರಾಥಮಿಕ ಶಾಲೆಯು ಗ್ರಾಮದಿಂದ ಸುಮಾರು 500 ಮೀಟರ್ ದೂರದಲ್ಲಿದೆ. ಹುಡುಗಿ ತಡರಾತ್ರಿಯಲ್ಲಿ ಎಚ್ಚರವಾದಾಗ, ಬಾಗಿಲು ತೆರೆಯಿರಿ ಎಂದು ಕಿರುಚಾಡಿಕೊಂಡಿದ್ದಾಳೆ. ಅವಳು ಹಲವಾರು ಬಾರಿ ಕೂಗಿದ್ದಾಳೆ. ಹಲವಾರು ಬಾರಿ ಬಾಗಿಲು ಬಡಿದಿದ್ದಾಳೆ. ಆದರೆ ಯಾರಿಗೂ ಕೇಳಲಿಲ್ಲ. ಏಕೆಂದರೆ, ಶಾಲೆ ಊರ ಹೊರಗಿದೆ. ಹೀಗಾಗಿ ಬಾಲಕಿ ಹೆದರಿ ಶಾಲೆಯಲ್ಲೇ ಕಾಲ ಕಳೆದಿದ್ದಾಳೆ.