ವಿಧಾನಸಭಾ ಚುನಾವಣೆಯಲ್ಲಿ ನಾವು 400 ಸ್ಥಾನ ಗೆಲ್ಲುವುದು ಖಚಿತ; ಅಖಿಲೇಶ್ ಯಾದವ್
ಲಖ್ನೋ, ಆಗಸ್ಟ್ 05: "2022ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 400 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವುದು ಖಚಿತ" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಉತ್ತರ ಪ್ರದೇಶ ಜನರು ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಇದುವರೆಗೂ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ 350ರಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳುತ್ತಿದ್ದೆವು. ಇದೀಗ 400 ಸ್ಥಾನಗಳವರೆಗೆ ಜಯ ಸಾಧಿಸುವುದು ಖಚಿತ ಎನಿಸುತ್ತಿದೆ" ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಸಮರ!
"ಕಳೆದ ಚುನಾವಣೆ ವೇಳೆ ಬಿಜೆಪಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಜೊತೆಗೆ ಆಡಳಿತ ಪಕ್ಷವು ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹುಡುಕುವುದು ಸುಲಭ ಸಾಧ್ಯವಲ್ಲ" ಎಂದು ಟೀಕಿಸಿದ್ದಾರೆ.
"ರಾಜ್ಯದಲ್ಲಿ ಬ್ರಾಹ್ಮಣರು, ದಲಿತರು ಮತ್ತು ಮುಸ್ಲಿಂ ಸಮುದಾಯಗಳು ಬಿಜೆಪಿಯಿಂದ ನಿರ್ಲಕ್ಷಿಸಲ್ಪಟ್ಟಿವೆ" ಎಂದು ದೂರಿದ್ದಾರೆ.
"ಚುನಾವಣೆಯಲ್ಲಿ ಬಿಜೆಪಿ ಯಾವುದೇ "ಮ್ಯಾನಿಫೆಸ್ಟೊ" -ಪ್ರಣಾಳಿಕೆ ಹೊಂದಿಲ್ಲ. ಆದರೆ "ಮನಿ ಫೆಸ್ಟೊ" ಹಣದ ಉತ್ಸವ ನಡೆಸುತ್ತಿದೆ. ಸಮಾಜವಾದಿ ಸರ್ಕಾರವಿದ್ದ ಅವಧಿಯಲ್ಲಿ ಜಾರಿಯಾಗಿದ್ದ ಯೋಜನೆಗಳಿಗೆ ತನ್ನದೇ ಹೆಸರು ಹಾಕಿಕೊಂಡಿದೆ ಅಷ್ಟೆ. ರಾಜ್ಯದಲ್ಲಿ ಈ ನಾಲ್ಕು ವರ್ಷಗಳಲ್ಲಿ ಬಿಜೆಪಿ ಏನನ್ನೂ ಮಾಡಿಲ್ಲ" ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ದೇಶದಲ್ಲಿ ಅಗ್ರಸ್ಥಾನ ಹೊಂದಿದ ರಾಜ್ಯ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, "ಜಾಹೀರಾತುಗಳಲ್ಲಿ ಸರ್ಕಾರ ನಂಬರ್ 1 ಎಂದು ಹೇಳಿಕೊಳ್ಳುತ್ತಿದೆ. ಆದರೆ ಬಿಜೆಪಿ ಅಪೌಷ್ಟಿಕತೆಯಲ್ಲಿ ರಾಜ್ಯವನ್ನು ನಂಬರ್ ಒನ್ ಮಾಡಿದೆ. ಮೃತದೇಹಗಳು ಗಂಗಾನದಿಯ ದಡದಲ್ಲಿ ತೇಲುವಂತೆ ಮಾಡಿರುವುದರಲ್ಲಿ ನಂಬನ್ ಒನ್ ಇದ್ದಾರೆ. ಜನರಿಗೆ ಆಮ್ಲಜನಕ ನೀಡಲು ಸಾಧ್ಯವಾಗದ ವಿಷಯದಲ್ಲಿ ನಂಬರ್ ಒನ್ ಇದ್ದಾರೆ. ನಿರುದ್ಯೋಗ ಸಮಸ್ಯೆಯಲ್ಲಿ ರಾಜ್ಯವನ್ನು ಮೊದಲ ಸ್ಥಾನದಲ್ಲಿರಿಸಿದ್ದಾರೆ. ಉದ್ಯೋಗಕ್ಕೆ ಬೇಡಿಕೆಯಿಟ್ಟವರ ಮೇಲೆ ಹಲ್ಲೆ ಮಾಡುವಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ, ನ್ಯಾಯಾಂಗ ನಿಂದನೆಯಲ್ಲಿ ರಾಜ್ಯ ಬಿಜೆಪಿ ಆಡಳಿತದ ಅಡಿಯಲ್ಲಿ ಮೊದಲ ಸ್ಥಾನದಲ್ಲಿದೆ" ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಯಾದವ್, ಮುಖ್ಯಮಂತ್ರಿಗೆ ಲ್ಯಾಪ್ಟಾಪ್ ಬಳಸುವುದಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆ, ಕೃಷಿ ಕಾಯ್ದೆಗಳ ವಿರುದ್ಧ ಸಮಾಜವಾದಿ ಪಕ್ಷ ಗುರುವಾರ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ "ಸೈಕಲ್ ಯಾತ್ರೆ" ಆರಂಭಿಸಿದೆ. ಲಖ್ನೋದಲ್ಲಿನ ಪಕ್ಷದ ಪ್ರಧಾನ ಕಚೇರಿಯಿಂದ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದ ಅಖಿಲೇಶ್ ಯಾದವ್ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.
ಸೈಕಲ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಲಖ್ನೋ ಹಾಗೂ ಇತರೆ ಜಿಲ್ಲೆಗಳ ಪಕ್ಷದ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಬಯಸುವ ಎಲ್ಲ ಸ್ಥಳೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಸಮಾಜವಾದಿ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕರೆ ಈಚೆಗೆ ನೀಡಿದ್ದರು. ರಾಜ್ಯದಲ್ಲಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವುದಕ್ಕೆ ಸಿದ್ಧರಾದ ಎಲ್ಲ ಸಣ್ಣ ಮತ್ತು ಅತಿಸಣ್ಣ ಪಕ್ಷಗಳಿಗೂ ಸಮಾಜವಾದಿ ಪಕ್ಷದ ಬಾಗಿಲು ತೆರದಿರುತ್ತದೆ. ಯಾವಾಗ ಬೇಕಿದ್ದರೂ ನೀವು ನಮ್ಮೊಂದಿಗೆ ಕೈಜೋಡಿಸಲು ಬರಬಹುದು. ಈಗಾಗಲೇ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷಗಳ ಜೊತೆಗೂ ನಾವು ಒಂದಾಗಿ ಮುಂದೆ ಸಾಗುತ್ತೇವೆ," ಎಂದು ಅಖಿಲೇಶ್ ಘೋಷಿಸಿದ್ದರು.