ಉತ್ತರ ಪ್ರದೇಶದಲ್ಲಿ ರೈತ ವಿರೋಧಿ ಸರ್ಕಾರ ಕಿತ್ತೆಸೆಯುವುದೇ ನಮ್ಮ ಗುರಿ: ಅಖಿಲೇಶ್ ಯಾದವ್
ಲಕ್ನೋ, ಅಕ್ಟೋಬರ್ 14: ''ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022ರಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ತೆಗೆದು ಹಾಕುವುದೇ ತಮ್ಮ ಮುಖ್ಯ ಉದ್ದೇಶವಾಗಿದೆ,'' ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಬಿಸಿ ಮತಗಳತ್ತ ಅಖಿಲೇಶ್ ಚಿತ್ತ, ಉತ್ತರಪ್ರದೇಶ ಚುನಾವಣೆ ಹೊಸ ರಣತಂತ್ರ
"ಬಿಜೆಪಿ ಸರ್ಕಾರದ ವಿರುದ್ಧದ ನಿರಾಶೆಯನ್ನು ನೋಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮತದಾರರು ನಮ್ಮ ಪಕ್ಷವನ್ನು 400 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಬಹುದು. ಬಿಜೆಪಿ ಸರ್ಕಾರವನ್ನು ತೆಗೆದು ಹಾಕುವುದೇ ನಮ್ಮ ಗುರಿ," ಎಂದು ಅಖಿಲೇಶ್ ಯಾದವ್ ಹೇಳಿದರು.
ಶೀಘ್ರದಲ್ಲೇ ನಕಲಿ ಬಾಬಾರನ್ನು ತೆಗೆದು ಹಾಕಲಾಗುವುದು:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ನಕಲಿ ಬಾಬಾರನ್ನು ಶೀಘ್ರದಲ್ಲೇ ಅಧಿಕಾರದಿಂದ ತೆಗೆದು ಹಾಕಲಾಗುವುದು ಎಂದು ಕಿಡಿ ಕಾರಿದರು. ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯುಪಿ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷವೂ ವಿರೋಧ ವ್ಯಕ್ತಪಡಿಸಿತ್ತು. ಅಕ್ಟೋಬರ್ 3ರಂದು ನಡೆದ ಘಟನೆಯಲ್ಲಿ ನಾಲ್ವರು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಪ್ರಾಣ ಬಿಟ್ಟಿದ್ದರು.
ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅಖಿಲೇಶ್:
ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಹಿಂಸಾಚಾರ ನಡೆದ ಕೆಲವು ದಿನಗಳ ನಂತರ ಅಖಿಲೇಶ್ ಯಾದವ್ ಟಿಕುನಿಯಾ ಗ್ರಾಮದ ಸಂತ್ರಸ್ತ ರೈತರ ಕುಟುಂಬಗಳಿಗೆ ಭೇಟಿ ನೀಡಲು ತೆರಳಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದು, ಖಾಕಿ ಕ್ರಮವನ್ನು ಅಖಿಲೇಶ್ ಯಾದವ್ ಖಂಡಿಸಿದ್ದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು "ರೈತ ವಿರೋಧಿ" ಸರ್ಕಾರ ಎಂದು ಆರೋಪಿಸಿದ್ದರು.
ಲಖೀಂಪುರ್ ಖೇರಿ ಘಟನೆ ಬಗ್ಗೆ ಉಲ್ಲೇಖ:
ಕಳೆದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖೀಂಪುರ್ ಖೇರಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ವಾಪಸ್ ಆಗುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಬೆಂಗಾವಲಿನಲ್ಲಿದ್ದ ವಾಹನವನ್ನು ಹರಿಸಲಾಗಿದೆ. ಈ ವೇಳೆ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ರೈತರು ಹೇಳಿಕೊಂಡಿದ್ದಾರೆ. ಸಚಿವರು ಹಾಗೂ ಅವರ ಪುತ್ರ ತಮ್ಮ ಮೇಲಿನ ಆರೋಪವನ್ನು ಪದೇಪದೆ ನಿರಾಕರಿಸುತ್ತಿದ್ದಾರೆ. ಅದಾಗ್ಯೂ ಪೊಲೀಸರು ಆರೋಪಿ ಸ್ಥಾನದಲ್ಲಿರುವ ಸಚಿವರ ಪುತ್ರ ಆಶಿಶ್ ಮಿಶ್ರಾರನ್ನು ಬಂಧಿಸಿರುವ ಬಗ್ಗೆ ಅಖಿಲೇಶ್ ಯಾದವ್ ಉಲ್ಲೇಖಿಸಿದ್ದಾರೆ.
ಬಿಜೆಪಿಯದ್ದು ರೈತ ವಿರೋಧಿ ಸರ್ಕಾರ:
ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ರೈತರು ಮತ್ತು ಸಾರ್ವಜನಿಕರನ್ನು ವಂಚಿಸುವ ಕೆಲಸ ಮಾಡುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಒಂದು ಕಡೆಯಲ್ಲಿ ಬಿಜೆಪಿ ಕಾರ್ಯಕರ್ತರು ರೈತರ ಮೇಲೆಯೇ ವಾಹನಗಳಲ್ಲಿ ಹತ್ತಿಸಿಕೊಂಡು ಹೋಗುತ್ತಾರೆ. ಇನ್ನೊಂದು ಕಡೆಯಲ್ಲಿ ಗೊಬ್ಬರ ಕಳ್ಳತನ ಮತ್ತು ಕೀಟನಾಶಕಗಳ ಬೆಲೆ ಗಗನಮುಖಿ ಆಗುತ್ತಿರುವುದು ಬಿಜೆಪಿಯದ್ದು ರೈತ ವಿರೋಧಿ ಸರ್ಕಾರ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. "ಈ ಸರ್ಕಾರದ ಅಡಿಯಲ್ಲಿ, ಹಣದುಬ್ಬರ ಹೆಚ್ಚಾಗಿದೆ, ನಿರುದ್ಯೋಗ ಹೆಚ್ಚಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ, ಅಪರಾಧ ಹೆಚ್ಚಾಗಿದೆ, ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ" ಎಂದು ಅವರು ಹೇಳಿದ್ದಾರೆ.
ಯಾವುದೇ ದೊಡ್ಡ ಪಕ್ಷಗಳೊಂದಿಗೆ ಮೈತ್ರಿಯಿಲ್ಲ:
2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಇತರೆ ಸಣ್ಣ ಪಕ್ಷಗಳೊಂದಿಗೆ ಕೈಜೋಡಿಸಿ ಚುನಾವಣೆ ಎದುರಿಸಲಿದೆ. ಇದರ ಹೊರತಾಗಿ ಯಾವುದೇ ರಾಷ್ಟ್ರೀಯ ಪಕ್ಷಗಳೊಂದಿಗೆ ಕೈಜೋಡಿಸುವುದಿಲ್ಲ. ಮುಂದಿನ ವರ್ಷದ ಚುನಾವಣೆಗಾಗಿ ರಾಜ್ಯದಲ್ಲಿ "ವಿಜಯ ರಥಯಾತ್ರೆ" ನಡೆಸುವುದಾಗಿ ಅಖಿಲೇಶ್ ಯಾದವ್ ಹೇಳಿದ್ದಾರೆ.
2017ರ ಉತ್ತರ ಪ್ರದೇಶ ಚುನಾವಣೆ ಫಲಿತಾಂಶ:
ಕಳೆದ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ಬಿಜೆಪಿ 312 ರಲ್ಲಿ ಗೆಲುವು ದಾಖಲಿಸಿತ್ತು. ಈ ಪಕ್ಷ ಶೇ. 39.67ರಷ್ಟು ಮತವನ್ನು ಪಡೆದುಕೊಂಡಿತ್ತು. ಅಂದು ಸಮಾಜವಾದಿ ಪಕ್ಷವು 47 ಸ್ಥಾನಗಳನ್ನು, ಬಹುಜನ ಸಮಾಜ ಪಕ್ಷ (BSP) 19 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.