ವಿಡಿಯೋ: ಟಿಕೆಟ್ ಸಿಗದೆ ಬೇಸರಗೊಂಡ ಎಸ್ಪಿ ಕಾರ್ಯಕರ್ತ ಆತ್ಮಾಹುತಿಗೆ ಯತ್ನ
ಲಕ್ನೋ, ಜನವರಿ 16: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಭಾನುವಾರ (ಜನವರಿ 16) ಲಕ್ನೋದಲ್ಲಿ ಪಕ್ಷದ ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಲಕ್ನೋ ಪೊಲೀಸರು ಆತನ ಪ್ರಾಣ ಉಳಿಸಿದ್ದಾರೆ. ಲಕ್ನೋದಲ್ಲಿರುವ ಎಸ್ಪಿ ಪಕ್ಷದ ಪ್ರಧಾನ ಕಚೇರಿಯ ಮುಂದೆ ಕಾರ್ಯಕರ್ತ ಆದಿತ್ಯ ಠಾಕೂರ್ ಟಿಕೆಟ್ ಸಿಗದೆ ಕೋಪಗೊಂಡು ಆತ್ಮಾಹುತಿಗೆ ಯತ್ನಿಸಿದರು. ಆದರೆ ಘಟನೆಗೂ ಮುನ್ನ ಪೊಲೀಸರು ಆತನನ್ನು ವಶಕ್ಕೆ ಪಡೆದು ಬುದ್ಧಿಮಾತು ಹೇಳಿದ್ದಾರೆ. ಆದಿತ್ಯ ಠಾಕೂರ್ ಅವರು ಅಲಿಗಢದ ಚರ್ರಾದಿಂದ ಟಿಕೆಟ್ ಬಯಸಿದ್ದರು. ಆದರೆ ಎಸ್ಪಿ ತಮಗೆ ಟಿಕೆಟ್ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಯತ್ನ
ಮಾಧ್ಯಮ ವರದಿಗಳ ಪ್ರಕಾರ, ಅಲಿಘರ್ನ ಎಸ್ಪಿ ಕಾರ್ಯಕರ್ತ ಆದಿತ್ಯ ಠಾಕೂರ್ ಅವರು ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿರುವ ಎಸ್ಪಿ ಪಕ್ಷದ ಪ್ರಧಾನ ಕಚೇರಿಯ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಸ್ಥಳದಲ್ಲಿದ್ದ ಜನರು ಮತ್ತು ಪೊಲೀಸ್ ಅಧಿಕಾರಿಗಳು ಸಕಾಲದಲ್ಲಿ ಆತನನ್ನು ತಡೆದು ಜೀವ ಉಳಿಸಿದ್ದಾರೆ. ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮನನೊಂದು ಭಾವುಕರಾದ ಆದಿತ್ಯ ಠಾಕೂರ್
ಭಾವುಕರಾದ ಆದಿತ್ಯ ಠಾಕೂರ್ ಅವರು ಅಳುತ್ತಾ 'ಎಸ್ಪಿ ಕಚೇರಿಯ ಹೊರಗೆ ನನ್ನ ಪ್ರಾಣ ತೆಗೆಯುತ್ತೇನೆ...' ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಭಾವೋದ್ವೇಗಕ್ಕೆ ಒಳಗಾದ ಆದಿತ್ಯ ಠಾಕೂರ್, "ಏನೇ ಆಗಲಿ ಇಂದು ಇಲ್ಲಿಯೇ (ಎಸ್ಪಿ ಕಚೇರಿ) ಪ್ರಾಣ ತೆಗೆದುಕೊಳ್ಳುತ್ತೇನೆ. ನನ್ನನ್ನು ಜೈಲಿಗೆ ಹಾಕಿದರೂ ನನ್ನನ್ನು ಮಾತ್ರ ತಡೆಯಲು ಸಾಧ್ಯವಿಲ್ಲ. ನನಗೆ ನ್ಯಾಯ ಬೇಕು" ಎಂದು ಆಕ್ರೋಶಗೊಂಡಿದ್ದಾರೆ.
ನನಗೆ ಟಿಕೆಟ್ ನೀಡಿಲ್ಲ ಯಾಕೆ?
ವೀಡಿಯೊದಲ್ಲಿ, ಠಾಕೂರ್ ಪಕ್ಷವು ತನ್ನ ಟಿಕೆಟ್ ಅನ್ನು ಲೂಟಿ ಮಾಡಿ ಅದನ್ನು ಹೊರಗಿನವರಿಗೆ ನೀಡಿದೆ ಎಂದು ಆರೋಪಿಸುವುದನ್ನು ಕೇಳಬಹುದು. ಅವರು ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಭಾವುಕರಾದ ಆದಿತ್ಯ ಠಾಕೂರ್ ಅವರು ಐದು ವರ್ಷಗಳ ಕಾಲ ಪಕ್ಷಕ್ಕಾಗಿ ಶ್ರಮಿಸಿದರು ಮತ್ತು ಈಗ ಅವರ ಟಿಕೆಟ್ ಕಡಿತಗೊಂಡಿದೆ ಎಂದು ಆರೋಪಿಸಿದರು.
|
ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ
2006ರಲ್ಲಿ ಎಸ್ಪಿ ತೊರೆದು ಮಾಯಾವತಿಯವರ ಬಿಎಸ್ಪಿ ಸೇರಿದ ದಾರಾ ಸಿಂಗ್ ಚೌಹಾಣ್ 2017ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಆದರೀಗ 15 ವರ್ಷಗಳ ನಂತರ ಮತ್ತೆ ಎಸ್ಪಿ ಸೇರಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ನಂತರ ಬಿಜೆಪಿ ತೊರೆಯುವ ಮೂಲಕ ಕಮಲಕ್ಕೆ ದೊಡ್ಡ ಪೆಟ್ಟು ನೀಡಿದ್ದ ಮಾಜಿ ಸಚಿವ ದಾರಾ ಸಿಂಗ್ ಚೌಹಾಣ್ ಭಾನುವಾರ ತವರು ಮನೆಗೆ ಮರಳಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಇಂದು ಅವರು ಮತ್ತೆ ಸಮಾಜವಾದಿ ಪಕ್ಷಕ್ಕೆ ಸೇರಿದರು.
|
ಫೆಬ್ರವರಿ 10ರಿಂದ 7 ಹಂತದ ಮತದಾನ
2022 ರ ಯುಪಿ ಚುನಾವಣೆಯನ್ನು ಏಳು ಹಂತಗಳಲ್ಲಿ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಉತ್ತರ ಪ್ರದೇಶದಲ್ಲಿ ಮತದಾನ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ನಡೆಯಲಿದೆ. ಉತ್ತರ ಪ್ರದೇಶ ಚುನಾವಣೆ 2022 ಫಲಿತಾಂಶವನ್ನು ಮಾರ್ಚ್ 10 ರಂದು ಪ್ರಕಟಿಸಲಾಗುವುದು.