ಆದಿತ್ಯಾನಾಥ್ ವಿರುದ್ಧ ಕಣಕ್ಕಿಳಿಯಲು ಮಾಜಿ ಐಪಿಎಸ್ ಅಧಿಕಾರಿ ಸಜ್ಜು
ಲಖ್ನೋ, ಆಗಸ್ಟ್ 14: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಉತ್ತರ ಪ್ರದೇಶ ಅಣಿಯಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ವರದಿ ಮಾಡಿದ್ದು, ಸಿಎಂ ಯೋಗಿ ಆದಿತ್ಯಾನಾಥ್ ಕೂಡ ಗೆಲುವಿನ ತಯಾರಿಯಲ್ಲಿದ್ದಾರೆ. ಇದೀಗ ಯೋಗಿ ಆದಿತ್ಯಾನಾಥ್ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.
ಉತ್ತರ ಪ್ರದೇಶ ಚುನಾವಣೆಗೂ ಮುನ್ನ, 3 ಕೃಷಿ ಕಾನೂನುಗಳು ವಾಪಸ್: ಬಿಜೆಪಿ ನಾಯಕ
2020ರ ಮಾರ್ಚ್ ತಿಂಗಳಿನಲ್ಲಿ ಅವಧಿಗೆ ಮುನ್ನವೇ ಸೇವೆಗೆ ರಾಜೀನಾಮೆ ನೀಡಿದ್ದ ಅಮಿತಾಭ್ ಠಾಕೂರ್ ಯೋಗಿ ಆದಿತ್ಯಾನಾಥ್ ವಿರುದ್ಧ ಸ್ಪರ್ಧಿಸಲಿರುವುದಾಗಿ ಘೋಷಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ಪತ್ನಿ ನೂತನ್ ಠಾಕೂರ್, ಈ ಸ್ಪರ್ಧೆ ತನ್ನ ಪತಿಯ ತತ್ವ ಸಿದ್ಧಾಂತಗಳ ಮೇಲೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
"ಯೋಗಿ ಆದಿತ್ಯಾನಾಥ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ, ದಮನಕಾರಿ, ಕಿರುಕುಳ ಹಾಗೂ ತಾರತಮ್ಯದಿಂದ ಕೂಡಿದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅಮಿತಾಭ್, ಆದಿತ್ಯಾನಾಥ್ ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ನೂತನ್ ಠಾಕೂರ್ ತಿಳಿಸಿದ್ದಾರೆ.
"ಮುಖ್ಯಮಂತ್ರಿಗಳ ವಿರುದ್ಧ ಸ್ಪರ್ಧೆಗೆ ಇಳಿಯುವಂತೆ ನನ್ನ ಸಹವರ್ತಿಗಳು ಪ್ರೋತ್ಸಾಹ ನೀಡಿದರು. ಎಲ್ಲಾ ರೀತಿಯಿಂದಲೂ ಗಂಭೀರವಾಗಿ ಆಲೋಚಿಸಿದ್ದು, ಕೊನೆಗೆ ಸ್ಪರ್ಧೆಗೆ ಇಳಿಯಲು ತೀರ್ಮಾನಿಸಿದೆ" ಎಂದು ಠಾಕೂರ್ ಹೇಳಿದ್ದಾರೆ.
"ಇದು ಕೇವಲ ಚುನಾವಣೆಯಲ್ಲ. ತತ್ವ ಸಿದ್ಧಾಂತಗಳಿಗಾಗಿ ನಡೆಯುತ್ತಿರುವ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಯೋಗಿ ಆದಿತ್ಯಾನಾಥ್ ತಪ್ಪು ನಿರ್ಣಯಗಳ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ" ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಸಮರ!
2028ರಲ್ಲಿ ನಿವೃತ್ತರಾಗಬೇಕಿದ್ದ ಅಮಿತಾಬ್ ಠಾಕೂರ್ಗೆ 2021ರ ಮಾರ್ಚ್ 23ರಲ್ಲಿ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. ಮುಲಾಯಂ ಸಿಂಗ್ ಯಾದವ್ ಹಾಗೂ ಅಮಿತಾಭ್ ನಡುವಿನ ವಾದ ವಿವಾದಗಳ ಆಡಿಯೋ ವೈರಲ್ ಆದ ನಂತರ ಅಮಿತಾಭ್ ಅವರನ್ನು ಅಮಾನತು ಮಾಡಲಾಗಿತ್ತು. ಮುಲಾಯಂ ಸಿಂಗ್ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಮಿತಾಭ್ ಆರೋಪಿಸಿದ್ದರು. ಅಮಿತಾಭ್ ವಿರುದ್ಧ ಐದು ಇಲಾಖಾ ಮಟ್ಟದ ಕ್ರಮಗಳನ್ನು ಆದೇಶಿಸಲಾಗಿತ್ತು. ಭ್ರಷ್ಟಾಚಾರ ಸಂಬಂಧಿ ಹಲವು ಆರೋಪಗಳೂ ಇವರ ವಿರುದ್ಧ ಕೇಳಿಬಂದಿದ್ದವು.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಮ್) 2022ರ ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸುತ್ತಿದೆ.
ಬಿಜೆಪಿ ವಿರುದ್ಧ ತೊಡೆ ತಟ್ಟಿರುವ ಅಖಿಲೇಶ್ ಯಾದವ್: ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಬಯಸುವ ಎಲ್ಲ ಸ್ಥಳೀಯ ಪಕ್ಷಗಳಿಗೆ ಮತ್ತು ನಾಯಕರಿಗೆ ಸಮಾಜವಾದಿ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕರೆ ನೀಡಿದ್ದಾರೆ.
"ರಾಜ್ಯದಲ್ಲಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವುದಕ್ಕೆ ಸಿದ್ಧರಾದ ಎಲ್ಲ ಸಣ್ಣ ಮತ್ತು ಅತಿಸಣ್ಣ ಪಕ್ಷಗಳಿಗೂ ಕೂಡಾ ಸಮಾಜವಾದಿ ಪಕ್ಷದ ಬಾಗಿಲು ತೆರದಿರುತ್ತದೆ. ಯಾವಾಗ ಬೇಕಿದ್ದರೂ ನೀವು ನಮ್ಮೊಂದಿಗೆ ಕೈಜೋಡಿಸಲು ಬರಬಹುದು. ಈಗಾಗಲೇ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷಗಳ ಜೊತೆಗೂ ನಾವು ಒಂದಾಗಿ ಮುಂದೆ ಸಾಗುತ್ತೇವೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಕಳೆದ 2017ರಲ್ಲಿ ಭಾರತೀಯ ಜನತಾ ಪಕ್ಷ ಹೊರಡಿಸಿದ ಚುನಾವಣಾ ಪ್ರಣಾಳಿಕೆಯನ್ನು ಬಿಜೆಪಿಗರೇ ನೋಡಿದಂತಿಲ್ಲ. ರೈತರ ಆದಾಯ ಇಮ್ಮಡಿಯಾಗಿಲ್ಲ. ಗಂಗಾನದಿ ಶುದ್ಧೀಕರಣ ಮತ್ತು ತೈಲ ಬೆಲೆ ಏರಿಕೆ ಬಗ್ಗೆ ಸ್ವತಃ ಬಿಜೆಪಿಗರಿಗೇ ತೃಪ್ತಿಯಿಲ್ಲ. ಕೊವಿಡ್-19 ಕಾಲದಲ್ಲಿ ಸರ್ಕಾರದಿಂದ ಯಾವುದೇ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಗಲಿಲ್ಲ. ಬದಲಿಗೆ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಸ್ಥಾಪಿಸಿದ ಮೂಲಭೂತ ಸೌಕರ್ಯಗಳನ್ನೇ ಬಳಸಿಕೊಳ್ಳಲಾಯಿತು. ಅವರು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಆರಂಭಿಸಿದರು, ಆದರೆ ಅದರ ಪೈಕಿ 9ನೇ ಮಹಡಿಯ ರಾಮಮನೋಹರ್ ಲೋಹಿಯಾ ವೈದ್ಯಕೀಯ ಸಂಸ್ಥೆ ಮಾತ್ರ ಕಾರ್ಯೋನ್ಮುಖವಾಗಿದ್ದು, ಅದನ್ನು ಎಸ್ ಪಿ ಸರ್ಕಾರದ ಅವಧಿಯಲ್ಲೇ ಸ್ಥಾಪಿಸಲಾಗಿತ್ತು," ಎಂದು ಅಖಿಲೇಶ್ ಯಾದವ್ ದೂರಿದ್ದಾರೆ.